ಹಾಸನ : ಹಾಸನದಲ್ಲಿ ನಡೆದ 'ಪ್ರಜಾಸೇವೆ ಆಂದೋಲನ' ಸಭೆಯಲ್ಲಿ "ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ" ಎಂದು ಹೇಳುವ ಮೂಲಕ ಸಚಿವ ಶಿವಲಿಂಗೇಗೌಡ ಅವರು ಹೊಸ ವಿವಾದ ಹುಟ್ಟುಹಾಕಿದ್ದಾರೆ. ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಸಭೆಯಲ್ಲಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೂ ಅಧಿಕಾರಿಗಳು ಲಂಚ ಕೇಳುತ್ತಾರೆ ಎಂದು ಸಚಿವರ ಮುಂದೆಯೇ ಕಿಡಿಕಾರಿದ್ದಾರೆ.
ಸಚಿವರ ಮಾತಿನಿಂದ ಉಂಟಾದ ಗೊಂದಲವನ್ನು ನಿವಾರಿಸಲು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, "ಬಲವಂತವಾಗಿ ಹಣ ವಸೂಲಿ ಮಾಡುವುದು ಸರಿಯಲ್ಲ, ಅಂತಹ ಕೆಲಸಗಳಿಗೆ ಅವಕಾಶ ನೀಡುವುದಿಲ್ಲ" ಎಂದು ಸಾರ್ವಜನಿಕರಿಗೆ ವಿವರಣೆ ನೀಡಿದರು. ಪರಿಸ್ಥಿತಿಯ ಅರಿವಾದ ತಕ್ಷಣವೇ ಎಚ್ಚೆತ್ತುಕೊಂಡ ಸಚಿವ ಶಿವಲಿಂಗೇಗೌಡ ಅವರು ವೇದಿಕೆಯಲ್ಲೇ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದು, "ನಾನು ದುಡ್ಡು ಕೊಡುವ ಬಗ್ಗೆ ಹೇಳಿಲ್ಲ, ಬದಲಾಗಿ ಅಧಿಕಾರಿಗಳಿಗೆ ಗೌರವ ಕೊಡುವ ಬಗ್ಗೆ ಮಾತ್ರ ಮಾತನಾಡಿದ್ದೇನೆ" ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.