ಖ್ಯಾತ ವೆಬ್ ಸರಣಿ ‘ಮಿರ್ಜಾಪುರ’ ಹಾಗೂ ‘ಲಾಪತಾ ಲೇಡೀಸ್’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಟ ಸತೇಂದ್ರ ಸೋನಿ, ತಮ್ಮ ಮುಂಬರುವ ‘ಪೇಡ್ ಪಾಲ್ಕಿ’ ಸಿನಿಮಾದ ನಿರ್ಮಾಪಕರ ವಿರುದ್ಧ ಅತ್ಯಂತ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರು ಹಾಕುತ್ತಾ ವಿಡಿಯೋ ಹಂಚಿಕೊಂಡಿರುವ ಅವರು, ತಮಗೆ ಬರಬೇಕಾಗಿದ್ದ ಸಂಭಾವನೆಯನ್ನು ನೀಡದೆ ವಂಚಿಸಲಾಗಿದೆ ಮತ್ತು ಹಣ ಕೇಳಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಚಿತ್ರೀಕರಣದ ಸೆಟ್ನಲ್ಲಿ ನಡೆದಿದ್ದೇನು?
‘ಅಜ್ಮೀರ್ 92’ ಖ್ಯಾತಿಯ ನಿರ್ದೇಶಕ ಮತ್ತು ನಿರ್ಮಾಪಕ ಪುಷ್ಪೇಂದ್ರ ಸಿಂಗ್ ಅವರ ‘ಪೇಡ್ ಪಾಲ್ಕಿ’ ಚಿತ್ರದ ಶೂಟಿಂಗ್ಗಾಗಿ ಸತೇಂದ್ರ ಸೋನಿ ಮಧ್ಯಪ್ರದೇಶಕ್ಕೆ ತೆರಳಿದ್ದರು. ಚಿತ್ರೀಕರಣಕ್ಕೂ ಮುನ್ನ ತಮಗೆ ಕೇವಲ 50 ಸಾವಿರ ರೂಪಾಯಿ ಮುಂಗಡ ಹಣ ನೀಡಲಾಗಿತ್ತು ಮತ್ತು ಬಾಕಿ ಮೊತ್ತವನ್ನು ಶೂಟಿಂಗ್ ಸಂದರ್ಭದಲ್ಲಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ನಟ ತಿಳಿಸಿದ್ದಾರೆ. ಆದರೆ, ತಮ್ಮ ಭಾಗದ ಬಹುತೇಕ ಚಿತ್ರೀಕರಣ ಮುಗಿದ ನಂತರ ಬಾಕಿ ಸಂಭಾವನೆ ಕೇಳಿದ್ದಕ್ಕೆ, ಚಿತ್ರತಂಡವು ಇದ್ದಕ್ಕಿದ್ದಂತೆ ಇವರ ಶೂಟಿಂಗ್ ಮುಕ್ತಾಯಗೊಳಿಸಿ ಕೇವಲ 10 ನಿಮಿಷಗಳಲ್ಲಿ ಹೋಟೆಲ್ ರೂಮ್ ಖಾಲಿ ಮಾಡುವಂತೆ ಸೂಚಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಕಿಡ್ನ್ಯಾಪ್ ಮಾಡಲು ಯತ್ನಿಸಿದರೇ ನಿರ್ದೇಶಕ ದಂಪತಿ?
ಈ ಘಟನೆಯ ಕುರಿತು ಮತ್ತಷ್ಟು ಸ್ಫೋಟಕ ಮಾಹಿತಿ ನೀಡಿರುವ ಸತೇಂದ್ರ, ನಿರ್ದೇಶಕ ಪುಷ್ಪೇಂದ್ರ ಸಿಂಗ್ ಮತ್ತು ಅವರ ಪತ್ನಿ ಪ್ರಗತಿ ಚೌಹಾಣ್ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. “ನಾನು ಮತ್ತು ಸಹ ಕಲಾವಿದರಾದ ಶ್ರೀಧರ್ ದುಬೆ ಹಾಗೂ ಪಂಕಜ್ ಶರ್ಮಾ ನಡೆದುಕೊಂಡು ಹೋಗುತ್ತಿದ್ದಾಗ, ನಿರ್ದೇಶಕ ಮತ್ತು ಅವರ ಪತ್ನಿ ಕಾರಿನಲ್ಲಿ ಬಂದು ನಮ್ಮನ್ನು ಹಿಂಬಾಲಿಸಿದರು. ನನ್ನನ್ನು ನೋಡಿದ ತಕ್ಷಣ ಇಬ್ಬರೂ ರಸ್ತೆ ಮಧ್ಯದಲ್ಲೇ ನನ್ನ ಮೇಲೆ ಹಲ್ಲೆ ನಡೆಸಲು ಆರಂಭಿಸಿದರು. ನನ್ನನ್ನು ರಕ್ಷಿಸಲು ಶ್ರೀಧರ್ ದುಬೆ ಮುಂದೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಲಾಯಿತು. ನಂತರ ಪ್ರಗತಿ ಚೌಹಾಣ್ ನನ್ನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಕಾರಿನ ಹಿಂಬದಿಯ ಸೀಟಿನಲ್ಲಿ ಕೂರಿಸಿದರು ಮತ್ತು ನನ್ನ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದರು. ಆ ಕ್ಷಣದಲ್ಲಿ ನನ್ನನ್ನು ಯಾರೋ ಅಪಹರಣ ಮಾಡುತ್ತಿದ್ದಾರೆ ಎಂದೇ ನನಗೆ ಅನಿಸಿತು” ಎಂದು ಸತೇಂದ್ರ ಸೋನಿ ಬರೆದುಕೊಂಡಿದ್ದಾರೆ.
“ಶ್ರೀಧರ್ ಅವರನ್ನೂ ಬಲವಂತವಾಗಿ ಗಾಡಿಯಲ್ಲಿ ಕೂರಿಸಲಾಯಿತು, ಈ ವೇಳೆ ಅವರ ಶರ್ಟ್ ಕೂಡ ಹರಿದುಹೋಗಿತ್ತು. ಕಾರಿನಲ್ಲಿ ಕೂರಿಸಿದ ನಂತರ ಅವಾಚ್ಯ ಶಬ್ದಗಳಿಂದ ನಿಂದಿಸಿದ ದಂಪತಿ, ಇದು ನಮ್ಮ ಇಲಾಖೆ (ಪ್ರದೇಶ) ಎಂದು ಬೆದರಿಕೆ ಹಾಕಿದರು” ಎಂದು ನಟ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಮುಂಬೈ ತಲುಪಿದ ನಟ
ಈ ದಂಪತಿ ವಂಚಕರಾಗಿದ್ದು, ಇವರ ಜೊತೆ ಯಾರೂ ಕೆಲಸ ಮಾಡಬೇಡಿ ಎಂದು ಸತೇಂದ್ರ ಸೋನಿ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಹತ್ತಾರು ಸಂಕಷ್ಟಗಳನ್ನು ಎದುರಿಸಿ ತಾವೀಗ ಸುರಕ್ಷಿತವಾಗಿ ಮುಂಬೈ ತಲುಪಿರುವುದಾಗಿ ನಟ ಸ್ಪಷ್ಟಪಡಿಸಿದ್ದಾರೆ. ಆದರೆ, ನಟನ ಈ ಆಘಾತಕಾರಿ ಆರೋಪಗಳ ಕುರಿತು ‘ಪೇಡ್ ಪಾಲ್ಕಿ’ ಚಿತ್ರತಂಡದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
