ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಡಗರ ಮನೆಮಾಡಿದ್ದು, ಹಬ್ಬದ ಖರೀದಿಯ ಭರಾಟೆ ಜೋರಾಗಿದೆ. ಆದರೆ, ಮಳೆಯ ಕೊರತೆ ಹಾಗೂ ಬರದ ಹಿನ್ನೆಲೆಯಲ್ಲಿ ಇಳುವರಿ ಕುಸಿದಿರುವುದರಿಂದ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ಹಾಗೂ ಬೇಳೆ-ಕಾಳುಗಳ ದರ ತೀವ್ರವಾಗಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಪೀಣ್ಯ ಹಾಗೂ ಗಾಂಧಿ ಬಜಾರ್ಗಳಲ್ಲಿ ಹಬ್ಬದ ವ್ಯಾಪಾರಕ್ಕಾಗಿ ಜನಸಾಗರವೇ ಹರಿದುಬರುತ್ತಿದೆ. ಸಗಟು ದರದಲ್ಲೇ ಏರಿಕೆ ಕಂಡುಬಂದಿರುವ ಕಾರಣ ಚಿಲ್ಲರೆ ಮಾರುಕಟ್ಟೆಯಲ್ಲೂ ಎಲ್ಲ ವಸ್ತುಗಳ ಬೆಲೆ ಗಗನಮುಖಿಯಾಗಿದೆ.
ಹೂವುಗಳ ದರ ವಿವರ (ಪ್ರತಿ ಕೆ.ಜಿ.ಗೆ):
ಕೆ.ಆರ್. ಮಾರುಕಟ್ಟೆಯಲ್ಲಿ ಕನಕಾಂಬರ ಹೂವು ಅತ್ಯಂತ ದುಬಾರಿಯಾಗಿದ್ದು, ಕೆ.ಜಿ.ಗೆ ₹1,000 ದಿಂದ ₹1,300 ವರೆಗೆ ಮಾರಾಟವಾಗುತ್ತಿದೆ. ಮಲ್ಲಿಗೆ ₹500 ರಿಂದ ₹600, ಸೇವಂತಿಗೆ ಮತ್ತು ಗುಲಾಬಿ ತಲಾ ₹200 ರಿಂದ ₹250, ಸುಗಂಧರಾಜ ₹250 ರಿಂದ ₹300 ಹಾಗೂ ಚೆಂಡು ಹೂವು ₹80 ರಿಂದ ₹100 ರವರೆಗೆ ಮಾರಾಟವಾಗುತ್ತಿದೆ.
ಹಣ್ಣುಗಳ ದರ ವಿವರ (ಪ್ರತಿ ಕೆ.ಜಿ.ಗೆ):
ಹಣ್ಣುಗಳ ಮಾರುಕಟ್ಟೆಯಲ್ಲೂ ದರ ಏರಿಕೆ ಮುಂದುವರಿದಿದ್ದು, ಸೇಬು ಕೆ.ಜಿ.ಗೆ ₹200 ರಿಂದ ₹300, ದಾಳಿಂಬೆ ₹100 ರಿಂದ ₹250, ದ್ರಾಕ್ಷಿ ₹120 ರಿಂದ ₹150, ಮೂಸಂಬಿ ₹60 ರಿಂದ ₹80, ಏಲಕ್ಕಿ ಬಾಳೆಹಣ್ಣು ₹100 ರಿಂದ ₹120, ಸಪೋಟಾ ₹120 ರಿಂದ ₹140, ಕಿತ್ತಳೆ ₹80 ರಿಂದ ₹100 ಹಾಗೂ ಪಚ್ಚಬಾಳೆ ₹40 ರಿಂದ ₹50 ಕ್ಕೆ ಮಾರಾಟವಾಗುತ್ತಿದೆ.
ತರಕಾರಿ ಹಾಗೂ ಪೂಜಾ ಸಾಮಗ್ರಿಗಳು:
ತರಕಾರಿಗಳ ಪೈಕಿ ಈರುಳ್ಳಿ ಕೆ.ಜಿ.ಗೆ ₹60-₹70, ಬೀನ್ಸ್ ₹80-₹100, ಬೀಟ್ರೂಟ್ ₹50, ಬಿಳಿ ಬದನೆಕಾಯಿ ₹66, ಆಲೂಗಡ್ಡೆ ₹40-₹50, ಟೊಮ್ಯಾಟೊ ₹25-₹30 ಹಾಗೂ ಹೀರೆಕಾಯಿ ₹60 ರ ದರದಲ್ಲಿ ಮಾರಾಟವಾಗುತ್ತಿದೆ.
ಇದಲ್ಲದೆ, ಪೂಜೆಗೆ ಅಗತ್ಯವಾದ ಗರಿಕೆ ಒಂದು ಕಟ್ಟು ₹25, ಬಿಲ್ವಪತ್ರೆ ₹50, ಮಾವಿನ ಎಲೆ ₹30-₹40 ಹಾಗೂ ಬಾಳೆಕಂಬ ಜೋಡಿಗೆ ₹50 ರಿಂದ ₹200 ರವರೆಗೆ ಬೆಲೆ ನಿಗದಿಯಾಗಿದೆ. ಬಾಗಿನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬಾಗಿನದ ಮರದ ಜೋಡಿಗೆ ₹120 ರಿಂದ ₹150 ಹಾಗೂ ಸಿದ್ಧ ಬಾಗಿನದ ಕಿಟ್ಗಳು ₹400 ರಿಂದ ₹600 ರವರೆಗೆ ಮಾರಾಟವಾಗುತ್ತಿವೆ.
ಬೇಳೆ-ಕಾಳುಗಳ ಬೆಲೆಯಲ್ಲೂ ಏರಿಕೆ:
ಕಳೆದೊಂದು ವಾರದಿಂದ ಬೇಳೆ-ಕಾಳುಗಳ ದರವೂ ಪ್ರತಿ ಕೆ.ಜಿ.ಗೆ ₹8 ರಿಂದ ₹10 ರಷ್ಟು ಹೆಚ್ಚಾಗಿದೆ. ಯಶವಂತಪುರ ಎಪಿಎಂಸಿಯಲ್ಲಿ ತೊಗರಿಬೇಳೆ ಕೆ.ಜಿ.ಗೆ ₹100 ರಿಂದ ₹115, ಶೀಲಿಂಗ ತೊಗರಿಬೇಳೆ ₹130 ರಿಂದ ₹140, ಕಡಲೆಕಾಳು ₹85 ರಿಂದ ₹95, ಹೆಸರುಬೇಳೆ ₹100 ರಿಂದ ₹105, ಹೆಸರುಕಾಳು ₹115 ರಿಂದ ₹125 ಹಾಗೂ ಹಲಸಂದೆ ಕಾಳು ₹75 ರಿಂದ ₹85 ಕ್ಕೆ ತಲುಪಿದೆ.
ಬೆಲೆ ಏರಿಕೆಯ ನಡುವೆಯೂ ನಾಗರಿಕರು ತಮ್ಮ ಶಕ್ತಿಗೆ ತಕ್ಕಂತೆ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದು, ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಮುಂದುವರಿದಿದೆ.