ಬೆಂಗಳೂರು: ನಗರ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಜಾನಪದ ಕಲೆ-ಸಂಸ್ಕೃತಿಯ ನೈಜ ಪರಿಚಯ ಮಾಡಿಕೊಡುವ 'ಗ್ರಾಮಾನುಭವ' ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಯೋಜನೆಯ ಅನುಷ್ಠಾನಕ್ಕೆ ₹246.07 ಲಕ್ಷ ವೆಚ್ಚವನ್ನು ನಿಗದಿಪಡಿಸಲಾಗಿದೆ.
ಯೋಜನೆಯ ವ್ಯಾಪ್ತಿ ಮತ್ತು ಭಾಗವಹಿಸುವ ಶಾಲೆಗಳು
ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 8, 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಒಟ್ಟು 160 ಸರ್ಕಾರಿ ಪಿಎಂ ಶ್ರೀ, ಕೆಪಿಎಸ್ ಹಾಗೂ 800 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ 49,214 ವಿದ್ಯಾರ್ಥಿಗಳು ಈ ಯೋಜನೆಯ ನೇರ ಸೌಲಭ್ಯ ಪಡೆಯಲಿದ್ದಾರೆ. ಇದಲ್ಲದೆ ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಯೋಜನೆಯಡಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಕ್ಷೇತ್ರ ಅಧ್ಯಯನದ ಅವಧಿ ಮತ್ತು ಚಟುವಟಿಕೆಗಳು
ಕ್ಷೇತ್ರ ಅಧ್ಯಯನ ಭೇಟಿಗಳನ್ನು 2026ರ ಸೆಪ್ಟೆಂಬರ್ನಿಂದ ಡಿಸೆಂಬರ್ ಅವಧಿಯೊಳಗೆ ಆಯೋಜಿಸಲಾಗುವುದು.
-
ಪ್ರಾಯೋಗಿಕ ಕಲಿಕೆ: ವಿದ್ಯಾರ್ಥಿಗಳನ್ನು ಶಾಲೆಗಳಿಂದ ಗರಿಷ್ಠ 50 ಕಿ.ಮೀ ವ್ಯಾಪ್ತಿಯೊಳಗಿನ ಪ್ರಗತಿಪರ ರೈತರ ಜಮೀನುಗಳು, ರೈತ ಉತ್ಪಾದಕ ಸಂಸ್ಥೆಗಳು (FPO), ಪಶುಸಂಗೋಪನೆ, ರೇಷ್ಮೆ ಕೃಷಿ ಹಾಗೂ ತೋಟಗಾರಿಕಾ ಕೇಂದ್ರಗಳಿಗೆ ಕರೆದೊಯ್ಯಲಾಗುವುದು.
-
ಸಂವಾದ ಮತ್ತು ತರಬೇತಿ: ಮಣ್ಣಿನ ಆರೋಗ್ಯ, ಕಾಂಪೋಸ್ಟ್ ತಯಾರಿ, ಬೀಜಗಳ ಆಯ್ಕೆ, ನೀರು ಸಂರಕ್ಷಣೆ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯ ಕುರಿತು ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಪ್ರಾತ್ಯಕ್ಷಿಕೆ ಹಾಗೂ ಸಂವಾದಾತ್ಮಕ ಕಲಿಕೆ ನಡೆಯಲಿದೆ.
-
ಅನುಪಾಲನಾ ಚಟುವಟಿಕೆಗಳು: ಕ್ಷೇತ್ರ ಭೇಟಿಯ ನಂತರ 2027ರ ಜನವರಿಯಿಂದ ಫೆಬ್ರವರಿಯವರೆಗೆ ಶಾಲಾ ಮಟ್ಟದಲ್ಲಿ ಮಾದರಿ ಪ್ರದರ್ಶನ, ಪೌಷ್ಟಿಕ ವನ ಸ್ಥಾಪನೆ ಮತ್ತು ಪ್ರಸ್ತುತಿ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
ವಿದ್ಯಾರ್ಥಿಗಳ ಭದ್ರತೆ ಮತ್ತು ಆಡಳಿತಾತ್ಮಕ ಚೌಕಟ್ಟು
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (CEO) ಅಧ್ಯಕ್ಷತೆಯಲ್ಲಿ 'ಗ್ರಾಮಾನುಭವ ಸಮಿತಿ' ರಚನೆಯಾಗಲಿದ್ದು, ಕೃಷಿ, ಪಶುಸಂಗೋಪನೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸಮಿತಿಯಲ್ಲಿದ್ದು ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ವಿದ್ಯಾರ್ಥಿಗಳ ಸಾರಿಗೆಗೆ ಕಡ್ಡಾಯವಾಗಿ ಕೆಎಸ್ಆರ್ಟಿಸಿ (KSRTC) ಬಸ್ಗಳನ್ನು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ. ಪ್ರಯಾಣದ ಸಮಯದಲ್ಲಿ ಪೋಷಕರ ಅನುಮತಿ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ಭದ್ರತೆ ಮತ್ತು ಸುರಕ್ಷತೆಯ ಸಂಪೂರ್ಣ ಜವಾಬ್ದಾರಿಯನ್ನು ಸಂಬಂಧಪಟ್ಟ ಶಾಲೆ ಅಥವಾ ಕಾಲೇಜಿನ ಮುಖ್ಯಸ್ಥರು ಹಾಗೂ ಜೊತೆಗೆ ತೆರಳುವ ಶಿಕ್ಷಕರಿಗೆ ವಹಿಸಲಾಗಿದೆ.
ಎರಡು ಕಂದಕ ಮುಚ್ಚಲು ಗ್ರಾಮಾನುಭವ ಯೋಜನೆ ಜಾರಿ - ಸಚಿವ ಮಧು ಬಂಗಾರಪ್ಪ
ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು, ನಮ್ಮ ದೇಶ ಈಗ ʻಗ್ರಾಮೀಣ ಭಾರತʼ, ʻನಗರ ಭಾರತʼ ಎಂದು ಎರಡು ಭಾಗಗಳಾಗಿವೆ. ಇದರ ನಡುವಿನ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಿದೆ, ಅಗಲವಾಗುತ್ತಿದೆ. ನಮ್ಮ ನಗರಗಳ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾರತದ ಬೇರುಗಳಿಗೆ ಜೋಡಿಸಿ ಈ ಕಂದಕವನ್ನು ಮುಚ್ಚುವ ಉದ್ದೇಶದಿಂದ ನಮ್ಮ ಸರ್ಕಾರವು ʻಗ್ರಾಮಾನುಭವʼ ಎಂಬ ಯೋಜನೆನ್ನು ಜಾರಿಗೆ ತರುತ್ತಿದೆ ಎಂದಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...