ಶಿವಮೊಗ್ಗ: ಸಾಗರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಖಾಸಗಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ಬದುಕುತ್ತಿರುವ ನೂರಾರು ಕುಟುಂಬಗಳು, ತಮಗೆ ಶಾಶ್ವತ ಹಕ್ಕುಪತ್ರ ವಿತರಿಸಿ ಸಕ್ರಮಗೊಳಿಸಬೇಕೆಂದು ಒತ್ತಾಯಿಸಿ ಸಾಗರದ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಎಸಿ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಕಲಂ 94 (ಡಿ) ಅಡಿಯಲ್ಲಿ ಹಕ್ಕುಪತ್ರಕ್ಕೆ ಒತ್ತಾಯ
ಸಾಗರ ತಾಲೂಕಿನ ಆಚಾಪುರ (ಮರುಫಾರ್ಮ್), ಮಲಂದೂರು (ದಾಸಕೊಪ್ಪ), ಯಡೇಹಳ್ಳಿ ಹಾಗೂ ಆನಂದಪುರ ಹೋಬಳಿಯ ತಳಗೇರಿ ಗ್ರಾಮಗಳ ನಿವಾಸಿಗಳು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94 (ಡಿ) ಅನ್ವಯ ತಮಗೆ ಹಕ್ಕುಪತ್ರ ನೀಡುವಂತೆ ಕೋರಿದ್ದಾರೆ. ಈ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ಸಮುದಾಯಗಳು ಕಳೆದ 70 ರಿಂದ 80 ವರ್ಷಗಳಿಂದ ಖಾಸಗಿ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿವೆ. ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು (Unrecorded Habitation) ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಿ ಹಕ್ಕುಪತ್ರ ನೀಡಲು ಸರ್ಕಾರದ ಸುತ್ತೋಲೆಗಳಲ್ಲಿ ಅವಕಾಶವಿದ್ದರೂ, ತಮಗೆ ಈವರೆಗೆ ಯಾವುದೇ ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಮಸೀದಿ ಜಾಗಕ್ಕೂ ಅಧಿಭೋಗದ ಹಕ್ಕಿಗೆ ಕೋರಿಕೆ
ಇದೇ ವೇಳೆ ಆಚಾಪುರ ಗ್ರಾಮದ ಜಾಮೀಯಾ ಮಸೀದಿ ಕಮಿಟಿಯು ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದೆ. ಗ್ರಾಮದ ಸುಮಾರು 400 ರಿಂದ 500 ನಮಾಜಿಗಳು ಕಳೆದ 60-70 ವರ್ಷಗಳಿಂದ ಪ್ರಾರ್ಥನೆ ಸಲ್ಲಿಸುತ್ತಿರುವ ಈದ್ಗಾ ಮೈದಾನ ಹಾಗೂ ಮಸೀದಿ ಜಾಗವು ಖಾಸಗಿ ಭೂಮಿಯಲ್ಲಿದ್ದು, ನಿಯಮಾನುಸಾರ ಈ ಜಾಗಕ್ಕೂ ಕಲಂ 94 (ಡಿ) ಅಡಿಯಲ್ಲಿ ಅಧಿಭೋಗದ ಹಕ್ಕುಪತ್ರವನ್ನು ನೋಂದಾಯಿಸಿಕೊಡಬೇಕೆಂದು ಕಮಿಟಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪತ್ರ ರವಾನೆ
ತಮ್ಮ ನಿವೇಶನಗಳನ್ನು ತುರ್ತಾಗಿ ಪರಿಶೀಲಿಸಿ ಸಕ್ರಮಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಈ ಎಲ್ಲಾ ಮನವಿ ಪತ್ರಗಳ ಪ್ರತಿಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೂ ಸೂಕ್ತ ಕ್ರಮಕ್ಕಾಗಿ ರವಾನಿಸಲಾಗಿದೆ.
ಇದು ಕೇವಲ ರಾಜಕೀಯ ಷಡ್ಯಂತ್ರ ಎಂದ ಶಾಸಕ ಗೋಪಾಲಕೃಷ್ಣ ಬೇಳೂರು
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಈ ಹಕ್ಕುಪತ್ರ ಹೋರಾಟದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಆರೋಪಿಸಿದ್ದಾರೆ.
ಸಾಗರ ತಾಲ್ಲೂಕು ಆನಂದಪುರ ಹೋಬಳಿಯ ಆಚಾಪುರ ಗ್ರಾಮದಲ್ಲಿರುವ ಜಮೀನು ವಿಷಯದಲ್ಲಿ ಹಕ್ಕುಪತ್ರಕ್ಕಾಗಿ ನಡೆಯುತ್ತಿರುವ ಹೋರಾಟ ಶುದ್ಧ ರಾಜಕೀಯ ಷಡ್ಯಂತ್ರ. ಈಗ ಹೋರಾಟ ಮಾಡುತ್ತಿರುವವರದ್ದೇ ಸರ್ಕಾರ ಅಧಿಕಾರದಲ್ಲಿದ್ದಾಗ ಇವರಿಗೆ ಯಾಕೆ ಹಕ್ಕುಪತ್ರ ಹಂಚಿಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಪ್ರಸ್ತುತ ಈ ಜಮೀನಿನ ವಿಷಯವು ನ್ಯಾಯಾಲಯದಲ್ಲಿದೆ (ಕೋರ್ಟ್ನಲ್ಲಿದೆ). ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಹಕ್ಕುಪತ್ರ ಹಂಚಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಜನರ ದಾರಿ ತಪ್ಪಿಸಿ ಸ್ಟ್ರೈಕ್ ಮಾಡುತ್ತಿರುವುದನ್ನು ನೋಡಿದರೆ, ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ಹೋರಾಟದ ನಾಟಕವಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈ ವಿಚಾರವಾಗಿ ಸ್ಥಳೀಯರು ನನ್ನ ಬಳಿ ಚರ್ಚೆ ನಡೆಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾರೂ ಇದರಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ನ್ಯಾಯಾಲಯದ ಅಂತಿಮ ತೀರ್ಪು ಬಂದ ನಂತರವೇ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..