ರಾಖಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಅಕ್ಕನ ಕಣ್ಣಲ್ಲಿ ಕಣ್ಣೀರು ತುಂಬಿತ್ತು. ರಾಖಿ ಕಟ್ಟುವ ಮುನ್ನವೇ ತಮ್ಮ ಮೃತಪಟ್ಟಿದ್ದು, ಅಂತ್ಯಕ್ರಿಯೆ ವೇಳೆ ಆತನ ಮೃತದೇಹದ ಕೈಗೆ ರಾಖಿ ಕಟ್ಟಿದ ದೃಶ್ಯ ಎಲ್ಲರ ಮನಕಲಕುವಂತಿತ್ತು.
ತೆಲಂಗಾಣ ಜಿಲ್ಲೆಯ ಮಹಬೂಬಾಬಾದ್ ಜಿಲ್ಲೆಯ ಕುರುವಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ರಾಖಿ ಹಬ್ಬಕ್ಕೂ ಮುನ್ನವೇ ತಮ್ಮ ಮೃತಪಟ್ಟಿದ್ದರಿಂದ ಅಕ್ಕ ಕಣ್ಣೀರಿನಲ್ಲಿ ಮುಳುಗಿದ್ದಾರೆ. ತಮ್ಮನ ಮೃತದೇಹಕ್ಕೆ ರಾಖಿ ಕಟ್ಟಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಈ ದೃಶ್ಯ ಕಂಡ ಅಲ್ಲಿದ್ದವರೆಲ್ಲ ಕಣ್ಣೀರಿಟ್ಟಿದ್ದಾರೆ. ಕುರುವಿ ಗ್ರಾಮದ ಮೊಟಪೋತುಲ ರಮೇಶ್ (36) ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ಬುಧವಾರ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು.
ಅಂತ್ಯಕ್ರಿಯೆ ವೇಳೆ ರಮೇಶ್ ಅವರ ಸಹೋದರಿ ಧನಲಕ್ಷ್ಮಿ ತಮ್ಮನ ಮೃತದೇಹದ ಬಳಿ ತೆರಳಿ ಕಣ್ಣೀರಿಟ್ಟಿದ್ದಾರೆ. “ರಾಖಿ ಕಟ್ಟುವ ಮುನ್ನವೇ ಬಿಟ್ಟು ಹೋಗಿಬಿಟ್ಯಾ ತಮ್ಮಾ” ಎಂದು ರೋದಿಸುತ್ತಾ, ಪಾಡಿಗೆಯ ಮೇಲಿದ್ದ ರಮೇಶ್ ಅವರ ಕೈಗೆ ರಾಖಿ ಕಟ್ಟಿದರು. ತಮ್ಮನಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆಯಬೇಕಿದ್ದ ಸಮಯದಲ್ಲಿ, ಆತನ ಮೃತದೇಹಕ್ಕೆ ರಾಖಿ ಕಟ್ಟುವ ಪರಿಸ್ಥಿತಿ ಎದುರಾಗಿದ್ದರಿಂದ ಧನಲಕ್ಷ್ಮಿ ತೀವ್ರ ದುಃಖಕ್ಕೆ ಒಳಗಾದರು. ಈ ದೃಶ್ಯ ಅಲ್ಲಿದ್ದವರ ಮನ ಕಲಕುವಂತೆ ಮಾಡಿತು.
ಇನ್ನೊಂದೆಡೆ, ರಮೇಶ್ ಅವರ ತಂದೆ ವೀರಣ್ಣ ಕೂಡ ಕೇವಲ ಹತ್ತು ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಂದೆಯ ನಿಧನದ ಹತ್ತು ದಿನಗಳಲ್ಲೇ ಮಗನೂ ಮೃತಪಟ್ಟಿದ್ದರಿಂದ ಕುಟುಂಬದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ. ಒಂದೇ ಕುಟುಂಬದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಎರಡು ಸಾವುಗಳು ಸಂಭವಿಸಿದ್ದರಿಂದ ಬಂಧುಗಳು ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದವರೂ ಕಣ್ಣೀರಿಟ್ಟಿದ್ದಾರೆ.