ತೀರ್ಥಹಳ್ಳಿ: ಮಲೆನಾಡಿನ ಜನರ ಸಂಕಷ್ಟಕ್ಕೆ ಸ್ಪಂದಿಸಿ. ಶರಾವತಿ ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಿ. ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶ ಕೈಬಿಡಲು, ಅರಣ್ಯ ವಾಸಿಗಳ ಮೇಲಿನ ದೌರ್ಜನ್ಯ ತಡೆಯಲು ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್ ಜಯಂತ್ ಮನವಿ ಮಾಡಿದರು.
ಇಂದು ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತ ಸಿಎಂ ಡಿ.ಕೆ ಶಿವಕುಮಾರ್ ಅವರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಸಾಮಾನ್ಯ ಕಾರ್ಯಕರ್ತನಾಗಿ 1972ರಿಂದಲೂ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು, ಅನೇಕ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ ಎಂದು ಸ್ಮರಿಸಿದರು. ಆದರೆ ಸ್ವತಃ ಮಲೆನಾಡು ಭಾಗಕ್ಕೆ ಬಂದು ಇಲ್ಲಿನ ಜನರ ಸಂಕಷ್ಟಗಳನ್ನು ಇಷ್ಟು ಹತ್ತಿರದಿಂದ ಆಲಿಸುತ್ತಿರುವ ಮುಖ್ಯಮಂತ್ರಿಗಳ ನಡೆಗೆ ಎಲ್ಲರ ಪರವಾಗಿ ವೈಯಕ್ತಿಕವಾಗಿ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಕಸ್ತೂರಿ ರಂಗನ್ ವರದಿ ಹಾಗೂ ಜನರ ಆತಂಕ
ಮಲೆನಾಡಿನಲ್ಲಿ ಸಮಸ್ಯೆಗಳು ಬೆಟ್ಟದಷ್ಟಿದ್ದು, ಅದರಲ್ಲೂ ಕಸ್ತೂರಿ ರಂಗನ್ ವರದಿಯ ವಿಚಾರ ಜನರನ್ನು ತೀವ್ರ ಆತಂಕಕ್ಕೆ ತಳ್ಳಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವರದಿಯ ಪರಿಣಾಮದಿಂದಾಗಿ ಜನ ಕಂಗೆಟ್ಟು ಹೋಗಿದ್ದಾರೆ. ಕಳೆದ 2022ರಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ, ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಆಯನೂರಿನಿಂದ ಕುಂಸಿಯವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ತಮಗೆ ಹಾಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಸಮಿತಿ ರಚಿಸಿ, ವರದಿ ಸಲ್ಲಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ನೀಡಿದ್ದ ಭರವಸೆಯನ್ನು ಈ ವೇಳೆ ನೆನಪಿಸಿದರು.
ಶರಾವತಿ ಸಂತ್ರಸ್ತರ ದಶಕಗಳ ನೋವು
ಇಲ್ಲಿ ನೆರೆದಿರುವ ಬಹುತೇಕ ಮಂದಿ ಶರಾವತಿ ಮುಳುಗಡೆ ಸಂತ್ರಸ್ತರಾಗಿದ್ದಾರೆ. ಅಂದು ಸರ್ವಸ್ವವನ್ನೂ ಕಳೆದುಕೊಂಡವರ ಮಕ್ಕಳು, ಮೊಮ್ಮಕ್ಕಳು ಇಂದು ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಈಗಾಗಲೇ ಎರಡು ತಲೆಮಾರುಗಳು ಕಳೆದುಹೋಗಿವೆ. ಆದರೂ 64 ವರ್ಷಗಳಿಂದ ಅವರಿಗೆ ಅಧಿಕೃತವಾಗಿ ಭೂಮಿ ನೀಡಲು ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಡಂಬಡಿಕೆ ಮಾಡಿಕೊಂಡು ವರದಿ ಸಲ್ಲಿಸಿದರೆ ಭೂಮಿ ನೀಡಲು ಒಪ್ಪಿಗೆ ನೀಡುವುದಾಗಿ ತಿಳಿಸಿದೆ. ಆದರೆ ಮೂರು ವರ್ಷಗಳು ಕಳೆದರೂ ರಾಜ್ಯ ಸರ್ಕಾರದಿಂದ ದೆಹಲಿಗೆ ಈ ಸಂಬಂಧಿತ ವರದಿ ಕಳುಹಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇವಲ ಎರಡು ದಿನಗಳ ಒಳಗಾಗಿ ಆ ವರದಿಯನ್ನು ದೆಹಲಿಗೆ ಕಳುಹಿಸಿಕೊಡಲು ಸಿಎಂ ಖಡಕ್ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.

