ಬೆಂಗಳೂರು: ರಾತ್ರಿ-ಹಗಲೆನ್ನದೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವ ಉದ್ದೇಶದಿಂದ ‘ಪ್ರಾಜೆಕ್ಟ್ ಖುಷಿ’ ಎಂಬ ವೈಜ್ಞಾನಿಕ ಹಾಗೂ ರಚನಾತ್ಮಕ ಆರೋಗ್ಯ ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕೃತ ಚಾಲನೆ ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ನೂರಾರು ಪೊಲೀಸ್ ಸಿಬ್ಬಂದಿಗೆ ಈ ಯೋಜನೆಯ ನೇರ ಪ್ರಯೋಜನ ಲಭ್ಯವಾಗಲಿದೆ.
ಈ ಯೋಜನೆಯು ಹ್ಯಾಪಿಯೆಸ್ಟ್ ಹೆಲ್ತ್, ಟೈಟಾನ್ ಕಂಪನಿ ಲಿಮಿಟೆಡ್ ಹಾಗೂ ರೋಟರಿ ಟ್ರಸ್ಟ್ ಬೆಂಗಳೂರು ಇಂದಿರಾನಗರ ಸಂಸ್ಥೆಗಳ ಸಹಯೋಗದೊಂದಿಗೆ ಜಾರಿಯಾಗುತ್ತಿದೆ. ಸಿಬ್ಬಂದಿಗೆ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳು ಅಥವಾ ರೋಗಗಳು ಎದುರಾಗುವ ಮುನ್ನವೇ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅವರು ದೀರ್ಘಾವಧಿಯವರೆಗೆ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಆಶಯವಾಗಿದೆ.
ಸಿಬ್ಬಂದಿ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತಂದ ಯೋಜನೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಮೂರು ತಿಂಗಳ ಪ್ರಾಯೋಗಿಕ ಕಾರ್ಯಕ್ರಮದಿಂದ ಇಲಾಖೆಯ ಸಿಬ್ಬಂದಿಯು ಈಗಾಗಲೇ ಸಾಕಷ್ಟು ಪ್ರಯೋಜನ ಪಡೆದುಕೊಂಡಿರುವುದನ್ನು ನಾವು ಕಂಡಿದ್ದೇವೆ. ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ದಿನನಿತ್ಯದ ಬದುಕಿನಲ್ಲಿ ಸುಸ್ಥಿರ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಯೋಗಿಕ ಹಂತದಲ್ಲೇ ದಾಖಲಾಯ್ತು ಅದ್ಭುತ ಯಶಸ್ಸು
ಸೆಪ್ಟೆಂಬರ್ 2025 ರಲ್ಲಿ ಕೈಗೊಳ್ಳಲಾಗಿದ್ದ ಈ ಯೋಜನೆಯ ಪೈಲಟ್ ಹಂತವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ. ಭಾಗವಹಿಸಿದ ಸಿಬ್ಬಂದಿಯ ವೈದ್ಯಕೀಯ ತಪಾಸಣಾ ವರದಿಗಳ ಪ್ರಕಾರ, ಶೇಕಡಾ 61 ರಷ್ಟು ಭಾಗವಹಿಸುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದಿದೆ. ಶೇಕಡಾ 70 ರಷ್ಟು ಮಂದಿಯಲ್ಲಿದ್ದ ವಿಟಮಿನ್ ಬಿ12 ಕೊರತೆ ಸಂಪೂರ್ಣವಾಗಿ ಸರಿಹೋಗಿದೆ. ಅಲ್ಲದೆ ಶೇಕಡಾ 59 ರಷ್ಟು ಸಿಬ್ಬಂದಿ ಅರ್ಧ ಕಿಲೋದಿಂದ 6.1 ಕಿಲೋದವರೆಗೆ ತೂಕ ಇಳಿಸಿಕೊಂಡಿದ್ದಾರೆ. ಇದರೊಂದಿಗೆ ನಿದ್ರಾಹೀನತೆ, ಜೀರ್ಣಕ್ರಿಯೆ ತೊಂದರೆ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗಿ, ದೈಹಿಕ ಸಾಮರ್ಥ್ಯ ಹೆಚ್ಚಿರುವುದು ದೃಢಪಟ್ಟಿದೆ.
