ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ ಪಕ್ಕದ ಮನೆ ಯುವತಿಯೊಂದಿಗೆ ಅಕ್ರಮ ಬೆಳೆಸಿದ್ದ ವ್ಯಕ್ತಿಯೊಬ್ಬ ಇದನ್ನು ಪ್ರಶ್ನಿಸಿದಕ್ಕೆ ರಾಡ್ ನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ(26) ಕೊಲೆಯಾದ ಮಹಿಳೆ. ಪತಿ ಭಗವತ್ ಜ್ಞಾನೇಶ್ವರ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಸಂಜನಾ ಮತ್ತು ಭಗವತ್ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಬೀದರ್ ನ ಶಿವನಗರದಲ್ಲಿ ವಾಸವಾಗಿದ್ದಾರೆ.
ಈ ನಡುವೆ ಭಗವತ್ ಪಕ್ಕದ ಮನೆ ಹುಡುಗಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದು ಪ್ರಶ್ನಿಸಿದ ಪತ್ನಿ ಸಂಜನಾ ಜೊತೆ ಜಗಳವಾಡಿದ್ದ. ಕಾರ್ ನಲ್ಲಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಬ್ಬಿಣದ ರಾಡ್ ನಿಂದ ತಲೆ, ಕುತ್ತಿಗೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂಜನಾರನ್ನು ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.