ನಿನ್ನೆ ( ಜೂನ್ 8 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ ಟ್ವೆಂಟಿ ಮುಂಬೈ 2026 ಲೀಗ್ ಟೂರ್ನಿಯ ಲೀಗ್ ಹಂತದ 16ನೇ ಪಂದ್ಯದಲ್ಲಿ ಎಆರ್ಸಿಎಸ್ ಅಂಧೇರಿ ಹಾಗೂ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮಖಿಯಾಗಿದ್ದವು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂದ್ರಾ ಬ್ಲಾಸ್ಟರ್ಸ್ ಆಲ್ರೌಂಡರ್ಗಳಾದ ಓಂ ಕೇಶ್ಕಾಮತ್ ಹಾಗೂ ಸಾಗರ್ ಛಬ್ರಿಯಾ ಆಟದ ಸಹಾಯದಿಂದ ಭಾರೀ ಮುಖಭಂಗದಿಂದ ಪಾರಾಗಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿ ಎಆರ್ಸಿಎಸ್ ಅಂಧೇರಿ ತಂಡಕ್ಕೆ 145 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಎಆರ್ಸಿಎಸ್ ಅಂಧೇರಿ ಆರಂಭಿಕರ ಅಬ್ಬರದ ಆರಂಭ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ತೆಂಡೂಲ್ಕರ್ ಆರ್ಭಟದ ನೆರವಿನಿಂದ 13.5 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ಗೆ 148 ರನ್ ಕಲೆಹಾಕಿ ಬರೋಬ್ಬರಿ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಬಾಂದ್ರಾ ಬ್ಲಾಸ್ಟರ್ಸ್ ಕೇವಲ 27 ರನ್ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಆರಂಭ ಪಡೆದುಕೊಂಡಿತು. ಹೀಗೆ ಕಳಪೆ ಆರಂಭ ಪಡೆದುಕೊಂಡ ತಂಡಕ್ಕೆ ಓಂ ಕೇಶ್ಕಾಮತ್ 49 ರನ್ ಹಾಗೂ ಸಾಗರ್ ಛಬ್ರಿಯಾ ಅಜೇಯ 44 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿದರೆ ತಂಡದ ಮೂವರು ಆಟಗಾರರು ಡಕ್ಔಟ್ ಆದರು, ಐವರು ಕೇವಲ ಒಂದಂಕಿ ಗಳಿಸಿದರು.
ಎಆರ್ಸಿಎಸ್ ಅಂಧೇರಿ ಪರ ಅರ್ಜುನ್ ತೆಂಡೂಲ್ಕರ್ ಮೂರು ವಿಕೆಟ್, ಪ್ರಸೂನ್ ಸಿಂಗ್ ಎರಡು ವಿಕೆಟ್, ಶಿವಮ್ ದುಬೆ, ಅಜಯ್ ಬಿ ಮಿಶ್ರಾ, ಮುಶೀರ್ ಖಾನ್ ಹಾಗೂ ಪ್ರಗ್ನೇಶ್ ಕನ್ಪಿಲ್ಲೆವಾರ್ ತಲಾ ಒಂದೊಂದು ವಿಕೆಟ್ ಪಡೆದರು.
ಬಾಂದ್ರಾ ನೀಡಿದ ಗುರಿಯನ್ನು ಬೆನ್ನಟ್ಟಿದ ಎಆರ್ಸಿಎಸ್ ಅಂಧೇರಿ ಪರ ಆರಂಭಿಕರಾಗಿ ಕಣಕ್ಕಿಳಿದ ದಿವ್ಯಾನ್ಶ್ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ ಬಾರಿಸಿದರೆ, ಮುಶೀರ್ ಖಾನ್ 38 ಎಸೆತಗಳಲ್ಲಿ ಅಜೇಯ 54 ರನ್ ಹಾಗೂ ಅರ್ಜುನ್ ತೆಂಡೂಲ್ಕರ್ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 66 ರನ್ ಚಚ್ಚಿದರು.
ಹೀಗೆ ಆಲ್ರೌಂಡರ್ ಆಟವನ್ನಾಡಿ ಮೂರು ವಿಕೆಟ್ ಹಾಗೂ ಅಜೇಯ ಅರ್ಧಶತಕ ಬಾರಿಸಿ ಅಬ್ಬರಿಸಿದ ಅರ್ಜುನ್ ತೆಂಡೂಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕ್ರಿಕೆಟ್ ಪ್ರಿಯರು ಅರ್ಜುನ್ ತೆಂಡೂಲ್ಕರ್ ಆಟಕ್ಕೆ ಮಾರುಹೋದರು.