ನವದೆಹಲಿ / ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ನಿಯಮ ಮೀರಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದೆ ಹಾಗೂ ಕಾನೂನುಬಾಹಿರವಾಗಿ ಮನಿ ಲೆಂಡಿಂಗ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅರ್ಜಿದಾರರು ಹೊರಿಸಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದ ದೇಶದ ಅತ್ಯುನ್ನತ ನ್ಯಾಯಾಲಯವು, ಈ ವಿಚಾರಣೆಯನ್ನು ಪುರಸ್ಕರಿಸಲು ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ
ನಾಗರಿಕ ಸೇವಾ ಟ್ರಸ್ಟ್ನ ರಂಜನ್ ರಾವ್ ಯೆರ್ದೂರ್ ಅವರು ಎಸ್ಕೆಡಿಆರ್ಡಿಪಿ ಸಂಸ್ಥೆಯು ಕಾನೂನುಬಾಹಿರವಾಗಿ ಬಡ್ಡಿ ದಂಧೆ ನಡೆಸುತ್ತಿದೆ, ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಮತ್ತು ಸಾರ್ವಜನಿಕರಿಗೆ ವಂಚನೆ ಎಸಗುತ್ತಿದೆ (IPC 420) ಎಂದು ಆರೋಪಿಸಿ ಈ ಹಿಂದೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು (PCR No. 14/2016) ದಾಖಲಿಸಿದ್ದರು.
ಆದರೆ, ಈ ಖಾಸಗಿ ದೂರಿನಲ್ಲಿ ಅರ್ಜಿದಾರರು ಸಾಲ ಪಡೆದ ನೇರ ಸಂತ್ರಸ್ತರಲ್ಲ (Locus Standi ಇಲ್ಲ) ಮತ್ತು ಪ್ರಥಮ ದೃಷ್ಟಿಯಲ್ಲೇ (Prima Facie) ಸಂಸ್ಥೆಯ ವಿರುದ್ಧ ಯಾವುದೇ ಅಕ್ರಮ ನಡೆದಿರುವುದಕ್ಕೆ ಆಧಾರಗಳಿಲ್ಲ ಎಂದು ವಿಚಾರಣಾ ನ್ಯಾಯಾಲಯವು ದೂರನ್ನು ವಜಾಗೊಳಿಸಿತ್ತು.
ಹೈಕೋರ್ಟ್ನಲ್ಲೂ ಧರ್ಮಸ್ಥಳ ಸಂಘಕ್ಕೆ ಜಯ
ತರುವಾಯ, ಅಧೀನ ನ್ಯಾಯಾಲಯ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಮಟ್ಟದ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, 2026ರ ಜನವರಿ 9 ರಂದು ನೀಡಿರುವ ತನ್ನ ತೀರ್ಪಿನಲ್ಲಿ ರಂಜನ್ ರಾವ್ ಅವರು ನೀಡಿದ್ದ ಅರ್ಜಿಯನ್ನು ರದ್ದುಗೊಳಿಸಿ (Quash), ಎಸ್ಕೆಡಿಆರ್ಡಿಪಿ ಸಂಸ್ಥೆಯ ಪರವಾಗಿ ಆದೇಶ ಹೊರಡಿಸಿತ್ತು.
ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಜಾ
ಹೈಕೋರ್ಟ್ ನೀಡಿದ್ದ ಆದೇಶವನ್ನು ಸವಾಲು ಮಾಡಿ ರಂಜನ್ ರಾವ್ ಯೆರ್ದೂರ್ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ರಜಾ ಅರ್ಜಿ (Special Leave Petition - SLP Crl No. 10752/2026) ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, ಎಸ್ಕೆಡಿಆರ್ಡಿಪಿ ಸಂಸ್ಥೆಯು ಸ್ವಸಹಾಯ ಗುಂಪುಗಳಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದು, ಅದರ ಮೇಲೆ ಮಾಡಲಾಗಿರುವ ಬಡ್ಡಿ ದಂಧೆ ಹಾಗೂ ವಂಚನೆಯ ಆರೋಪಗಳಿಗೆ ಯಾವುದೇ ಪ್ರಬಲ ಆಧಾರಗಳಾಗಲಿ, ಸಾಕ್ಷ್ಯಗಳಾಗಲಿ ಇಲ್ಲ ಎಂದು ಅಭಿಪ್ರಾಯಪಟ್ಟಿತು. ಹೀಗಾಗಿ ಅರ್ಜಿಯನ್ನು ತಕ್ಷಣವೇ ವಜಾಗೊಳಿಸಿ ಎಸ್ಕೆಡಿಆರ್ಡಿಪಿ ಸಂಸ್ಥೆಯ ಪರ ತೀರ್ಪನ್ನು ಎತ್ತಿಹಿಡಿಯಿತು.