ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾದ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 15.24 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಉಳಿದ ಹಣವನ್ನು ವಾಪಸ್ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪ್ರಕ್ರಿಯೆ ಮುಂದುವರೆಸಿದೆ.
1,94,560 ಮಹಿಳೆಯರು ಐಟಿ ಪಾವತಿ, ಜಿಎಸ್ಟಿ ರಿಟರ್ನ್ಸ್ ಸಲ್ಲಿಸಿರುವ ಮಾಹಿತಿ ಗೊತ್ತಾಗಿದೆ. ಗೃಹಲಕ್ಷ್ಮಿಗೆ ನೋಂದಾಯಿಸಿಕೊಂಡಿದ್ದ 2,88,376 ಮಹಿಳೆಯರು ಮೃತಪಟ್ಟಿದ್ದಾರೆ. ಮೃತಪಟ್ಟ ಫಲಾನುಭವಿಗಳ ಮಾಹಿತಿಯನ್ನು ಸಕಾಲದಲ್ಲಿ ಪಡೆದು ಅವರನ್ನು ಯೋಜನೆಯಿಂದ ಕೈಬಿಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಮೃತಪಟ್ಟ ಫಲಾನುಭವಿಗಳ ಪೈಕಿ 1,03,922 ಕುಟುಂಬಗಳು ನಿಯಮಾನಸಾರ ಪಡಿತರ ಚೀಟಿಯಲ್ಲಿ ಯಜಮಾನಿ ಹೆಸರು ಬದಲಾಯಿಸಿ ಮರು ನೋಂದಣಿ ಮಾಡಿಕೊಂಡು ಧನ ಸಹಾಯ ಪಡೆಯುತ್ತಿದ್ದಾರೆ. ಮೃತಪಟ್ಟವರ ಮಾಹಿತಿ ಸಕಾಲದಲ್ಲಿ ಲಭ್ಯವಾಗದ ಕಾರಣ 1,08,755 ಫಲಾನುಭವಿಗಳ ಖಾತೆಗೆ ಪಾವತಿಸಿದ 115 ಕೋಟಿ ರೂ. ಹಣ ವಾಪಸ್ ಪಡೆಯಲು ಬ್ಯಾಂಕುಗಳ ಜೊತೆಗೆ ಸಭೆ ನಡೆಸಲಾಗಿದೆ. ಸಭೆ ನಡೆಸಿದ ನಂತರ 15.24 ಕೋಟಿ ರೂ. ಸರ್ಕಾರದ ಖಾತೆಗೆ ವಾಪಸ್ ಆಗಿದೆ. ಬಾಕಿ ಮೊತ್ತ ವಸೂಲಾತಿ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ ಎಂದು ಹೇಳಲಾಗಿದೆ.