ಬೆಂಗಳೂರು : ರಾಜ್ಯದ ಧಾರ್ಮಿಕ ದತ್ತಿ ಮುಜರಾಯಿ ದೇವಾಲಯಗಳ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಭಕ್ತರ ನಂಬಿಕೆಯನ್ನು ಕಾಪಾಡಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ. ದೇವಾಲಯಗಳಲ್ಲಿ ನಡೆಯುವ ಕಳ್ಳತನ, ಹಣ ದುರುಪಯೋಗ ಹಾಗೂ ನಕಲಿ ರಶೀದಿ ದಂಧೆಗೆ ಪೂರ್ಣವಿರಾಮ ಇಡುವ ಉದ್ದೇಶದಿಂದ ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ನ್ಯಾಯಾಲಯವು ಆದೇಶಿಸಿದೆ.
ಈ ಹೊಸ ವ್ಯವಸ್ಥೆಯನ್ವಯ ದೇವಾಲಯದ ಹುಂಡಿ ಕಾಣಿಕೆ, ಅರ್ಚನೆ, ಸೇವಾ ಟಿಕೆಟ್ಗಳು, ವಸತಿ ನಿಲಯಗಳು, ವಾಹನ ಪಾರ್ಕಿಂಗ್ ಶುಲ್ಕ, ದೇಣಿಗೆ, ಪ್ರಸಾದ ಹಾಗೂ ಪ್ರಕಟಣೆಗಳ ಮಾರಾಟ ಸೇರಿದಂತೆ ಪ್ರತಿಯೊಂದು ಆದಾಯದ ಮೂಲಕ್ಕೂ ಇ-ಪಾವತಿ ಸೌಲಭ್ಯವನ್ನು ಒದಗಿಸುವುದು ಕಡ್ಡಾಯವಾಗಿದೆ. ಕೌಂಟರ್ಗಳಲ್ಲಿ ನೀಡಲಾಗುವ ರಶೀದಿಗಳ ಮೇಲೆ ಮುದ್ರಿತ ಕ್ಯೂಆರ್ ಕೋಡ್ ಇರಲಿದ್ದು, ಭಕ್ತರು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಕೇಂದ್ರೀಯ ಸರ್ವರ್ ಸಹಾಯದಿಂದ ರಶೀದಿಯ ನೈಜತೆಯನ್ನು ಸ್ಥಳದಲ್ಲೇ ಪರಿಶೀಲಿಸಬಹುದು. ಜೊತೆಗೆ, ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆವರಣಗಳಲ್ಲಿ ಸ್ವಯಂ ಸೇವಾ ಡಿಜಿಟಲ್ ಪಾವತಿ ಯಂತ್ರಗಳನ್ನು ಸಹ ಅಳವಡಿಸಲು ಸೂಚಿಸಲಾಗಿದೆ.
ಉಡುಪಿ ಜಿಲ್ಲೆಯ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಐಟಿ ಅಡ್ಮಿನ್ ಅವರ ಲಾಗಿನ್ ವಿವರಗಳನ್ನು ದುರುಪಯೋಗಪಡಿಸಿಕೊಂಡು ಭಕ್ತರಿಗೆ ನಕಲಿ ರಶೀದಿ ನೀಡಿ ಹಣ ವಂಚಿಸಿದ್ದ ರಾಜೇಶ್ ನಾಯಕ್ ಎಂಬ ದ್ವಿತೀಯ ದರ್ಜೆ ಸಹಾಯಕನ ವಜಾ ಆದೇಶವನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಎತ್ತಿಹಿಡಿಯಿತು. ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ಸಮರ್ಪಕ ನಿರ್ವಹಣೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಸಾಮಾನ್ಯ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವುದು ಅತ್ಯಗತ್ಯ ಎಂದು ಈ ಸಂದರ್ಭದಲ್ಲಿ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.