ಸಾಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಬಡವರು, ಸಣ್ಣ ಹಿಡುವಳಿದಾರರು ಹಾಗೂ ರೈತರಿಗೆ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕು ರೂಪಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಸಂಸ್ಥೆಯ ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ ಸುವರ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಅಧ್ಯಕ್ಷರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಇಂದು ಹಳ್ಳಿಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಕ್ರಾಂತಿಯಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಆರ್ಥಿಕತೆಗೆ ಬ್ಯಾಂಕಿಂಗ್ ಬಲ
ಬ್ಯಾಂಕಿಂಗ್ ಸೌಲಭ್ಯಗಳನ್ನು ನೇರವಾಗಿ ಬಡವರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ಜನರಲ್ಲಿ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲಾಗುತ್ತಿದೆ. ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಬ್ಯಾಂಕ್ಗಳ ಸಹಕಾರದೊಂದಿಗೆ ಬಡವರಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದ್ದು, ಇದು ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ನೇತೃತ್ವದಲ್ಲಿ ಜಾರಿಯಾಗಿರುವ ಶೈಕ್ಷಣಿಕ ನೆರವು ಯೋಜನೆಗಳು ಅಸಹಾಯಕ ಕುಟುಂಬಗಳ ಬದುಕಿಗೆ ದೊಡ್ಡ ಆಸರೆಯಾಗಿವೆ.
ಸಮಾಜಮುಖಿ ಕಾರ್ಯಗಳು ಮತ್ತು ಮೂಲಸೌಕರ್ಯ ಕ್ರಾಂತಿ
ಸಂಸ್ಥೆಯು ಕೇವಲ ಆರ್ಥಿಕ ಸಬಲೀಕರಣಕ್ಕೆ ಸೀಮಿತವಾಗದೆ ಸಮಾಜದ ಸರ್ವಾಂಗೀಣ ಏಳಿಗೆಗಾಗಿ ಹಲವು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯಾದ್ಯಂತ ಗುರುತಿಸಲಾದ 20 ಸಾವಿರ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದ್ದು, 36 ಸಾವಿರ ವಿಶೇಷ ಚೇತನರಿಗೆ ಗಾಲಿ ಕುರ್ಚಿ ಹಾಗೂ 'ವಾತ್ಸಲ್ಯ' ಯೋಜನೆಯಡಿ 850 ಅನಾಥರಿಗೆ ಮನೆ ನಿರ್ಮಿಸಿಕೊಡಲಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಬೆಂಬಲವಾಗಿ 1,000 ಜ್ಞಾನದೀಪ ಶಿಕ್ಷಕರ ಒದಗಣೆ, 11 ಸಾವಿರ ಶಾಲೆಗಳಿಗೆ 77 ಸಾವಿರ ಬೆಂಚ್-ಡೆಸ್ಕ್ಗಳು ಹಾಗೂ ಪ್ರತಿವರ್ಷ 50 ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಸುಜ್ಞಾನ ನಿಧಿ' ಶಿಷ್ಯವೇತನ ನೀಡಲಾಗುತ್ತಿದೆ. ಜತೆಗೆ ಪರಿಸರ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ 1,000 ಕೆರೆಗಳ ಹೂಳೆತ್ತುವ ಕಾರ್ಯ, 6,000 ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, 5,000 ಹಾಲು ಉತ್ಪಾದಕರ ಸಂಘಗಳ ಕಟ್ಟಡ ಹಾಗೂ 3,000 ಸಮುದಾಯ ಭವನಗಳಿಗೆ ಅನುದಾನ ಒದಗಿಸಲಾಗಿದೆ.
ಮಹಿಳಾ ಸಬಲೀಕರಣ ಮತ್ತು ನಿಸ್ವಾರ್ಥ ನಾಯಕತ್ವ
ಸ್ವಸಹಾಯ ಸಂಘಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ, ಸಂಸ್ಕಾರ, ಸಾಮಾಜಿಕ ಜ್ಞಾನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಸಂಸ್ಕಾರ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಒಕ್ಕೂಟದ ಮುಖಂಡರು ಅಧಿಕಾರವನ್ನು ಚಲಾಯಿಸುವುದಕ್ಕಿಂತ ಹೆಚ್ಚಾಗಿ ನಿಸ್ವಾರ್ಥ ಸೇವಾ ಮನೋಭಾವದಿಂದ ಕಣ್ಣೀರು ಒರೆಸುವ ನಂದಾದೀಪಗಳಾಗಬೇಕು ಎಂದು ಅವರು ಕರೆ ನೀಡಿದರು. ಅಧಿಕಾರ ಶಾಶ್ವತವಲ್ಲ, ವ್ಯಕ್ತಿ ಮಾಗಿದಾಗ ಬಾಗುವ ತಾಳ್ಮೆ ಬೆಳೆಸಿಕೊಳ್ಳಬೇಕು ಹಾಗೂ ಇನ್ನೊಬ್ಬರ ಬೆಳವಣಿಗೆಗೆ ಅವಕಾಶ ನೀಡುವ ಮೂಲಕ ಸಂಸ್ಥೆಯ ಮೂಕವಾಣಿಯಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಗೌರವ ಉಪಸ್ಥಿತಿ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು. ಮೇಲ್ವಿಚಾರಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಧರನಗರ ವಲಯ ಮೇಲ್ವಿಚಾರಕ ಕಲ್ಲೇಶ್ ವಂದಿಸಿದರು. ಸಭೆಯಲ್ಲಿ ತಾಲೂಕಿನ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಹಾಗೂ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..