ಬೆಂಗಳೂರು: ಟಾಟಾ ಐಪಿಎಲ್ 2026ರ ಮಹತ್ವದ ಫೈನಲ್ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲಗ್ಗೆ ಇಟ್ಟ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ದಿನಾಂಕ 31/05/2026 ರಂದು ನಡೆಯಲಿರುವ ಈ ಹೈವೋಲ್ಟೇಜ್ ಫೈನಲ್ ಪಂದ್ಯದ ನೆಪದಲ್ಲಿ ನಗರದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರದಂತೆ ತಡೆಯಲು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳು ಹಾಗೂ ಸಾರ್ವಜನಿಕ ಸಲಹೆಯನ್ನು ಒಳಗೊಂಡ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಫ್ಯಾನ್ಸ್ ಅತಿಯಾದ ಉತ್ಸಾಹಕ್ಕೆ ಬ್ರೇಕ್ ಹಾಕಲು ಪೊಲೀಸರು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.
ಕಳೆದ ವರ್ಷದ ದುರಂತದ ಹಿನ್ನೆಲೆ:
2025ರ ಜೂನ್ 4ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ (Stampede) 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು ಮತ್ತು 33ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ಕಹಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯು ಈ ಬಾರಿ ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ನಿರ್ಧರಿಸಿದೆ.
ಹಾಗಾಗಿ, ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಹೊರಡಿಸಿರುವ ಪ್ರಮುಖ ಕರಾರುಗಳು ಇಲ್ಲಿವೆ:
ಪಟಾಕಿ ಹಾಗೂ ಅಪಾಯಕಾರಿ ವಸ್ತುಗಳ ಬಳಕೆಗೆ ಕಂಪ್ಲೀಟ್ ನಿಷೇಧ:
ಪಂದ್ಯದ ಫಲಿತಾಂಶ ಏನೇ ಬರಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಪಟಾಕಿಗಳನ್ನು ಸಿಡಿಸುವಂತಿಲ್ಲ (Bursting Crackers). ಜನನಿಬಿಡ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳನ್ನು (Dangerous Materials) ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಮೀರಿ ಪಟಾಕಿ ಹಚ್ಚಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು
ರಸ್ತೆಗಳಲ್ಲಿ ಸಂಭ್ರಮಾಚರಣೆಗೆ ನೋ ಎಂಟ್ರಿ:
ಫೈನಲ್ ಪಂದ್ಯದ ಮುಕ್ತಾಯದ ನಂತರ ಕ್ರಿಕೆಟ್ ಪ್ರೇಮಿಗಳು ರಸ್ತೆಗಿಳಿದು ಅಥವಾ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕೂಡಿ ವಿಜಯೋತ್ಸವ ಆಚರಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಪ್ರತಿಯೊಬ್ಬರೂ ಶಾಂತಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ವೀಲಿಂಗ್, ಬೈಕ್ ರ್ಯಾಲಿಗಳ ಮೇಲೆ ಹದ್ದಿನ ಕಣ್ಣು:
ಪಂದ್ಯದ ನೆಪದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿಗಳನ್ನು ಮಾಡುವುದು, ಅತಿವೇಗದ ಚಾಲನೆ, ಪ್ರಾಣಾಂತಿಕ ವೀಲಿಂಗ್ ಹಾಗೂ ಸ್ಟಂಟ್ಗಳನ್ನು ಮಾಡುವುದು, ಕರ್ಕಶ ಹಾರ್ನ್ ಬಳಸುವುದು ಮತ್ತು ರಸ್ತೆ ತಡೆ ಉಂಟುಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಂಚಾರ ಪೊಲೀಸರ (Traffic Police) ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ವಾಹನ ಸವಾರನೂ ಪಾಲಿಸಬೇಕು
ಮದ್ಯಪಾನ ಮತ್ತು ಅಸಭ್ಯ ವರ್ತನೆಗೆ ಇರಲಿದೆ ಹದ್ದಿನ ಕಣ್ಣು:
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವುದು, ಗಲಾಟೆ ಮಾಡುವುದು ಅಥವಾ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಪುಂಡರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪ್ರತಿಯೊಬ್ಬರೂ ಶಾಂತಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಸಲಾಗಿದೆ.
ಸೋಶಿಯಲ್ ಮೀಡಿಯಾ ಟ್ರೋಲ್ಸ್, ದ್ವೇಷಪೂರಿತ ಪೋಸ್ಟ್ಗಳ ಮೇಲೆ ನಿಗಾ:
ಸಾಮಾಜಿಕ ಜಾಲತಾಣಗಳಲ್ಲಿ (Social Media) ಯಾವುದೇ ರೀತಿಯ ಪ್ರಚೋದನಾತ್ಮಕ ಪೋಸ್ಟ್ಗಳು, ದ್ವೇಷಪೂರಿತ ಸಂದೇಶಗಳು ಅಥವಾ ಸುಳ್ಳು ವದಂತಿಗಳನ್ನು ಹರಡುವ ಖಾತೆಗಳ ಮೇಲೆ ಸೈಬರ್ ಕ್ರೈಮ್ ಪೊಲೀಸರು ನಿಗಾ ಇಟ್ಟಿದ್ದಾರೆ. ಪಂದ್ಯದ ಫಲಿತಾಂಶ ಏನೇ ಬರಲಿ, ಎದುರಾಳಿ ಅಥವಾ ಇತರೆ ತಂಡಗಳ ಅಭಿಮಾನಿಗಳನ್ನು ಕೆಣಕುವುದು, ಅವಮಾನಿಸುವುದು ಅಥವಾ ಜಗಳಕ್ಕೆ ಕಾರಣವಾಗುವಂತೆ ವರ್ತಿಸುವುದನ್ನು ಬ್ಯಾನ್ ಮಾಡಲಾಗಿದೆ.
ಪೊಲೀಸ್ ಇಲಾಖೆಯ ಖಡಕ್ ಮನವಿ:
ನಗರದಲ್ಲಿ ಕಾನೂನು-ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಕೇವಲ ಪೊಲೀಸರದ್ದಷ್ಟೇ ಅಲ್ಲ, ಅದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಮತ್ತು ಕ್ರಿಕೆಟ್ ಅಭಿಮಾನಿಯ ಕರ್ತವ್ಯವಾಗಿದೆ ಎಂದು ಕಮಿಷನರ್ ಕಛೇರಿ ತಿಳಿಸಿದೆ.