ನಿನ್ನೆ ( ಮೇ 22 ) ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 55 ರನ್ಗಳ ಅಮೋಘ ಗೆಲುವು ದಾಖಲಿಸಿತು.
ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಈ ಪಂದ್ಯದ ಫಲಿತಾಂಶ ಪ್ಲೇಆಫ್ ಸುತ್ತಿನ ಪಂದ್ಯಗಳ ನಿರ್ಧಾರ ಮಾಡುತ್ತಿತ್ತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.
ಇನ್ನು ಈ ಪಂದ್ಯದಲ್ಲಿ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನೇ ಮುಂದುವರಿಸಿದೆ. ಸನ್ ರೈಸರ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ 166 ರನ್ ಗಳಿಸಿದ್ರೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಸಿಗುವುದು ಪಕ್ಕಾ ಆಗಿತ್ತು. ಆರ್ಸಿಬಿ 200 ರನ್ ಗಳಿಸಿ ಸೋತರೂ ಸಹ ನೆಟ್ ರನ್ ರೇಟ್ ಕಾರಣಕ್ಕೆ ಅಗ್ರಸ್ಥಾನದಲ್ಲಿದೆ.
ಹೀಗೆ ಕ್ವಾಲಿಫಯರ್ ಪಂದ್ಯವನ್ನಾಡಲು ಆರ್ಸಿಬಿ ಅರ್ಹತೆ ಪಡೆದುಕೊಂಡಿದ್ದು, ಮೇ 26ರಂದು ನಡೆಯಲಿರುವ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಈ ರೀತಿ ಯಶಸ್ವಿಯಾಗಿ ಒಂದನೇ ಕ್ವಾಲಿಫಯರ್ ಪಂದ್ಯವನ್ನಾಡುವ ಅವಕಾಶ ಪಡೆದುಕೊಂಡಿರುವ ಆರ್ಸಿಬಿ ಸನ್ ರೈಸರ್ಸ್ ವಿರುದ್ಧ ಸೋತ ಕಾರಣಕ್ಕೆ ಟ್ರೋಲ್ ಆಗಿದೆ. ಜತೆಗೆ ತಂಡದ ಸ್ಪಿನ್ನರ್ ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಸಹ ಟ್ರೋಲ್ಗೀಡಾಗಿದೆ. ಟೂರ್ನಿಯ ಆರಂಭದಿಂದಲೂ ಸಹ ಟ್ರೋಲ್ ಆಗಿರುವ ಕೃನಾಲ್ ಪಾಂಡ್ಯ ನಿನ್ನೆ ಬೌಲಿಂಗ್ ಮಾಡಿದ್ದನ್ನು ಕಂಡು ಕ್ರೀಡಾಂಗಣದಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯ ಮಾರನ್ ಆತನ ಬೌಲಿಂಗ್ ನೋಡಿ ಅನುಮಾನಾಸ್ಪದವಾಗಿದೆ ಎಂದು ಪಕ್ಕದಲ್ಲಿದ್ದ ನಟ ವಿಕ್ಟರಿ ವೆಂಕಟೇಶ್ ಬಳಿ ದೂರಿದ್ದಾರೆ.
ಈ ವಿಡಿಯೊವನ್ನು ಅಭಿಮಾನಿಯೊಬ್ಬರು ಸೆರೆ ಹಿಡಿದಿದ್ದಾರೆ. ಕಾವ್ಯ ಮಾರನ್ ಕೋಪದಿಂದ ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಟೀಕೆ ಮಾಡಿದ್ದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ವಿಡಿಯೊ ಹಂಚಿಕೊಂಡಿರುವ ಹಲವು ನೆಟ್ಟಿಗರು ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಬಿಸಿಸಿಐ ಇದನ್ನು ಪರಿಶೀಲಿಸಬೇಕು ಎಂದು ಬರೆದುಕೊಂಡಿದ್ದಾರೆ.


(@rohann__45)