ಬೆಂಗಳೂರು: ವಿಶ್ವ ಕ್ರಿಕೆಟ್ನ ರನ್ ಮಷೀನ್, ಶತಕಗಳ ಸರದಾರ್, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಹೌದು, ವಿರಾಟ್ ಕೊಹ್ಲಿ (Virat Kohli) ಅಂದ್ರೆ ಮೈದಾನದಲ್ಲಿ ಅಗ್ರೆಸ್ಸಿವ್ ಲುಕ್ ನೆನಪಾಗುತ್ತೆ. ಆದರೆ, ಇಂತಹ ದಿಗ್ಗಜ ಆಟಗಾರನಿಗೂ ಕಠಿಣ ಹಂತದಲ್ಲಿ ತೀವ್ರ ಮಾನಸಿಕ ಸವಾಲುಗಳು ಎದುರಾಗಿದ್ದವು ಎಂದರೆ ನೀವು ನಂಬಲೇಬೇಕು. ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದ ನಂತರ ಎದುರಾದ ಸಂಕಷ್ಟ, ಸತತ 3 ವರ್ಷ ಕಾಡಿದ ಶತಕದ ಬರ ಹಾಗೂ ಕ್ರೀಡಾಪಟುಗಳನ್ನು ಕಾಡುವ ಇಂಪೋಸ್ಟರ್ ಸಿಂಡ್ರೋಮ್ (Impostor Syndrome) ನಿಂದ ತಾವು ಹೇಗೆ ನರಕಯಾತನೆ ಅನುಭವಿಸಿದೆ ಎಂಬುದನ್ನು ಕೊಹ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಆರ್ಸಿಬಿ ಇನ್ನೋವೇಶನ್ ಲ್ಯಾಬ್ಸ್ನ ಇಂಡಿಯನ್ ಸ್ಪೋರ್ಟ್ಸ್ ಸಮ್ಮಿಟ್ನಲ್ಲಿ ಮಾತನಾಡಿದ ಕೊಹ್ಲಿ, ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ದಿನಗಳ ಹಾಗೂ ತಮಗೆ ಬೆನ್ನೆಲುಬಾಗಿ ನಿಂತ ಮಾಜಿ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ಅವರ ಕಾಳಜಿಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ:
9 ವರ್ಷ ಯಾರೂ ನನ್ನನ್ನು ವಿಚಾರಿಸಲೇ ಇಲ್ಲ: ನಾಯಕತ್ವದ ಕಹಿ ನೆನಪು
ದೀರ್ಘಕಾಲದವರೆಗೆ ಭಾರತ ತಂಡದ ನಾಯಕನಾಗಿ ಕಾರ್ಯನಿರ್ವಹಿಸುವುದು ಮಾನಸಿಕವಾಗಿ ಎಷ್ಟು ಕಠಿಣವಾಗಿತ್ತು ಎಂಬುದನ್ನು ಕೊಹ್ಲಿ ಬಿಚ್ಚಿಟ್ಟಿದ್ದಾರೆ. “ನಾಯಕನಾಗಿದ್ದಾಗ ನೀವು ಸದಾ ಇತರರ ಬಗ್ಗೆ ಯೋಚಿಸುತ್ತೀರಿ, ನಿಮ್ಮ ಬಗ್ಗೆ ಗಮನ ಹರಿಸಲು ಸಾಧ್ಯವೇ ಇರುವುದಿಲ್ಲ. ಯಾರಾದರೂ ಬಂದು ‘ನೀವು ಚೆನ್ನಾಗಿದ್ದೀರಾ? ಎಂದು ಕೇಳುತ್ತಾರೆ ಎಂದು ನೀವು ಯೋಚಿಸುವುದೂ ಇಲ್ಲ. ನಾನು ಹಿಂದೆ ತಿರುಗಿ ನೋಡಿದಾಗ ಒಂದು ವಿಷಯ ಅರಿವಾಯಿತು ಕಳೆದ ಒಂಬತ್ತು ವರ್ಷಗಳಲ್ಲಿ ಯಾರೂ ಕೂಡ ನನ್ನ ಬಳಿ ಬಂದು ‘ನೀವು ಹೇಗಿದ್ದೀರಿ ವಿರಾಟ್?’ ಎಂಬ ಒಂದು ಸಣ್ಣ ಪ್ರಶ್ನೆಯನ್ನು ಕೇಳಿಯೇ ಇರಲಿಲ್ಲ ಆದರೆ ಎಲ್ಲವನ್ನೂ ನಾನೇ ನಿಭಾಯಿಸಲು ಶಕ್ತನಾಗಿದ್ದೆ” ಎಂದು ಕೊಹ್ಲಿ ನಾಯಕತ್ವದ ಹಿಂದಿನ ಒಂಟಿತನ ಮತ್ತು ಒತ್ತಡವನ್ನು ತೋಡಿಕೊಂಡಿದ್ದಾರೆ.
