ಬೆಂಗಳೂರು: ಬಿಡದಿ ಟೌನ್ ಶಿಪ್ ನಿರ್ಮಾಣ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಾಳೆ ಭೈರಮಂಗಲಕ್ಕೆ ಹೋಗ್ತಾ ಇದ್ದಾರೆ. ಸಿಎಂ ಡಿ.ಕೆ ಶಿವಕುಮಾರ್ ಅವರು ಭೈರಮಂಗಲಕ್ಕೆ ಬರಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಹ್ವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮರಸ್ವಾಮಿ, ಸಿಎಂ ಅವರು ವಿಧಾನಸೌಧದಲ್ಲಿ 4 ಗೋಡೆ ಮಧ್ಯೆ ಚರ್ಚೆ ಮಾಡೋಣ ಅಂತ ಪತ್ರ ಬರೆದಿದ್ದರು. ಕುಮಾರಸ್ವಾಮಿ ಅವರು ರೈತರ ಸಮ್ಮುಖದಲ್ಲಿ ಚರ್ಚೆಗೆ ಕರೆದಿದ್ದಾರೆ. 4 ಗೋಡೆ ಮಧ್ಯೆ ಬೇಡ, ರೈತರ ಮಧ್ಯೆ ಕೂತು ಸಮಸ್ಯೆ ಪರಿಹಾರ ಮಾಡೋಣ ಅಂತ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದಾರೆ. ಸಿಎಂ ಅವರು ಕುಮಾರಸ್ವಾಮಿ ಅವರ ಪತ್ರಕ್ಕೆ ರಿಪ್ಲೈ ಕೊಟ್ಟಿಲ್ಲ. ಸಿಎಂ ಬ್ಯುಸಿ ಇರ್ತಾರೆ ಎಂದರು.
ಕುಮಾರಸ್ವಾಮಿ ರೈತರ ಪರ ಇರೋ ವ್ಯಕ್ತಿ. ನಾಳೆ ಕುಮಾರಸ್ವಾಮಿ ಅವರು ಭೈರಮಂಗಲ ಸರ್ಕಲ್ ನಲ್ಲಿ ರೈತರ ಜೊತೆ ಕೂರುತ್ತಾರೆ. ಸಿಎಂ ಅವರು ಬಂದು ಕೂತು ರೈತರೊಂದಿಗೆ ಮಾತಾಡಲಿ ಎಂದರು.
ಪಹಣಿ ಇರೋರು, ಸಮಸ್ಯೆ ಇರೋ ರೈತರನ್ನ ಕೂರಿಸಿಕೊಳ್ಳಲಿ. ಯಾವುದೇ, ಸಂಘರ್ಷ ಗಲಭೆಗೆ ಅವಕಾಶ ಇಲ್ಲ. ರೈತರ ಸಮಸ್ಯೆ ಸುಸೂತ್ರವಾಗಿ ಪರಿಹಾರ ಆಗಲಿ ಎಂಬುದು ನಮ್ಮೆಲ್ಲರ ಆಶಯ ಎಂದರು.