ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಮತ್ತು ಅವರ ಕುಟುಂಬವನ್ನು ಅಡ್ಡಗಟ್ಟಿ 20 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ದರೋಡೆ ಮಾಡಿ ಕಾರಿನ ಸಮೇತ್ ಎಸ್ಕೇಪ್ ಆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಈ ದರೋಡೆ ಪ್ರಕರಣ ಪಕ್ಕಾ ಪ್ಲಾನ್ ಮಾಡಿ ಮಾಡಿದ ಯೋಜನೆಯಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಬಂಟ್ವಾಳದಲ್ಲಿ ದರೋಡೆಕೋರರು ಅಪಹರಿಸಿದ್ದ ಸ್ವಿಫ್ಟ್ ಡಿಸೈರ್ ಕಾರು ಪತ್ತೆಯಾಗಿದ್ದು, ಹಲವು ಸುಳಿವುಗಳು ಸಿಕ್ಕಿವೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಪನೆ ಎಂಬ ಸ್ಥಳದ ಬಳಿ ದರೋಡೆಕೋರರು ಕದ್ದೊಯ್ದಿದ್ದ ಸ್ವಿಫ್ಟ್ ಡಿಸೈರ್ ಕಾರು ಪತ್ತೆಯಾಗಿದೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ದರೋಡೆಕೋರರ ಅಸಲಿ ಪ್ಲಾನ್ ಬಯಲಾಗಿದೆ.
ಕಾರಿನ ಸೀಟ್ ಕವರ್ಗಳು ಹಾಗೂ ಡಿಕ್ಕಿಯ ಕವರ್ಗಳನ್ನು ಹರಿದು ಹಾಕಿ, ಕಾರಿನ ಮೂಲೆ ಮೂಲೆಯನ್ನೂ ಜಾಲಾಡಲಾಗಿದೆ. ಕಾರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ‘ಗೋಲ್ಡ್ ಬಿಸ್ಕತ್’ ಅಡಗಿಸಿಡಲಾಗಿದೆ ಎಂಬ ಪಕ್ಕಾ ಮಾಹಿತಿ ದರೋಡೆಕೋರರಿಗೆ ಇತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ದರೋಡೆಕೋರರು ವ್ಯಾಪಾರಿ ವಿಕಾಸ್, ಅವರ ಪತ್ನಿ ಮತ್ತು ಮಗ ಧರಿಸಿದ್ದ ಮೈಮೇಲಿನ ಚಿನ್ನಾಭರಣಗಳನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಕೇವಲ ಕಾರನ್ನೇ ಪ್ರಮುಖ ಟಾರ್ಗೆಟ್ ಮಾಡಿದ್ದರು. ಮುಂಜಾನೆ 4 ಗಂಟೆಗೆ ಬೈಕಂಪಾಡಿ ಬಳಿ ವಿಕಾಸ್ ಅವರನ್ನು ಕಾರಿನಿಂದ ಹೊರಗೆ ಎಳೆದು ಹಾಕಿ, ಕಾರಿನೊಳಗೆ ಚಿನ್ನದ ಬಿಸ್ಕತ್ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ಬಳಿಕ ಅಲ್ಲಿಂದ ಎರಡು ಕಿಲೋಮೀಟರ್ ದೂರದವರೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿ, ಪತ್ನಿ ಮತ್ತು ಮಗನನ್ನು ದಾರಿಯಲ್ಲಿ ಇಳಿಸಿ ಕಾರಿನ ಸಮೇತ ಪರಾರಿಯಾಗಿದ್ದರು.
ಮಹಾರಾಷ್ಟ್ರದಲ್ಲಿ ಮದುವೆ ಮುಗಿಸಿ ಕೇರಳಕ್ಕೆ ಮರಳುತ್ತಿದ್ದ ವಿಕಾಸ್ ಅವರ ಕಾರಿನಲ್ಲಿ ಕೇವಲ 20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣವಿತ್ತೇ ಅಥವಾ ಅವರು ಚಿನ್ನದ ಉದ್ಯಮಿಯಾಗಿರುವುದರಿಂದ ಕಾರಿನ ರಹಸ್ಯ ಜಾಗದಲ್ಲಿ ದೊಡ್ಡ ಮಟ್ಟದ ಚಿನ್ನ ಸಾಗಾಟ ಮಾಡುತ್ತಿದ್ದರೇ ಎಂಬ ನಿಟ್ಟಿನಲ್ಲಿ ಪಣಂಬೂರು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ದರೋಡೆಕೋರರು ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದು, ಉದ್ಯಮಿಯ ಚಲನವಲನದ ಬಗ್ಗೆ ಇಂಚಿಂಚೂ ಮಾಹಿತಿ ಇದ್ದವರೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ.