ಬೆಂಗಳೂರು: ಆರ್.ಎಸ್.ಎಸ್ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್ನಲ್ಲೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಕರಾರು ತೆಗೆದಿದ್ದು, ಪ್ರಿಯಾಂಕ್ ತಕರಾರಿಗೆ ಉತ್ತರಿಸಿಯೇ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ಕೇರಳ ಹೈಕೋರ್ಟ್, ಸುಪ್ರೀಂ ತೀರ್ಪು ಪ್ರಸ್ತಾಪಿಸಿರುವ ನ್ಯಾಯಾಧೀಶ ಸಂದೀಪ್ ಪಾಟೀಲ್, ಸಂಘಟನೆಯು ನೋಂದಣಿಯಾಗಿದ್ದರೆ ಮಾತ್ರವೇ ದೂರು ದಾಖಲಿಸಬೇಕೆಂದಿಲ್ಲ. ಗುರುತಿಸಬಹುದಾದ ಗುಂಪಿಗೆ ಸೇರಿದವರಾಗಿದ್ದರೂ ದೂರು ದಾಖಲಿಸಬಹುದು ಎಂದು ತಿಳಿಸಿದೆ.
ಆರ್.ಎಸ್.ಎಸ್ ಚಟುವಟಿಕೆ ನಿರ್ಬಂಧಿಸುವ ಯತ್ನವೇ ಆರ್.ಎಸ್.ಎಸ್ ಗುರುತಿಸಬಹುದಾದ ಗುಂಪೆಂಬುದಕ್ಕೆ ನಿದರ್ಶನ. ಕೇರಳ ಹೈಕೋರ್ಟ್ ಆರ್.ಎಸ್.ಎಸ್ ಗುರುತಿಸಬಹುದಾದ ಗುಂಪೆಂದು ತೀರ್ಪು ನೀಡಿದೆ. ಇಂತಹ ಗುಂಪಿಗೆ ಸೇರಿದ ಯಾವುದೇ ವ್ಯಕ್ತಿ ದೂರನ್ನು ದಾಖಲಿಸಬಹುದು. ಸುಪ್ರೀಂಕೋರ್ಟ್ ಕೂಡ ಆರ್.ಎಸ್.ಎಸ್ ಗುರುತಿಸಬಹುದಾದ ಗುಂಪೆಂದು ತೀರ್ಪು ನೀಡಿದೆ. ಬಿಎನ್ಎಸ್ ಸೆಕ್ಷನ್ 2(26)ರಡಿ ನೋಂದಾಯಿತವಾಗದ ವ್ಯಕ್ತಿಗಳ ಗುಂಪಿಗೂ ಮಾನ್ಯತೆ ನೀಡಲಾಗಿದೆ. ಆರೋಪಿಗಳ ಪೋಸ್ಟ್ನಲ್ಲಿ ಆರ್.ಎಸ್.ಎಸ್ ಸ್ವಯಂಸೇವಕರೆಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಆರ್.ಎಸ್.ಎಸ್ ಸದಸ್ಯರು ದಾಖಲಿಸಿದ ಮಾನನಷ್ಟ ಕೇಸ್ ವಿಚಾರಣೆಗೆ ಪರಿಗಣಿಸಬಹುದು ಎಂದು ನ್ಯಾಯಾಧೀಶರಾದ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಆರ್.ಎಸ್.ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ಹ್ಯಾರಿಸ್ ನಲಪಾಡ್ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿಗೆ ಆದೇಶಕ್ಕೂ ಮುನ್ನ ಪ್ರಿಯಾಂಕ್ ವಾದವನ್ನೂ ಕೋರ್ಟ್ ಪರಿಗಣಿಸಿತ್ತು. ಅವಹೇಳನಕಾರಿ ಹೇಳಿಕೆಯಿಂದ ಸಂಘದ ಘನತೆಗೆ ಧಕ್ಕೆಯಾಗಿದೆ ಎಂದು ಬೆಂಗಳೂರಿನ ಸಿದ್ದಾಪುರದ ಎ.ತೇಜಸ್ ಎಂಬವರು ಖಾಸಗಿ ದೂರು ದಾಖಲಿಸಿದ್ದರು.
2025ರ ಅಕ್ಟೋಬರ್ 14ರಂದು ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ಸದಸ್ಯರ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದೇ ರೀತಿ, ಮೊಹಮ್ಮದ್ ನಲಪಾಡ್ ಕೂಡ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆರ್.ಎಸ್.ಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ದೂರಲ್ಲಿ ಆರೋಪಿಸಲಾಗಿತ್ತು.