ಕೇವಲ ಒಂದು ಸೀರೆಯ ವಿಚಾರದಲ್ಲಿ ಉಂಟಾದ ವಿವಾದವು ಮದುವೆಯನ್ನು ನಿಲ್ಲಿಸುವುದು ಮಾತ್ರವಲ್ಲದೆ, ಎರಡು ಕುಟುಂಬಗಳ ನಡುವೆ ಹಿಂಸಾತ್ಮಕ ಘರ್ಷಣೆಗೂ ಕಾರಣವಾದ ವಿಚಿತ್ರ ಘಟನೆಯೊಂದು ನಡೆದಿದೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯವಾಗಿ ಸಾಕಷ್ಟು ಸಂಚಲನ ಮೂಡಿಸಿದೆ.
ಏನಿದು ಘಟನೆ? ರೇವತಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯ್ಘಾಟ್ ಗ್ರಾಮದ ಪಂಚರುಖಿ ಅಮ್ಮನವರ ದೇವಸ್ಥಾನದಲ್ಲಿ ಈ ತಿಂಗಳ 11 ರಂದು ವಿಶಾಲ್ ಗೊಂಡ್ ಮತ್ತು ನಿಕಿ ಅವರ ವಿವಾಹ ನಡೆಯಬೇಕಿತ್ತು. ವರನ ಕಡೆಯವರು ಮೆರವಣಿಗೆಯೊಂದಿಗೆ (ಬಾರಾತ್) ಅದ್ಧೂರಿಯಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಮದುವೆಯ ವಿಧಿವಿಧಾನಗಳು ಆರಂಭವಾಗುವ ಸಮಯದಲ್ಲಿ, ವರನ ಕುಟುಂಬದವರು ವಧುವಿಗೆ ಮದುವೆಯ ಸೀರೆಯನ್ನು ಉಡುಗೊರೆಯಾಗಿ ನೀಡಿದರು.
ಆದರೆ, ಆ ಸೀರೆ ತನಗೆ ಸ್ವಲ್ಪವೂ ಇಷ್ಟವಾಗಿಲ್ಲ ಮತ್ತು ಅದು ತನಗೆ ಒಪ್ಪುತ್ತಿಲ್ಲ ಎಂದು ಹೇಳಿದ ವಧು ನಿಕಿ, ಮದುವೆಯಾಗಲು ನಿರಾಕರಿಸಿದ್ದಾಳೆ.
ಘರ್ಷಣೆ ಮತ್ತು ಪೊಲೀಸ್ ಕೇಸ್: ವಧು ಹಠ ಹಿಡಿದಿದ್ದರಿಂದ ಉಭಯ ಪಂಗಡಗಳ ನಡುವೆ ಮಾತಿನ ಚಕಮಕಿ ನಡೆದು, ಅದು ದೊಡ್ಡ ಮಟ್ಟದ ಗಲಾಟೆಗೆ ಕಾರಣವಾಯಿತು. ಈ ಘರ್ಷಣೆಯಲ್ಲಿ ವರನ ತಾಯಿ, ಸಹೋದರ ಸೇರಿದಂತೆ ಮತ್ತೊಬ್ಬ ಮಹಿಳೆಗೆ ಗಾಯಗಳಾಗಿವೆ. ವಿಷಯ ತಿಳಿದ ಡಿಎಸ್ಪಿ ಮೊಹಮ್ಮದ್ ಫಹೀಮ್ ಖುರೇಷಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ವಧುವಿನ ತಂದೆ ನೀಡಿದ ದೂರಿನ ಮೇರೆಗೆ ವರ ವಿಶಾಲ್ ಮತ್ತು ಆತನ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದ ಮದುವೆ ಅರ್ಧಕ್ಕೆ ನಿಂತುಹೋಗಿದ್ದು, ವರನ ಕಡೆಯವರು ಮದುವೆ ಮೆರವಣಿಗೆಯೊಂದಿಗೆ ಬರಿಗೈಲಿ ವಾಪಸ್ ಹೋಗಬೇಕಾಯಿತು. ಪ್ರಸ್ತುತ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.