ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ (CID) ತೀವ್ರಗೊಳಿಸಿದ್ದು, ಪ್ರಕರಣದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಸುಮಾರು ₹5 ಕೋಟಿಗೂ ಹೆಚ್ಚು ಅಕ್ರಮ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಈ ಒಟ್ಟು ಮೊತ್ತದಲ್ಲಿ ₹85 ಲಕ್ಷ ಹಣವು ವಿವಿಧ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಿದ್ದು, ಇನ್ನುಳಿದ ಬಹುಪಾಲು ಹಣವು ನಗದು ರೂಪದಲ್ಲೇ ಕೈಬದಲಾವಣೆ ಆಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಮುಖ್ಯಾಂಶಗಳನ್ನು ಕಲೆಹಾಕುತ್ತಿರುವ ತನಿಖಾಧಿಕಾರಿಗಳು ಇದುವರೆಗೆ ಒಟ್ಟು 273 ಮಂದಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ 15 ಪ್ರಮುಖ ಅಭ್ಯರ್ಥಿಗಳು ಸೇರಿದಂತೆ ಹಲವು ಆರೋಪಿಗಳಿಂದ ಮಹತ್ವದ ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಅಕ್ರಮದ ಹಣಕಾಸು ಜಾಲ ಬೆನ್ನತ್ತಿರುವ ಅಧಿಕಾರಿಗಳು ಬೀದರ್ನ ಸೌಹಾರ್ದ ಬ್ಯಾಂಕ್ ಮ್ಯಾನೇಜರ್ರನ್ನು ವಿಚಾರಣೆಗೊಳಪಡಿಸಿ ಬಸವರಾಜ್ ಕನ್ನಾಳೆ ಎಂಬಾತನೊಂದಿಗೆ ನಡೆದ ಅಕ್ರಮ ವ್ಯವಹಾರಗಳ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ವೇಳೆ ಪ್ರಕರಣದ ಮತ್ತೊಬ್ಬ ಆರೋಪಿ ಜ್ಞಾನೇಂದ್ರ ಸಂಪರ್ಕದಲ್ಲಿದ್ದ ಯುವತಿಯೊಬ್ಬರಿಂದ ₹23 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸಿಐಡಿ ವಶಕ್ಕೆ ಪಡೆದುಕೊಂಡಿದೆ.
ಇನ್ನೊಂದೆಡೆ, ಹಗರಣದ ಗಂಭೀರ ಆರೋಪ ಎದುರಿಸುತ್ತಿರುವ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಅವರಿಗೆ ಸಂಕಷ್ಟ ಎದುರಾಗಿದೆ. ತನಿಖಾಧಿಕಾರಿಗಳು ನೀಡಿರುವ ವಿಚಾರಣಾ ನೋಟಿಸ್ಗೆ ಅವರು ಹಾಜರಾಗದ ಹಿನ್ನೆಲೆಯಲ್ಲಿ, ಸಿಐಡಿ ಇದೀಗ ಅವರಿಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದೆ. ಶಾಂತಾ ಹೊಸಮನಿ ಅವರು ಕೇವಲ ಪಶುವೈದ್ಯಾಧಿಕಾರಿ ನೇಮಕಾತಿ ಮಾತ್ರವಲ್ಲದೆ, ಕೆಎಎಸ್ (KAS) ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ (AEE) ನೇಮಕಾತಿ ಅಕ್ರಮಗಳಲ್ಲೂ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ವಿಶೇಷವಾಗಿ 2023ರ AEE ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ಕೆಪಿಎಸ್ಸಿ ಉಪಸಮಿತಿಯನ್ನು ರಚಿಸಲಾಗಿತ್ತು. ಈ ವೇಳೆ ಅಂದಿನ ಕೆಪಿಎಸ್ಸಿ ಕಾರ್ಯದರ್ಶಿ ಲತಾ ಕುಮಾರಿ ಅವರ ಮೂಲಕ ಸಮಿತಿಯ ಇತರ ಸದಸ್ಯರ ಗಮನಕ್ಕೆ ತರದೆ, ಏಕಪಕ್ಷೀಯವಾಗಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ಶಾಂತಾ ಹೊಸಮನಿ ಯತ್ನಿಸಿದ್ದರು ಎಂಬ ಗಂಭೀರ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ. ಆ ಸಮಯದಲ್ಲಿ ಆಯೋಗದ ಇತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅಂತಿಮ ಪಟ್ಟಿ ಪ್ರಕಟಣೆ ತಡೆಹಿಡಿಯಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಪಸಮಿತಿಯಿಂದ ಹೊರಗಿಡಲಾಗಿತ್ತು.