ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಸದ್ಯ ಯಾವ ನಾಲ್ಕು ತಂಡಗಳು ಪ್ಲೇಆಫ್ಗೆ ಲಗ್ಗೆ ಇಡಲಿವೆ ಎಂಬ ಪ್ರಶ್ನೆ ಎದ್ದಿದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಯಶಸ್ವಿಯಾಗಿ ಪ್ಲೇಆಫ್ಗೆ ತಲುಪಿದ್ದು, ಇನ್ನುಳಿದ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.
ಇನ್ನು ಇದೇ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚೆಪಾಕ್ನಲ್ಲೇ ಮಣಿಸಿ ಪ್ಲೇಆಫ್ ಪ್ರವೇಶ ಪಡೆದುಕೊಂಡಿತು. ಟೂರ್ನಿ ಆರಂಭಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಒಂದು ಡಮ್ಮಿ ತಂಡ, ಅವರು ಯಾವುದೇ ಕಾರಣಕ್ಕೂ ಪ್ಲೇಆಫ್ಗೆ ಬರುವುದಿಲ್ಲ ಎಂದು ಗೇಲಿ ಮಾಡಿದ್ದರು.
ಈ ಪೈಕಿ ತೆಲುಗಿನವರೇ ಆದ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಸಹ ನಾಲ್ಕು ತಂಡಗಳನ್ನು ಆರಿಸಿ ಸನ್ ರೈಸರ್ಸ್ ಹೈದರಾಬಾದ್ ಹೆಸರನ್ನು ಕೈಬಿಟ್ಟಿದ್ದರು. ಓರ್ವ ತೆಲುಗು ಕ್ರಿಕೆಟಿಗನಾಗಿ ತಮ್ಮದೇ ಸನ್ ರೈಸರ್ಸ್ ತಂಡವನ್ನು ಕಡೆಗಣಿಸಿದ್ದು ಅವರ ಅಭಿಮಾನಿಗಳಲ್ಲಿ ಬೇಸರವಿತ್ತು.
ಈ ಬೇಸರ ದ್ವೇಷಕ್ಕೆ ತಿರುಗಿದ್ದು ಇದೇ ಹನುಮ ವಿಹಾರಿ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಪಿಚ್ನಲ್ಲಿ ಮಾತ್ರ ಅಬ್ಬರಿಸುವ ತಂಡ ಎಂದು ನಾಲಿಗೆ ಹರಿಬಿಟ್ಟಾಗ ಹಾಗೂ 2016ರಲ್ಲಿ ಅವರು ಕಪ್ ಗೆದ್ದದ್ದು ರಶೀದ್ ಖಾನ್ ಅವರಿಂದ ಎಂದಾಗ. ಅಸಲಿಗೆ ರಶೀದ್ ಖಾನ್ ಸನ್ ರೈಸರ್ಸ್ ತಂಡ ಸೇರಿದ್ದು 2017ರಲ್ಲಿ ಎಂಬ ಮಾಹಿತಿ ತಿಳಿಯದೇ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿದ್ದ ಹನುಮ ವಿಹಾರಿ ಸನ್ ರೈಸರ್ಸ್ ಫ್ಯಾನ್ಸ್ ಪಾಲಿಗೆ ಅಂದೇ ಜೋಕರ್ ಆಗಿಬಿಟ್ಟರು.
ಅಂದಿನಿಂದ ಶುರುವಾದ ಈ ಕ್ರಿಕೆಟಿಗನ ಮೇಲಿನ ಟ್ರೋಲ್ ಆತ ಪದೇಪದೇ ಸನ್ ರೈಸರ್ಸ್ ವಿರುದ್ಧ ಮಾತನಾಡುವಂತೆ ಮಾಡಿತು. ಈ ಅಂಬಾಟಿ ರಾಯುಡು ಆಗಾಗ ಆರ್ಸಿಬಿ ಕೆಣಕಿದ ರೀತಿಯದ್ದೇ ಕಥೆ ಇದು.
ಹೀಗೆ ಶುರುವಾದ ಹನುಮ ವಿಹಾರಿ ಹಾಗೂ ಹೈದರಾಬಾದ್ ಫ್ಯಾನ್ಸ್ ನಡುವಿನ ವಾರ್ ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೆ ತಿರುಗಿತು. ಹಲವು ದಿನಗಳ ಕಾಲ ಇದನ್ನು ಎದುರಿಸಿದ ಹನುಮ ವಿಹಾರಿ ತಡೆದುಕೊಳ್ಳಲಾಗದೇ ಸದ್ಯ ಈ ಕುರಿತು ವಿಡಿಯೊ ಮಾಡಿದ್ದು, ‘ನಾನು ಕ್ರಿಕೆಟಿಗನಾಗಿ ಕಾಮೆಂಟ್ ಮಾಡಿದೆ, ಆದರೆ ನೀವು ಅಮ್ಮ, ಅಕ್ಕ ಎಂದು ನಿಂದಿಸುತ್ತೀರ. ಓರ್ವ ತೆಲುಗು ಕ್ರಿಕೆಟಿಗನಿಗೆ ನೀವು ನೀಡುವ ಗೌರವ ಇದೇನಾ? ನಿಮ್ಮ ಮನೆಯಲ್ಲೂ ಅಮ್ಮ, ಅಕ್ಕ ಇದ್ದಾರೆ ಅವರನ್ನೂ ಸಹ ಹೀಗೆಯೇ ಬಯ್ಯುತ್ತೀರಾ? ನಾನು ತೆಲುಗು ರಾಜ್ಯದವನು ಎಂಬ ಕಾರಣಕ್ಕೆ ಸನ್ರೈಸರ್ಸ್ಗೆ ಬೆಂಬಲ ನೀಡಬೇಕು ಎನ್ನುವವರು ಕೊಡುವ ಗೌರವ ಸರಿ ಇದೆಯಾ? ತೆಲುಗು ರಾಜ್ಯದವನು ಎಂಬ ಮಾತ್ರಕ್ಕೆ ನಾನು ಸನ್ರೈಸರ್ಸ್ಗೆ ಬೆಂಬಲ ನೀಡಬೇಕು ಎಂದೇನಿಲ್ಲ. ಐಪಿಎಲ್ ಎಂಬುದು ಒಂದು ಬ್ಯುಸಿನೆಸ್, ಅದನ್ನು ಅರ್ಥ ಮಾಡಿಕೊಳ್ಳಿ’ ಎಂದು ಕಿಡಿಕಾರಿದ್ದಾರೆ.
Indian Cricketer 