ಏನಿದು ಇಂಪೋಸ್ಟರ್ ಸಿಂಡ್ರೋಮ್?: ಕೊಹ್ಲಿ ಬಿಚ್ಚಿಟ್ಟ ಸತ್ಯ
ಇಂಪೋಸ್ಟರ್ ಸಿಂಡ್ರೋಮ್ ಎನ್ನುವುದು ಒಂದು ವಿಚಿತ್ರ ಮಾನಸಿಕ ಸ್ಥಿತಿ. ಇದರಲ್ಲಿ ವ್ಯಕ್ತಿಯು ಎಷ್ಟೇ ಯಶಸ್ಸು ಸಾಧಿಸಿದ್ದರೂ, ತನ್ನ ಸ್ವಂತ ಸಾಮರ್ಥ್ಯದ ಬಗ್ಗೆ ತನಗೇ ನಿರಂತರವಾಗಿ ಸಂಶಯ ಮೂಡುತ್ತಿರುತ್ತದೆ.
ಒಬ್ಬ ಆಟಗಾರನಾಗಿ ನೀವು ಯಾವಾಗಲೂ ಎಚ್ಚರಿಕೆ ಮತ್ತು ಅಭದ್ರತೆಯ ನಡುವಿನ ಅತ್ಯಂತ ತೆಳುವಾದ ಗೆರೆಯ ಮೇಲೆ ನಡೆಯುತ್ತಿರುತ್ತೀರಿ. ನಾವು ಇಂದಿಗೂ ಸಾಲದು ಎಂಬ ಭಾವನೆ ಕಾಡುತ್ತಲೇ ಇರುತ್ತದೆ. ನಾನು ಇವತ್ತಿಗೂ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಹೋದಾಗ, ಅಲ್ಲೇ ಇರುವ ಯುವ ಆಟಗಾರರು ನನ್ನನ್ನು ನೋಡುತ್ತಿರುತ್ತಾರೆ. ಒಂದು ವೇಳೆ ಆ ಸೆಷನ್ನಲ್ಲಿ ನಾನು ಬ್ಯಾಟಿಂಗ್ ಸರಿಯಾಗಿ ಮಾಡದಿದ್ದರೆ, ‘ಕಳೆದ 20 ವರ್ಷಗಳಿಂದ ಕ್ರಿಕೆಟ್ ಆಡ್ತಿರೋ ಆಟಗಾರ ಇವನೇನಾ?’ ಎಂದು ಆ ಯುವಕರು ಆಶ್ಚರ್ಯಪಡಬಹುದು ಎಂಬ ಭಯ ನನ್ನನ್ನು ಸದಾ ಕಾಡುತ್ತದೆ” ಎಂದು ಕೊಹ್ಲಿ ತಮ್ಮ ಮನದಾಳದ ಆತಂಕವನ್ನು ಒಪ್ಪಿಕೊಂಡಿದ್ದಾರೆ.
