ಭಾರತ ಟಿ೨೦ ಕ್ರಿಕೆಟ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್, ತಮ್ಮ ನಾಯಕತ್ವದ ಶೈಲಿ ಮತ್ತು ಸಿದ್ಧಾಂತಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ನಾಯಕತ್ವದ ಜವಾಬ್ದಾರಿಯನ್ನು ಒಂದು ಸವಾಲಾಗಿ ಸ್ವೀಕರಿಸುವುದಾಗಿ ಹೇಳಿದ್ದಲ್ಲದೆ, ತಾವು ಯಾರ ನೆರಳಿನಲ್ಲೂ ಇರಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಂಡಕ್ಕೆ ಮರಳಿದ ಬೆನ್ನಲ್ಲೇ ಒಲಿದ ನಾಯಕತ್ವದ ಗರಿ
ಶ್ರೇಯಸ್ ಅಯ್ಯರ್ ಕೊನೆಯದಾಗಿ ೨೦೨೩ರ ಡಿಸೆಂಬರ್ನಲ್ಲಿ ಭಾರತ ಪರ ಟಿ೨೦ ಪಂದ್ಯ ಆಡಿದ್ದರು. ಆ ನಂತರ ನಡೆದ ಟಿ೨೦ ವಿಶ್ವಕಪ್ ಮತ್ತು ಏಷ್ಯಾ ಕಪ್ ಸರಣಿಗಳಿಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಈ ಎರಡೂ ಪ್ರಮುಖ ಟೂರ್ನಿಗಳಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸೂರ್ಯಕುಮಾರ್ ಅವರ ಪ್ರದರ್ಶನ ಮಂಕಾಗಿದ್ದರೆ, ಶ್ರೇಯಸ್ ಅಯ್ಯರ್ ಮಾತ್ರ ಐಪಿಎಲ್ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಸೂರ್ಯಕುಮಾರ್ ಯಾದವ್ ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿದ್ದಲ್ಲದೆ, ತಂಡದ ಚುಕ್ಕಾಣಿಯನ್ನೂ ಅವರ ಕೈಗೊಪ್ಪಿಸಿದೆ.
ನನ್ನ ವ್ಯಕ್ತಿತ್ವ ಬದಲಾಗುವುದಿಲ್ಲ ಎಂದ ಅಯ್ಯರ್
ತಮಗೆ ಸಿಕ್ಕಿರುವ ಹೊಸ ಜವಾಬ್ದಾರಿಯ ಕುರಿತು ಮಾತನಾಡಿದ ಶ್ರೇಯಸ್, “ನಾಯಕನಾಗಿ ಜವಾಬ್ದಾರಿ ಸಿಕ್ಕಿರುವುದು ದೊಡ್ಡ ಸವಾಲು. ಆದರೆ ಇದಕ್ಕಾಗಿ ನಾನು ನನ್ನ ಮೂಲ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದಿಲ್ಲ. ನಾನು ಮೊದಲಿನಿಂದಲೂ ಹೆಗಿದ್ದೇನೋ ಹಾಗೇ ಇರುತ್ತೇನೆ. ಬೇರೆಯವರಂತೆ ನಟಿಸಲು ಅಥವಾ ಯಾರದ್ದೋ ನೆರಳಿನಡಿ ಕೆಲಸ ಮಾಡಲು ನಾನು ಇಷ್ಟಪಡುವುದಿಲ್ಲ” ಎಂದು ಕಟುವಾಗಿ ಹೇಳಿದ್ದಾರೆ.
ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್, ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ವರೆಗೂ ಮುನ್ನಡೆಸಿದ್ದರು. ಆದರೆ, ಕೆಕೆಆರ್ ತಂಡ ಗೆದ್ದಾಗ ಶ್ರೇಯಸ್ ನಾಯಕತ್ವಕ್ಕಿಂತ ಹೆಚ್ಚಾಗಿ ಅಂದಿನ ತಂಡದ ಮೆಂಟರ್ ಗೌತಮ್ ಗಂಭೀರ್ ಅವರಿಗೆ ಯಶಸ್ಸಿನ ಕ್ರೆಡಿಟ್ ನೀಡಲಾಗಿತ್ತು. ಇದೀಗ ಟಿ೨೦ ಕ್ರಿಕೆಟ್ನಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ಹಾಗೂ ಶ್ರೇಯಸ್ ಅಯ್ಯರ್ ನಾಯಕನಾಗಿ ಮತ್ತೆ ಒಂದಾಗುತ್ತಿದ್ದು, ಇವರಿಬ್ಬರ ಜುಗಲ್ಬಂದಿ ಭಾರತೀಯ ಕ್ರಿಕೆಟ್ನ ಭವಿಷ್ಯವನ್ನು ಹೇಗೆ ರೂಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೇಯಸ್ ಹೇಳಿದ್ದು ಯಾರ ಬಗ್ಗೆ?
ಸದ್ಯ ಶ್ರೇಯಸ್ ಐಯ್ಯರ್ ಅವರ ಈ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದ್ದು, ಶ್ರೇಯಸ್ ಪರೋಕ್ಷವಾಗಿ ಈ ಕೌಂಟರ್ ಕೊಟ್ಟಿದ್ದು ಯಾರ ಬಗ್ಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭಗೊಂಡಿವೆ. ಅದರಲ್ಲೂ ಬೇರೆಯವರಂತೆ ಎಂದು ಸ್ವತಃ ಶ್ರೇಯಸ್ ಉಲ್ಲೇಖಿಸಿರುವುದನ್ನು ನೋಡಿದರೆ ಅವರು ಯಾರನ್ನೋ ಗುರಿಯಾಗಿಸಿಕೊಂಡೇ ಈ ಹೇಳಿಕೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