ಮುಂದಿನ ಹಂತ: 3 ವರ್ಷಗಳಲ್ಲಿ 600 ಸಿಬ್ಬಂದಿಗೆ ಯೋಜನೆ ವಿಸ್ತರಣೆ
ಹಿಂದಿನ ಹಂತದ ಯಶಸ್ಸಿನ ಹಿನ್ನೆಲೆಯಲ್ಲಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ್ (ಐಪಿಎಸ್) ಅವರ ನೇತೃತ್ವದಲ್ಲಿ ಈ ಯೋಜನೆಯ ಮುಂದಿನ ಭಾಗ ಅನುಷ್ಠಾನಗೊಳ್ಳಲಿದೆ. ಈ ಬೃಹತ್ ಯೋಜನೆಯು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 600 ಸಿಬ್ಬಂದಿಯನ್ನು ತಲುಪುವ ಗುರಿ ಹೊಂದಿದೆ. ಇದರ ಮೊದಲ ಬ್ಯಾಚ್ ಸೆಪ್ಟೆಂಬರ್ 8 ರಿಂದ ಡಿಸೆಂಬರ್ 6, 2026 ರವರೆಗೆ ಮೂರು ತಿಂಗಳ ಅವಧಿಯ ದೈಹಿಕ ಮತ್ತು ಡಿಜಿಟಲ್ ಹೆಲ್ತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.
ವಿಶೇಷ ತರಬೇತಿ ಮತ್ತು ನಿರಂತರ ಪ್ರಗತಿ ಪರಿಶೀಲನೆ
ಈ ಯೋಜನೆಯಲ್ಲಿ ತಜ್ಞರ ನೇತೃತ್ವದಲ್ಲಿ ಲೈವ್ ತರಗತಿಗಳು, ವೆಲ್ನೆಸ್ ಪಾಠಗಳು ಹಾಗೂ ಡಿಜಿಟಲ್ ಮಾರ್ಗದರ್ಶನ ಸಿಗಲಿದೆ. ಪ್ರಮುಖವಾಗಿ ಹೃದಯದ ಆರೋಗ್ಯ, ತೂಕ ನಿರ್ವಹಣೆ, ಮಧುಮೇಹ ನಿಯಂತ್ರಣ, ಯೋಗ, ಪೋಷಕಾಂಶಯುಕ್ತ ಆಹಾರ, ನಿದ್ರೆ ಮತ್ತು ಮಾನಸಿಕ ಶಾಂತಿಯ (ಮೈಂಡ್ಫುಲ್ನೆಸ್) ಕುರಿತು ಶಿಕ್ಷಣ ನೀಡಲಾಗುತ್ತದೆ. ಸಿಬ್ಬಂದಿಯ ಪ್ರಗತಿಯನ್ನು ರಕ್ತ ಪರೀಕ್ಷೆ, ಬಿಎಂಐ, ಹಿಪ್-ವೇಸ್ಟ್ ರೇಶಿಯೋ ಹಾಗೂ ಸಮೀಕ್ಷೆಗಳ ಮೂಲಕ ನಿರಂತರವಾಗಿ ಪರಿಶೀಲಿಸಿ, 90 ದಿನಗಳ ಕೊನೆಯಲ್ಲಿ ಸಮಗ್ರ ವರದಿ ನೀಡಲಾಗುತ್ತದೆ.
ಸಮಾರಂಭದಲ್ಲಿ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ಸಿಇಒ ರಘು ಕೃಷ್ಣನ್, ಟೈಟಾನ್ ಕಂಪನಿಯ ಉಪಾಧ್ಯಕ್ಷ ಎನ್.ಇ. ಶ್ರೀಧರ್ ಹಾಗೂ ರೋಟರಿ ಇಂದಿರಾನಗರ ಸಂಸ್ಥೆಯ ಅಧ್ಯಕ್ಷ ಗೋಪಿನಾಥ್ ನಾರಾಯಣನ್ ಉಪಸ್ಥಿತರಿದ್ದರು. ಕೇವಲ ಜೀವಿತಾವಧಿ ಹೆಚ್ಚಿಸುವುದಕ್ಕಿಂತ ಪೊಲೀಸರ ಆರೋಗ್ಯಕರ ಬದುಕಿನ ಅವಧಿಯನ್ನು (Healthspan) ಹೆಚ್ಚಿಸುವುದೇ ನಮ್ಮ ಪ್ರಮುಖ ಗುರಿ ಎಂದು ರಘು ಕೃಷ್ಣನ್ ಈ ಸಂದರ್ಭದಲ್ಲಿ ಹೇಳಿದರು.