ದ್ರಾವಿಡ್-ರಾಠೋಡ್ ಜೋಡಿ ನೀಡಿದ ಲೈಫ್ಲೈನ್
ಕೊಹ್ಲಿ ಅವರು ಟಿ20 ಮತ್ತು ಏಕದಿನ ನಾಯಕತ್ವದಿಂದ ಮುಕ್ತಗೊಂಡು, ನಂತರ ಟೆಸ್ಟ್ ನಾಯಕತ್ವಕ್ಕೂ ರಾಜೀನಾಮೆ ನೀಡಿದ ಅವಧಿಯಲ್ಲೇ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ನಿಯುಕ್ತರಾಗಿದ್ದರು. ಆ ಸಮಯದಲ್ಲಿ ಕೊಹ್ಲಿ ತೀವ್ರ ಫಾರ್ಮ್ ಔಟ್ ಎದುರಿಸುತ್ತಿದ್ದರು.
ರಾಹುಲ್ ಭಾಯ್ ಸ್ವತಃ ಅಂತರರಾಷ್ಟ್ರ ಮಟ್ಟದಲ್ಲಿ ಇಂತಹದ್ದೇ ಸ್ಥಿತಿಯನ್ನು ಅನುಭವಿಸಿದ್ದರಿಂದ ನನ್ನ ನೋವನ್ನು ಸುಲಭವಾಗಿ ಅರ್ಥಮಾಡಿಕೊಂಡರು. ವಿಕ್ರಮ್ ರಾಥೋಡ್ ಕೂಡ ನನ್ನನ್ನು ಮಾನಸಿಕವಾಗಿ ಅತ್ಯಂತ ಪ್ರೀತಿಯಿಂದ ನೋಡಿಕೊಂಡರು. ಅವರು ನನ್ನ ಹಳೆಯ ಸಾಧನೆಗಳನ್ನು ನೆನಪಿಸಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ನಾನು ಮರಳಿ ಕ್ರಿಕೆಟ್ ಆನಂದಿಸುವಂತೆ ಮಾಡಿದರು. ನಾನು ಯಾವಾಗ ಅವರನ್ನು ಭೇಟಿಯಾದಾಗಲೂ ಹೃದಯದಾಳದಿಂದ ಧನ್ಯವಾದ ಹೇಳುತ್ತೇನೆ. ಏಕೆಂದರೆ ಅವರು ತೋರಿಸಿದ ಕಾಳಜಿಯೇ ನನ್ನನ್ನು ಅವರಿಗಾಗಿ ಮೈದಾನದಲ್ಲಿ ಕಷ್ಟಪಟ್ಟು ರನ್ ಗಳಿಸುವಂತೆ ಪ್ರೇರೇಪಿಸಿತು” ಎಂದು ಕೊಹ್ಲಿ ಭಾವುಕರಾಗಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಅಬ್ಬರ
ಕಳೆದ ವರ್ಷವಷ್ಟೇ ಟೆಸ್ಟ್ ಹಾಗೂ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿರುವ ಕೊಹ್ಲಿ, ಏಕದಿನ ಮಾದರಿಯಲ್ಲಿ ಮುಂದುವರಿದಿದ್ದಾರೆ. ಸದ್ಯ ನಡೆಯುತ್ತಿರುವ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಪರ ಭರ್ಜರಿ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ ಈಗಾಗಲೇ 500+ ರನ್ ಕಲೆಹಾಕಿ ಆರೆಂಜ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮನ್ನು ಮಾನಸಿಕವಾಗಿ ಸಧೃಡಗೊಳಿಸಿದ ಗುರುಗಳಿಗೆ ಕೊಹ್ಲಿ ಮೈದಾನದ ಪ್ರದರ್ಶನದ ಮೂಲಕವೇ ಸೂಕ್ತ ಗುರುದಕ್ಷಿಣೆ ನೀಡುತ್ತಿದ್ದಾರೆ.