ನಿನ್ನೆ ( ಮೇ 29 ) ಮುಲ್ಲಾನ್ಪುರದ ಮಹಾರಾಜ ಯದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಗೆಲುವನ್ನು ದಾಖಲಿಸಿ ಫೈನಲ್ ಪ್ರವೇಶ ಮಾಡಿತು. ಈ ಮೂಲಕ ಒಂದನೇ ಕ್ವಾಲಿಫಯರ್ ಬಳಿಕ ಮತ್ತೊಮ್ಮೆ ಗುಜರಾತ್ ಟೈಟನ್ಸ್ ರಾಯಲ್ ಬೆಂಗಳೂರು ತಂಡಕ್ಕೆ ಎದುರಾಳಿಯಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ, ಡೊನೊವೆನ್ ಫೆರೇರಾ ಅಬ್ಬರದ ಬ್ಯಾಟಿಂಗ್ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು, ಗುಜರಾತ್ ಟೈಟನ್ಸ್ಗೆ 215 ರನ್ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಆರಂಭಿಕರಾದ ಶುಬ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಉತ್ತಮ ಆಟದ ನೆರವಿನಿಂದ 18.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ತಮ್ಮ ಯೋಜನೆಗೆ ತಕ್ಕಂತಹ ಆರಂಭ ಪಡೆದುಕೊಳ್ಳಲಿಲ್ಲ. ಯಶಸ್ವಿ ಜೈಸ್ವಾಲ್ 1 ಹಾಗೂ ಧ್ರುವ್ ಜುರೆಲ್ ಕೇವಲ 7 ರನ್ಗೆ ವಿಕೆಟ್ ಒಪ್ಪಿಸಿದ ಕಾರಣ ಕೇವಲ 9 ರನ್ಗೆ ಎರಡು ವಿಕೆಟ್ ಕಳೆದುಕೊಂಡಿತು. ಹೀಗೆ ಆರಂಭಿಕ ಆಘಾತ ಅನುಭವಿಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಸರೆಯಾದದ್ದು ಮೂರನೇ ವಿಕೆಟ್ಗೆ ಜತೆಯಾದ ರವೀಂದ್ರ ಜಡೇಜಾ ಹಾಗೂ ವೈಭವ್ ಸೂರ್ಯವಂಶಿ. ಈ ಇಬ್ಬರೂ 127 ರನ್ಗಳ ಜತೆಯಾಟವನ್ನಾಡಿದರು.
ಜಡೇಜಾ ಕೊನೆಯವರೆಗೂ ಅಜೇಯರಾಗಿ ಉಳಿದು 45 ರನ್ ಬಾರಿಸಿದರೆ, ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 96 ರನ್ ಬಾರಿಸಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು. ಇನ್ನು ಜಡೇಜಾ ಇನ್ನಿಂಗ್ಸ್ ಮಧ್ಯದಲ್ಲಿ ಗಾಯದ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿ ಡಗ್ಔಟ್ ಸೇರಿದರು. ಈ ಸಮಯದಲ್ಲಿ ಕಣಕ್ಕಿಳಿದ ನಾಯಕ ರಿಯಾನ್ ಪರಾಗ್ 6 ಎಸೆತಕ್ಕೆ 11 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ನಾಯಕನಾಗಿ ಇಂತಹ ಸಮಯದಲ್ಲಿ ನಿಲ್ಲಬೇಕಿದ್ದ ಪರಾಗ್ ಕಳಪೆ ಆಟವನ್ನಾಡಿ ನಿರಾಸೆ ಮೂಡಿಸಿದರು.
ಹೀಗೆ ಇಡೀ ಟೂರ್ನಿಯಲ್ಲಿ ಫ್ಲಾಪ್ ಆಗಿ ಫೈನಲ್ ಪ್ರವೇಶಿಸಲು ಅವಕಾಶವಿದ್ದ ಪ್ರಮುಖ ಪಂದ್ಯದಲ್ಲೂ ಮಕಾಡೆ ಮಲಗಿದ ರಿಯಾನ್ ಪರಾಗ್ 47 ಎಸೆತಗಳಲ್ಲಿ 96 ರನ್ ಬಾರಿಸಿ ಬಂದ ಬಾಲಕ ವೈಭವ್ ಸೂರ್ಯವಂಶಿ ಕಡೆ ಡಗ್ಔಟ್ನಲ್ಲಿ ಬೆರಳು ತೋರಿಸುತ್ತಾ ಗದರಿದ ಘಟನೆ ನಡೆದಿದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಗೂ ವಿಡಿಯೊ ಹಂಚಿಕೊಂಡು ಪರಾಗ್ ವಿರುದ್ಧ ಕಿಡಿಕಾರಿದ್ದಾರೆ. ಮೊದಲು ನಾಯಕನಾಗಿ ಆಡಬೇಕಾದ ಆಟವನ್ನಾಡದ ಈತ ಪುಟ್ಟ ಹುಡುಗನ ಮೇಲೆ ರೇಗಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪರಾಗ್ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
