ಶಿವಮೊಗ್ಗ: ಪ್ರಧಾನ ಮಂತ್ರಿ ವಿಕಸಿತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ದೇಶದ ಅನೇಕ ಯುವಕರಿಗೆ ಉದ್ಯೋಗ ಸೃಷ್ಟಿ ಕಾರ್ಯ ಕೈಗೊಂಡು ಸ್ವಾಭಿಮಾನದ ಬದುಕಿಗೆ ಶಕ್ತಿಯನ್ನು ತುಂಬುವ ಕಾರ್ಯವನ್ನು ಪ್ರಧಾನ ಮಂತ್ರಿಗಳು ಕೈಗೊಂಡಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು, ಕಾರ್ಮಿಕ ಭವಿಷ್ಯನಿಧಿ ಸಂಘಟನೆ, ಪ್ರಾದೇಶಿಕ ಕಚೇರಿ ಶಿವಮೊಗ್ಗ ಇವರುಗಳ ಸಹಯೋಗಯೊಂದಿಗೆ ಶುಕ್ರವಾರ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನಾ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರೋತ್ಸಾಹ ಧನ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಾ ನಂತರದಲ್ಲಿ ಇದೊಂದು ಮಹತ್ವದ ಯೋಜನೆಯಾಗಿದ್ದು, ಕಾರ್ಮಿಕರಿಗೆ ಎರಡು ಕಂತುಗಳಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಕಾರ್ಮಿಕರಿಗೆ ಮೊದಲನೇ ವರ್ಷ ರೂ.15 ಸಾವಿರ ನೀಡಲಾಗುವುದು. 1027 ಕಾರ್ಮಿಕರು ಈ ಉದ್ಯೋಗ ಕ್ಷೇತ್ರಕ್ಕೆ ಹೊಸದಾಗಿ ನೇಮಕಗೊಂಡು ರೂ. 57, 36,828 ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗಿದ್ದು, ದೇಶದಲ್ಲಿ ರೂ.2 ಸಾವಿರ ಕೋಟಿ ಕಾರ್ಮಿಕರಿಗೆ ಮತ್ತು ಕಂಪನಿ ಉದ್ಯೋಗಿಗಳಿಗೆ ಅನುಕೂಲವಾಗಿದೆ.
ರೂ.96 ಸಾವಿರ ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು, ಸುಮಾರು ರೂ.1 ಲಕ್ಷ ಕೋಟಿ ಹಣವನ್ನು ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಾಗಾರ್ ಯೋಜನೆಗೆ ಮಿಸಲಿಡಲಾಗಿದೆ. ಕಾರ್ಮಿಕರು ಗೌರವಯುತವಾಗಿ ಕೆಲಸ ಮಾಡಲು ಪ್ರಧಾನಿಯವರು ಉತ್ತಮ ಅವಕಾಶ ಕಲ್ಪಿಸಿದ್ದಾರೆ ಅದರ ಸದುಪಯೋಗ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಪ್ರಾದೇಶಿಕ ಆಯುಕ್ತರಾದ ಸಿ.ಪಿ. ಜಸೀನಾ ಮಾತನಾಡಿ, ಈ ಯೋಜನೆ 2025 ರ ಆಗಸ್ಟ್ 1 ರಿಂದ 2027 ರ ಜುಲೈ 31 ರವರೆಗೆ ಜಾರಿಯಲ್ಲಿದ್ದು, ರೂ.99,446 ಕೋಟಿ ವೆಚ್ಚದೊಂದಿಗೆ 3.5 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯ ನಿರೀಕ್ಷೆಯಿದೆ. ಭಾಗ -ಎ ಅಡಿಯಲ್ಲಿ 4.41 ಲಕ್ಷ ಮೊದಲ ಬಾರಿಗೆ ಉದ್ಯೋಗ ಪಡೆದ ನೌಕರರಿಗೆ ರೂ.247 ಕೋಟಿ ವಿತರಿಸಲಾಗಿದೆ. ಭಾಗ -ಬಿ ಅಡಿಯಲ್ಲಿ 17,551 ಸಂಸ್ಥೆಗಳಿಗೆ ರೂ. 214 ಕೋಟಿ ಪ್ರೋತ್ಸಾಹ ಧನ ನೀಡಲಾಗಿದ್ದು, ಸುಮಾರು 6.46 ಲಕ್ಷ ಹೆಚ್ಚುವರಿ ಉದ್ಯೋಗಗಳು ಸೃಷ್ಟಿಯಾಗಿವೆ. ರೂ. 15 ಸಾವಿರದಿಂದ ರೂ.1 ಲಕ್ಷ ವರೆಗೆ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಇಡೀ ದೇಶದಲ್ಲಿ 200 ಸ್ಥಳದಲ್ಲಿ ಈ ಯೋಜನೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸೌಲಭ್ಯ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಅರುಣ್ ಡಿ.ಎಸ್., ಮಾಜಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮಂಡಳಿ ಅಧ್ಯಕ್ಷ ಬಿ. ಗೋಪಿನಾಥ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ವೇಣುಗೋಪಾಲ ಉಪಸ್ಥಿತರಿದ್ದರು.