ಇತ್ತೀಚೆಗಷ್ಟೇ ಕ್ರಿಕೆಟ್ ಪ್ರಿಯರ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿ ಮುಕ್ತಾಯಗೊಂಡಿದೆ. ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.
ಫೈನಲ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿ ಗುಜರಾತ್ ಸೋಲಿಗೆ ಪ್ರಮುಖ ಕಾರಣಕರ್ತನಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ ಭಾರೀ ಟ್ರೆಂಡ್ ಆದರು. ಮತ್ತೊಮ್ಮೆ ಐಪಿಎಲ್ ಪ್ರೇಮಿಗಳ ಪಾಲಿಗೆ ಹೀರೊ ಆದ ಕೊಹ್ಲಿಯನ್ನು ಅವರ ಫ್ಯಾನ್ಸ್ ಕೊಂಡಾಡಿದರು.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಅಬ್ಬರಿಸಿದ ಕೊಹ್ಲಿ ಕುರಿತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆತನೊಬ್ಬ ಬಕೆಟ್ ಎಂದು ಬಿಂಬಿಸುವ ಪೋಸ್ಟ್ವೊಂದು ಹರಿದಾಡಿದ್ದು, ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಹೌದು, ಮೋಹಿತ್ ಚೌಹಾಣ್ ಎಂಬ ಎಕ್ಸ್ ಬಳಕೆದಾರ ಈ ಬಗ್ಗೆ ಟ್ವೀಟ್ ಮಾಡಿದ್ದು, ಶಾಶ್ವತವಾಗಿ ಭಾರತ ಬಿಟ್ಟು ಲಂಡನ್ಗೆ ಹೋಗಿ ಸೆಟಲ್ ಆಗಿರುವ ಕೊಹ್ಲಿ ಆ ನಂತರ ಮೋದಿ ಹುಟ್ಟುಹಬ್ಬಕ್ಕೆ ಹಣ ಪಡೆದು ಪೋಸ್ಟ್ ಹಾಕ್ತಾನೆ, ಅಂಬಾನಿ ಒಡೆತನದ ಖಾಸಗಿ ಮೃಗಾಲಯದ ಬಗ್ಗೆ ಹಣ ಪಡೆದು ಪೋಸ್ಟ್ ಹಾಕ್ತಾನೆ, ಪ್ರೊಪಗಾಂಡಾ ಚಿತ್ರ ಧುರಂಧರ್ ಬಗ್ಗೆ ಹಣ ಪಡೆದು ಪೋಸ್ಟ್ ಹಾಕ್ತಾನೆ, ಆದರೆ ಮೋದಿ ಹಾಗೂ ಆತನ ಸರ್ಕಾರದಿಂದ ಬಳಲುತ್ತಿರುವ ಯುವ ಸಮೂಹದ ಬಗ್ಗೆ ಕೊಹ್ಲಿ ಒಂದೇ ಒಂದು ಪೋಸ್ಟ್ ಹಾಕುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಸದ್ಯ ದೇಶದಲ್ಲಿ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನಿರುದ್ಯೋಗ ಸಮಸ್ಯೆ ಕುರಿತು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ವಿವಾದ ಎಬ್ಬಿಸಿದ್ದು, ಈ ಕುರಿತು ಕೊಹ್ಲಿ ಬಾಯಿ ಬಿಡದ ಕಾರಣಕ್ಕೆ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬರುತ್ತಿದ್ದು, ಕೊಹ್ಲಿ ಏನಾದರೂ ಇದರ ವಿರುದ್ಧ ಪೋಸ್ಟ್ ಹಾಕಿಬಿಟ್ಟರೆ ಆತ ಐಪಿಎಲ್ನಲ್ಲಿ ಇರುವುದೇ ಇಲ್ಲ ಎಂದು ಹಲವರು ಹಂಗಿಸಿದ್ದಾರೆ. ಇನ್ನೂ ಕೆಲವರು ಅದೇ ಕಾರಣಕ್ಕೆ ಆತ ಇನ್ನೂ ಐಪಿಎಲ್ನಲ್ಲಿ ಉಳಿದುಕೊಂಡಿದ್ದಾನೆ, ಬಕೆಟ್ ಹಿಡಿಯುವುದನ್ನು ಬಿಟ್ಟರೆ ಐಪಿಎಲ್ನಿಂದ ಆತನನ್ನು ಕೈಬಿಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.