ಅರಣ್ಯ ಹಕ್ಕು ಕಾಯ್ದೆ ಮತ್ತು ನಿರಾಕರಣೆಯ ಆಘಾತ
ಅರಣ್ಯ ಹಕ್ಕು ಕಾಯ್ದೆಯಡಿ ಮಲೆನಾಡಿನ ಬಡ ರೈತರು 2.81 ಲಕ್ಷ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಯಾವುದೇ ಸಮರ್ಪಕ ವಿಚಾರಣೆ ನಡೆಸದೆ 2.45 ಲಕ್ಷ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗಿದೆ. ಬಡ ರೈತರು ಅರಣ್ಯ ಇಲಾಖೆಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಸಾಗರ ತಾಲೂಕಿನ ಕಾನಗೋಡಿನಲ್ಲಿ ರಾಮನಾಯ್ಕ ಎಂಬ ಬಡ ರೈತನಿಗೆ ಕಾಗೋಡು ತಿಮ್ಮಪ್ಪನವರು 1991ರಲ್ಲಿ ಜಮೀನು ಮಂಜೂರು ಮಾಡಿಕೊಟ್ಟಿದ್ದರೂ, ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು ಅವರ 20 ವರ್ಷದ ಅಡಿಕೆ ಮರಗಳನ್ನು ಬುಲ್ಡೋಜರ್ ಹರಿಸಿ ನೆಲಸಮ ಮಾಡಿ ಇಡೀ ಕುಟುಂಬವನ್ನೇ ಬೀದಿಗೆ ತಂದ ಉದಾಹರಣೆಯನ್ನು ಸಂವಾದದಲ್ಲಿ ಮುಂದಿಟ್ಟರು.
ಕಸ್ತೂರಿ ರಂಗನ್ ವರದಿಯ ಗ್ರಾಮಗಳ ಕೈಬಿಡಲು ಆಗ್ರಹ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ, ಅಧಿಸೂಚನೆಯಲ್ಲಿ ಸೂಕ್ಷ್ಮ ವಲಯವೆಂದು ಗುರುತಿಸಲಾಗಿರುವ 1,449 ಗ್ರಾಮಗಳ ಪೈಕಿ ಶೇಕಡಾ 80ರಷ್ಟು ಭಾಗ (ಸುಮಾರು 17,000 ಚದರ ಕಿ.ಮೀ) ಈಗಾಗಲೇ ವನ್ಯಜೀವಿ ಧಾಮ, ಅಭಯಾರಣ್ಯ, ಆನೆ ಕಾರಿಡಾರ್ ಹಾಗೂ ಹುಲಿ ಸಂರಕ್ಷಣಾ ಪ್ರದೇಶವಾಗಿ ಸಂರಕ್ಷಿತಗೊಂಡಿದೆ. ಇನ್ನುಳಿದ ಕೇವಲ ಶೇಕಡಾ 20ರಷ್ಟು ಪ್ರದೇಶದಲ್ಲಿ ಮಾತ್ರ ಜನರ ಊರುಗಳು, ಮನೆಗಳು, ಶಾಲೆಗಳು, ಕೃಷಿ ಭೂಮಿ, ಅಡಿಕೆ ತೋಟಗಳು ಹಾಗೂ ದೇವಸ್ಥಾನಗಳಿವೆ. ಈ ಜನವಸತಿ ಮತ್ತು ಕೃಷಿ ಪ್ರದೇಶಗಳನ್ನು ಕಸ್ತೂರಿ ರಂಗನ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಟ್ಟು ಉಳಿಸಿಕೊಡಬೇಕು, ಆಗ ಮಾತ್ರ ಮಲೆನಾಡಿನ ಜನ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ಗೌಡ ಒಳಗೊಂಡು ಮಲೆನಾಡಿಗರ ಸಮಸ್ಯೆ, ಶರಾವತಿ ಸಂತ್ರಸ್ತರಿಗೆ ಭೂ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯನ್ನು ಸಲ್ಲಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..