ತುಮಕೂರು ಜಿಲ್ಲೆಯಲ್ಲಿ ವಿಶೇಷ ಕೊರಿಯನ್ ಕೈಗಾರಿಕಾ ಪ್ರದೇಶ (Korean Industrial Area) ಸ್ಥಾಪನೆಗೆ ಸಂಬಂಧಿಸಿದ ಸಾಧ್ಯತೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಕೊರಿಯಾ ಕನ್ಸೋರ್ಟಿಯಂನ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವು ಇಂದು ತುಮಕೂರಿಗೆ ಭೇಟಿ ನೀಡಿತು. ಈ ನಿಯೋಗದಲ್ಲಿ ಭಾರತದಲ್ಲಿನ ಕೊರಿಯಾ ಗಣರಾಜ್ಯದ ಕಾನ್ಸುಲೇಟ್ ಪಾಲುದಾರರು ಹಾಗೂ ಅಂತರರಾಷ್ಟ್ರೀಯ ಹೂಡಿಕೆಗಳನ್ನು ಆಕರ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೊರಿಯಾ ಹೂಡಿಕೆದಾರರು ಭಾಗವಹಿಸಿದ್ದರು.
ನಿಯೋಗದೊಂದಿಗೆ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅಮಾನಿಕೆರೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಕೈಗಾರಿಕಾ ಪರಿಸರ, ಮೂಲಸೌಕರ್ಯ, ಹೂಡಿಕೆ ಅವಕಾಶಗಳು ಹಾಗೂ ಸರ್ಕಾರದ ನೀತಿ ಬೆಂಬಲ ವ್ಯವಸ್ಥೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಜೊತೆಗೆ, ತುಮಕೂರು ಜಿಲ್ಲೆಯ ಅಭಿವೃದ್ಧಿ ಮಾದರಿ, ಕ್ರೀಡಾ ಚಟುವಟಿಕೆಗಳು ಹಾಗೂ ಹೂಡಿಕೆದಾರರಿಗೆ ಲಭ್ಯವಿರುವ ಅನುಕೂಲಕರ ವಾತಾವರಣದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಸೌರಶಕ್ತಿ ಯೋಜನೆಗಳು, ಕುಡಿಯುವ ನೀರಿನ ವ್ಯವಸ್ಥೆ, ಎತ್ತಿನಹೊಳೆ ಯೋಜನೆ, ದಸರಾ ಉತ್ಸವ ಸೇರಿದಂತೆ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಟುವಟಿಕೆಗಳ ಕುರಿತು ನಿಯೋಗಕ್ಕೆ ಸಮಗ್ರ ಮಾಹಿತಿ ನೀಡಲಾಯಿತು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ನಿಯೋಗದ ಗಮನ ಸೆಳೆದವು.
ಬಳಿಕ ನಿಯೋಗವು ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕ (Tertiary Treatment Plant) ಸೇರಿದಂತೆ ವಿವಿಧ ಕೈಗಾರಿಕಾ ಘಟಕಗಳು ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ವೀಕ್ಷಿಸಿತು. ಕೈಗಾರಿಕಾ ಪ್ರದೇಶದಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳು, ಸಂಪರ್ಕ ವ್ಯವಸ್ಥೆ ಮತ್ತು ಭವಿಷ್ಯದ ಕೈಗಾರಿಕಾ ವಿಸ್ತರಣೆಯ ಸಾಧ್ಯತೆಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಕೊರಿಯಾ ಮೂಲದ ಉತ್ಪಾದನಾ, ತಂತ್ರಜ್ಞಾನ ಹಾಗೂ ಸಂಬಂಧಿತ ಕೈಗಾರಿಕೆಗಳನ್ನು ತುಮಕೂರು ಜಿಲ್ಲೆಗೆ ಆಕರ್ಷಿಸುವ ಸಾಧ್ಯತೆಗಳ ಕುರಿತು ನಿಯೋಗವು ಆಸಕ್ತಿ ವ್ಯಕ್ತಪಡಿಸಿತು. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಹೊಸ ಉತ್ತೇಜನ ದೊರೆಯಲಿದ್ದು, ಉದ್ಯೋಗ ಸೃಷ್ಟಿ ಹಾಗೂ ವಿದೇಶಿ ನೇರ ಹೂಡಿಕೆ (FDI) ಹೆಚ್ಚಳಕ್ಕೆ ನೆರವಾಗುವ ನಿರೀಕ್ಷೆಯಿದೆ. ಪ್ರವಾಸದ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.