ಬೆಂಗಳೂರು: ಸರ್ಕಾರಿ ನೌಕರ ಎನ್ನುವ ಕಾರಣಕ್ಕೆ ಅವರ ಪ್ರತಿ ವೈಯಕ್ತಿಕ ಮಾಹಿತಿಯನ್ನು ಆರ್.ಟಿ.ಐ. ಅಡಿ ಬಹಿರಂಗಪಡಿಸಲು ಸಾಧ್ಯವಿಲ್ಲ. ನೌಕರರಿಗೂ ವೈಯಕ್ತಿಕ ಗೌಪ್ಯತೆಯ ಹಕ್ಕು ಇರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಎಸ್ಆರ್ಟಿಸಿ ನಿವೃತ್ತ ನೌಕರರೊಬ್ಬರ ಆಸ್ತಿ ವಿವರ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಖಾಸಗಿ ವ್ಯಕ್ತಿಗಳ ನಡುವಿನ ಸಿವಿಲ್ ದಾವೆಗಳಿಗೆ ಸಾಕ್ಷ್ಯ ಸಂಗ್ರಹಿಸಲು ಆರ್.ಟಿ.ಐ. ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಹೇಳಿದೆ.
ಕೆಎಸ್ಆರ್ಟಿಸಿ ನಿವೃತ್ತ ನೌಕರರೊಬ್ಬರ ಆಸ್ತಿ ವಿವರ ಕೋರಿ ಬನಶಂಕರಿಯ ಸವಿತಮ್ಮ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿ ಈ ಆದೇಶ ನೀಡಿದೆ. ಅರ್ಜಿದಾರರಿಗೆ ಮಾಹಿತಿ ನೀಡಲು ನಿರಾಕರಿಸಿ ರಾಜ್ಯ ಮಾಹಿತಿ ಆಯೋಗ ಮತ್ತು ಕೆಎಸ್ಆರ್ಟಿಸಿ ಹೊರಡಿಸಿದ ಆದೇಶಗಳನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಖಾಸಗಿ ವ್ಯಕ್ತಿಗಳ ನಡುವಿನ ಸಿವಿಲ್ ದಾವೆಗೆ ಸಾಕ್ಷ್ಯ ಸಂಗ್ರಹಿಸಲು ಆರ್.ಟಿ.ಐ. ಕಾಯ್ದೆಯನ್ನು ಸಾಧನವಾಗಿ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಅರ್ಜಿದಾರರು ಕೋರಿರುವ ಮಾಹಿತಿ ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕೆಎಸ್ಆರ್ಟಿಸಿ ಅಧಿಕಾರಿಯಾಗಿದ್ದ ಎಸ್.ಪಿ.ಜಯಪಾಲ್ ತಮ್ಮಿಂದ ಆಸ್ತಿಯ ಕ್ರಯ ಪತ್ರ ಪಡೆದಿದ್ದಾರೆ ಎಂದು ಸವಿತಮ್ಮ ಆರೋಪಿಸಿದ್ದು, ಈ ಸಂಬಂಧ ಸಿವಿಲ್ ನ್ಯಾಯಾಲಯದಲ್ಲಿ ದಾವೆಗಳು ಇರುವುದರಿಂದ ಜಯಪಾಲ್ ಅವರು 1997ರಿಂದ 2005 ರ ಅವಧಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿದ ಆಸ್ತಿ ವಿವರ ನೀಡುವಂತೆ ಆರ್.ಟಿ.ಐ. ನಡಿ ಅರ್ಜಿ ಸಲ್ಲಿಸಿದ್ದರು. ಈ ಮಾಹಿತಿ ವೈಯಕ್ತಿಕ ಸ್ವರೂಪದ್ದಾಗಿದ್ದು ಆರ್.ಟಿ.ಐ. ಕಾಯ್ದೆ ಅಡಿಯಲ್ಲಿ ವಿನಾಯಿತಿ ಪಡೆದಿದೆ ಎಂದು ಕೆಎಸ್ಆರ್ಟಿಸಿ ಮತ್ತು ಮಾಹಿತಿ ಆಯೋಗ ಅರ್ಜಿಯನ್ನು ತಿರಸ್ಕರಿಸಿದ್ದವು.
ಹೀಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ. ಆರ್.ಟಿ.ಐ. ಕಾಯ್ದೆ ಅಡಿಯಲ್ಲಿ ಅಧಿಕಾರಿಗಳ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಬೇಕಾದಲ್ಲಿ ಅದರಲ್ಲಿ ವ್ಯಕ್ತಿಗತ ಹಿತಾಸಕ್ತಿಗಿಂತ ಮಿಗಿಲಾದ ಬೃಹತ್ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು, ಭ್ರಷ್ಟಾಚಾರ ಬಯಲು ಮಾಡಲು, ಸಾರ್ವಜನಿಕ ಹಣ ದುರ್ಬಳಕೆ ತಡೆಯಲು, ಅಕ್ರಮ ಆಸ್ತಿ ಗಳಿಕೆ ಸಾಬೀತುಪಡಿಸಲು ಮಾಹಿತಿ ಕೋರಿದಾಗ ಮಾತ್ರ ನೀಡಬಹುದು. ಆದರೆ ಪ್ರಸಕ್ತ ಪ್ರಕರಣ ಖಾಸಗಿ ವಿವಾದವಾಗಿದೆ. ಹೀಗಾಗಿ ಆರ್.ಟಿ.ಐ. ಐಡಿಯಲ್ಲಿ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.