ಇತ್ತೀಚೆಗಷ್ಟೆ ಮುಂಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಪ್ರಕಟವಾದ ಭಾರತ ತಂಡದಲ್ಲಿ ಸ್ಥಾನ ಪಡೆಯದ ಕೊಹ್ಲಿ ಚರ್ಚೆಗೀಡಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಸಹ ಪಡೆದಿದ್ದ ಕೊಹ್ಲಿ ಮಂಡಿರಜ್ಜು ಗಾಯಕ್ಕೊಳಗಾದ ಕಾರಣ ಅಫ್ಘಾನಿಸ್ತಾನದ ಸರಣಿಯಲ್ಲಿ ಸ್ಥಾನ ಸಿಗದೇ ಹೊರಗುಳಿದಿದ್ದಾರೆ.
ಹೀಗೆ ಮುಂದಿನ ಅಂತಾರಾಷ್ಟ್ರೀಯ ಸರಣಿಗೆ ಅಲಭ್ಯರಾದ ಸುದ್ದಿ ಹೊರಬಿದ್ದಾಗ ಭಾರತದಲ್ಲೇ ಇದ್ದ ವಿರಾಟ್ ಕೊಹ್ಲಿ ಬಳಿಕ ತಮ್ಮ ವಾಸ ಸ್ಥಳ ಲಂಡನ್ಗೆ ವಾಪಸ್ಸಾದರು. ಹೀಗೆ ವಾಪಸ್ ಆಗುವ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗೃಹ ಸಚಿವಾಲಯ ಹೊಸದಾಗಿ ಪರಿಚಯಿಸಿರುವ ಇ – ಗೇಟ್ ಇಮಿಗ್ರೇಷನ್ ಸಿಸ್ಟಮ್ ಬಗ್ಗೆ ವಿಶೇಷವಾಗಿ ಮಾತನಾಡಿ ಪ್ರಚಾರ ಮಾಡಿದ್ದಾರೆ.
ಈ ವಿಡಿಯೊದಲ್ಲಿ ವಿದೇಶಿ ಪ್ರಯಾಣ ಮಾಡುವವರಿಗೆ ಇದು ಅತ್ಯಂತ ಸಹಾಯಕಾರಿ, ತಾನು ಹೆಚ್ಚಾಗಿ ಪ್ರಯಾಣ ಮಾಡುವ ಕಾರಣ ತನಗಿದು ಸಹಾಯ ಮಾಡುತ್ತದೆ ಎಂದು ಉಲ್ಲೇಖಿಸಿರುವ ಕೊಹ್ಲಿ ಇದು ವೇಗವಾಗಿ ಇಮಿಗ್ರೇಷನ್ ಪ್ರಕ್ರಿಯೆಗಳನ್ನು ಮಾಡಿ ಮುಗಿಸಲಿದೆ ಎಂದು ಕೊಂಡಾಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಹಲವಾರು ನೆಟ್ಟಿಗರು ಮತ್ತೊಮ್ಮೆ ಕೊಹ್ಲಿಯನ್ನು ಮೋದಿ ಬಕೆಟ್ ಎಂದಿದ್ದಾರೆ. ಹೌದು, ಲಕ್ಷಾಂತರ ಯುವ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಯಾವುದೇ ದನಿ ಎತ್ತಲಿಲ್ಲ ಎಂದು ಅವರ ವಿರುದ್ಧ ಶುರುವಾದ ಹಲವು ಭಾರತೀಯರ ಆಕ್ರೋಶ ಈ ವಿಡಿಯೊ ಬಳಿಕವೂ ಮುಂದುವರಿದಿದೆ.
ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಷ್ ಮಾಡಲು ಆಗುತ್ತೆ, ಅಂಬಾನಿ ಖಾಸಗಿ ಮೃಗಾಲಯಕ್ಕೆ ಪ್ರಚಾರ ಮಾಡಲು ಆಗುತ್ತೆ, ಆದರೆ ತನ್ನನ್ನು ಆರಾಧಿಸುವ ಯುವ ಜನತೆಯ ಕಷ್ಟದ ವಿರುದ್ಧ ದನಿ ಎತ್ತಲು ಆಗದ ಈತ ಓರ್ವ ಮೋದಿ ಬಕೆಟ್ ಎಂದು ಕಿಡಿಕಾರಿದ್ದ ಜನರು ಮತ್ತೆ ಮೋದಿ ಸರ್ಕಾರದ ಒಂದು ಸಣ್ಣ ಯೋಜನೆ ಬಗ್ಗೆ ಪ್ರಚಾರ ಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಜನರು ಆತನನ್ನು ಉಲ್ಲೇಖಿಸಿ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆ ಕುರಿತು ದನಿ ಎತ್ತಿ ಯುವ ಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡರೂ ಕೇಳದ ಕೊಹ್ಲಿ ಕೇಂದ್ರ ಸರ್ಕಾರದ ಪರ ಇಂತಹ ವಿಡಿಯೊಗಳನ್ನು ಮಾಡಿ ಬಕೆಟ್ ಹಿಡಿಯಲು ಯಾವಾಗಲೂ ಸಿದ್ಧರಿರುತ್ತಾರೆ, ದೇಶ ಬಿಟ್ಟು ಲಂಡನ್ನಲ್ಲಿ ವಾಸಿಸುವ ಈತ ದೇಶದ ಯೋಜನೆಗಳ ಬಗ್ಗೆ ಮಾತನಾಡಲು ಅರ್ಹನೇ? ಆತನೊಬ್ಬ ಅಂಧಭಕ್ತ ಎಂದು ಕಾಮೆಂಟ್ ಮಾಡಿದ್ದಾರೆ.