ಕಳೆದ ವರ್ಷ ನಡೆದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಅದೇ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೋಕರ್ಸ್ ಪಟ್ಟಿ ಕಳಚಿ ಎಸೆದಿತ್ತು.
ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ರೀತಿಯ ದಿಗ್ಗಜ ಆಟಗಾರರ ನಾಯಕತ್ವದಡಿಯಲ್ಲಿ ಕಣಕ್ಕಿಳಿದರೂ ಸಹ ಒಮ್ಮೆಯೂ ಟ್ರೋಫಿ ಗೆಲ್ಲಲಾಗದಿದ್ದ ಆರ್ಸಿಬಿ ಐಪಿಎಲ್ ಪಾಲಿಗೆ ಅನ್ಲಕ್ಕಿ ಟೀಮ್ ಎನಿಸಿಕೊಂಡಿತ್ತು.
ಇನ್ನು ತಂಡವನ್ನು ಇಷ್ಟೆಲ್ಲ ನಾಯಕರು ಮುನ್ನಡೆಸಿದ್ದರೂ ಕೊಹ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿದ್ದರು. ಹೀಗಾಗಿ ಆರ್ಸಿಬಿ ಟ್ರೋಫಿ ವಿಚಾರಕ್ಕೆ ಬಂದರೆ ಈಗಲೂ ವಿರಾಟ್ ಕೊಹ್ಲಿ ಹೆಸರು ಹೀನಾಯವಾಗಿ ಟ್ರೋಲ್ ಆಗಿಬಿಡುತ್ತದೆ.
ಕೊಹ್ಲಿ ನಾಯಕತ್ವ ಬಿಟ್ಟುಕೊಟ್ಟ ಕಾರಣ ಇಂದು ಆರ್ಸಿಬಿ ಟ್ರೋಫಿ ಗೆದ್ದಿದೆ ಎನ್ನುವ ಮಟ್ಟಕ್ಕೆ ಕೊಹ್ಲಿ ನಾಯಕತ್ವ ಕಳಪೆ ಎಂದು ಐಪಿಎಲ್ ಪ್ರೇಕ್ಷಕರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಾರೆ.
ಇನ್ನು ಇದೇ ವಿಷಯಕ್ಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ಗಳು ಹರಿದಾಡಿದ್ದು, ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ಬಕೆಟ್ ಹಿಡಿಯುತ್ತಿದೆ ಎಂದು ಟ್ರೋಲ್ ಮಾಡಲಾಗಿದೆ.
ಹೌದು, ಈ ಬಾರಿಯ ಐಪಿಎಲ್ ಟ್ರೋಫಿ ಮುಗಿದಾಗಿನಿಂದ ಆರ್ಸಿಬಿ ಕಪ್ ಇಲ್ಲದೇ ಚೋಕರ್ಸ್ ಎನಿಸಿಕೊಂಡಿದ್ದ ತಮಗೆ ಟ್ರೋಫಿ ತಂದಿಟ್ಟ ನಾಯಕ ರಜತ್ ಪಟಿದಾರ್ಗಿಂತ ಹೆಚ್ಚಾಗಿ ಕೊಹ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಇದು ಪಟಿದಾರ್ಗೆ ಅವಮಾನ ಮಾಡಿದಂತೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಅನೇಕ ಫೋಟೊಗಳಲ್ಲಿ ರಜತ್ ಪಟಿದಾರ್ಗಿಂತ ಕೊಹ್ಲಿಯನ್ನೇ ಹೆಚ್ಚು ಹೈಲೈಟ್ ಮಾಡಿದ್ದು, ಸತತ ಹತ್ತು ವರ್ಷಗಳ ಕಾಲ ನಾಯಕನಾಗಿ ತಂಡಕ್ಕೆ ಚೋಕರ್ ಪಟ್ಟ ತಂದಿಟ್ಟ ಆಟಗಾರನಿಗೆ ಇಷ್ಟು ಬಕೆಟ್ ಹಿಡಿಯುವ ಅಗತ್ಯವಿದೆಯಾ ಎಂದು ಕಾಲೆಳೆದಿದ್ದಾರೆ.
