ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಇಷ್ಟೊಂದು ಮತಗಳು ಬರುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆದರೆ ಇಲ್ಲಿ ಬಿದ್ದಿರುವುದು ಆತ್ಮಸಾಕ್ಷಿಯ ಮತಗಳು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ದೆಹಲಿ ಮಾಡೆಲ್ ಈಗ ಕರ್ನಾಟಕದಲ್ಲೂ ಅನುಷ್ಠಾನಗೊಂಡಿದೆ. ನಾವು ಬಿಜೆಪಿಯ ಮಾಡೆಲ್ ಅನ್ನೇ ಅನುಕರಿಸಿದ್ದೇವೆ. ಇದು ಕುದುರೆ ವ್ಯಾಪಾರ ಅಲ್ಲ ಬದಲಿಗೆ ಇದೊಂದು ರಾಜಕೀಯ ತಂತ್ರಗಾರಿಕೆ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು.
ಬೇರೆ ಪಕ್ಷದ ಯಾರಾದರೂ ನಮ್ಮ ಪಕ್ಷಕ್ಕೆ ಬರುವುದಾದರೆ ಅವಕಾಶ ಕಲ್ಪಿಸಬಹುದು. ಸಂದರ್ಭ ಬಂದಾಗ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದರೆ ಯಾವುದೇ ಅಭ್ಯಂತರವಿಲ್ಲ. ಇದು ಕುದುರೆ ವ್ಯಾಪಾರ ಅಲ್ಲ ಬದಲಿಗೆ ಇದೊಂದು ರಾಜಕೀಯ ತಂತ್ರಗಾರಿಕೆ ಅಷ್ಟೇ ಎಂದರು.
ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಎಂದು ಆರೋಪಿಸುತ್ತಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ, ಬಿಜೆಪಿಯಲ್ಲಿ ಮೊದಲಿನಿಂದಲೂ ನಾಯಕತ್ವದ ಗೊಂದಲವಿದೆ ಎಂದು ಹೇಳಿದರು.
ಪಕ್ಷಾಂತರ ಮತ್ತು ವಿರೋಧ ಪಕ್ಷಗಳ ಸ್ಥಿತಿಯ ಕುರಿತು ಮಾತನಾಡಿದ ಸಚಿವರು, ತಮ್ಮ ಪಕ್ಷದ ನಾಯಕರು ಕೈಬಿಟ್ಟು ಹೋದಾಗ ಜೆಡಿಎಸ್ ಹಾಗೂ ಬಿಜೆಪಿಗೆ ಬೇಜಾರಾಗುವುದು ಸ್ವಾಭಾವಿಕ. ಇನ್ನು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಅವರ ಹೈಕಮಾಂಡ್ ಗೆ ಬಿಟ್ಟ ವಿಚಾರ. ಇತ್ತೀಚಿನ ಉಪಚುನಾವಣೆಗಳು ಹಾಗೂ ಪ್ರಸ್ತುತ ವಿದ್ಯಮಾನಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿದ್ದು 2028ರ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಧೈರ್ಯ ತಂದಿಕೊಟ್ಟಿದೆ ಎಂದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯ ನಂತರ ಎದ್ದಿರುವ ಅಸಮಾಧಾನದ ಹೊಗೆಯ ಕುರಿತು ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಮೂಡುವುದು ಸಹಜ. ಸದ್ಯ ಇರುವುದು ಕೇವಲ 20 ಸ್ಥಾನಗಳು, ಆದರೆ ಆಕಾಂಕ್ಷಿಗಳು ಮಾತ್ರ 60ಕ್ಕೂ ಹೆಚ್ಚು ಜನರಿದ್ದಾರೆ. ಈ ಎಲ್ಲ ಅಸಮಾಧಾನಗಳನ್ನು ಪಕ್ಷದ ಹಿರಿಯರು ಸರಿಪಡಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯ ಕುರಿತು ಮಾಹಿತಿ ನೀಡಿದ ಸತೀಶ್ ಜಾರಕಿಹೊಳಿ, ಬಹುನಿರೀಕ್ಷಿತ ಬಿಡದಿ ಟೌನ್ಶಿಪ್ ನಿರ್ಮಾಣದ ಬಗ್ಗೆ ನಾಳಿನ ಕ್ಯಾಬಿನೆಟ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಲಾಗುವುದು. ಆದರೆ, ಡಿನೋಟಿಫೈ ಮಾಡುವ ಕುರಿತು ಯಾವುದೇ ಚರ್ಚೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.