ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾ ಯುವಕನೊಬ್ಬ ಸಾರ್ವಜನಿಕವಾಗಿ ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಾರಣಾಸಿಯ ಘಾಟ್ ಒಂದರ ಸಮೀಪ ಮುಂಜಾನೆ ಈ ಘಟನೆ ನಡೆದಿದೆ. ಸದರಿ ಯುವಕ ಕೈಯಲ್ಲಿ ಬಿಯರ್ ಕ್ಯಾನ್ ಹಿಡಿದುಕೊಂಡು ನದಿಗೆ ಇಳಿಯುತ್ತಿದ್ದಾಗ, ಸ್ಥಳೀಯರು ಆತನ ಕೃತ್ಯವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಯುವಕನ ಕೃತ್ಯ ಮತ್ತು ಆಕ್ರೋಶ : ಪವಿತ್ರ ನದಿಯನ್ನು ಅವಮಾನಿಸಬೇಡಿ ಎಂದು ಸ್ಥಳೀಯರು ಪ್ರಶ್ನಿಸಿದಾಗ, ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಆ ಯುವಕ ಉತ್ತರಿಸುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಆದರೆ, ಈ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದಂತೆಯೇ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬಂದಿವೆ.
ಪೊಲೀಸ್ ಕ್ರಮ : ಈ ಸಂಬಂಧ ವಾರಣಾಸಿ ಪೊಲೀಸರು ಶುಕ್ರವಾರ (ಮೇ 22) ದಶಾಶ್ವಮೇಧ ಪೊಲೀಸ್ ಠಾಣೆಯಲ್ಲಿ ವಕೀಲ ಶಶಾಂಕ್ ತ್ರಿಪಾಠಿ ನೀಡಿದ ದೂರಿನ ಮೇರೆಗೆ ಎಫ್ಐಆರ್ (FIR) ದಾಖಲಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಹರಡುವುದು ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಸೆಕ್ಷನ್ಗಳನ್ನು ಒಳಗೊಂಡ ‘ಭಾರತೀಯ ನ್ಯಾಯ ಸಂಹಿತೆ (BNS)’ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಇನ್ನೂ ಗುರುತಿಸಬೇಕಿದ್ದು, ಆತನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಸಹಾಯಕ ಪೊಲೀಸ್ ಕಮಿಷನರ್ ಅತುಲ್ ಅಂಜನ್ ತ್ರಿಪಾಠಿ ತಿಳಿಸಿದ್ದಾರೆ.
ನದಿ ತೀರದಲ್ಲಿ ಹೆಚ್ಚಿದ ನಿಗಾ ಹಿಂದೂ ಸಂಪ್ರದಾಯದಲ್ಲಿ ಗಂಗಾ ನದಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಹೀಗಾಗಿ ಇಂತಹ ಕೃತ್ಯಗಳು ಸಾರ್ವಜನಿಕ ಪ್ರತಿಭಟನೆ ಮತ್ತು ಕಾನೂನು ಕ್ರಮಗಳಿಗೆ ಕಾರಣವಾಗುತ್ತವೆ. ವಾರಣಾಸಿ ಘಾಟ್ಗಳಲ್ಲಿ ಇಂತಹ ವಿವಾದಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ತಿಂಗಳುಗಳ ಹಿಂದೆ ಗಂಗಾ ನದಿಯಲ್ಲಿ ದೋಣಿಗಳ ಮೇಲೆ ಮದ್ಯಪಾನ ಮಾಡುತ್ತಿದ್ದ ವಿಡಿಯೋಗಳು ವೈರಲ್ ಆದಾಗ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರು. ಎರಡು ತಿಂಗಳ ಹಿಂದೆ ನದಿಯಲ್ಲಿ ದೋಣಿ ಮೇಲೆ ಇಫ್ತಾರ್ ಕೂಟ ನಡೆಸಿ, ತ್ಯಾಜ್ಯವನ್ನು ನದಿಗೆ ಎಸೆದ ಆರೋಪದ ಮೇಲೆ 14 ಯುವಕರನ್ನು ಜೈಲಿಗೆ ಕಳುಹಿಸಲಾಗಿತ್ತು (ನಂತರ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು).
ಈ ಹಿನ್ನೆಲೆಯಲ್ಲಿ, ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳ ಮುನ್ನ ವಾರಣಾಸಿ ಅಧಿಕಾರಿಗಳು ಘಾಟ್ಗಳ ಸುತ್ತ ಭದ್ರತೆ ಮತ್ತು ನಿಗಾವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ವಾರಣಾಸಿ ಘಾಟ್ಗಳ ಪವಿತ್ರತೆಯನ್ನು ಕಾಪಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.