ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಸಾಮಾಜಿಕ ಭದ್ರತೆಗೆ ಕೆಎಸ್ಹೆಚ್ಸಿಒಇಎ (KSHCOEA - BMS) ಸಂಘಟನೆ ರೂಪಿಸಿದ್ದ ಮಹತ್ವಾಕಾಂಕ್ಷೆಯ ವಿಮಾ ಯೋಜನೆ ಇದೀಗ ಸಂಕಷ್ಟದಲ್ಲಿದ್ದ ನೌಕರನ ಕುಟುಂಬಕ್ಕೆ ಆಸರೆಯಾಗಿದೆ.
ಇಂದು ಚಿತ್ರದುರ್ಗ ಜಿಲ್ಲಾ NHM ಘಟಕದಲ್ಲಿ ಸಮಾಲೋಚಕರಾಗಿ (Counsellor) ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಕಾಂತರಾಜು ಅವರ ಕುಟುಂಬಕ್ಕೆ ಒಟ್ಟು ₹68 ಲಕ್ಷ ಮೌಲ್ಯದ ಡಿಡಿ (ಡಿಮ್ಯಾಂಡ್ ಡ್ರಾಫ್ಟ್) ಯನ್ನು ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಅಧಿಕೃತವಾಗಿ ಹಸ್ತಾಂತರಿಸಿದರು..
ಯೋಜನೆಯ ಹಿನ್ನೆಲೆ ಮತ್ತು ವಿಮಾ ಸೌಲಭ್ಯ:
ಗುತ್ತಿಗೆ ಮತ್ತು ಹೊರಗುತ್ತಿಗೆ ಆರೋಗ್ಯ ಸಿಬ್ಬಂದಿಯ ಹಿತರಕ್ಷಣೆಗೆ ಬದ್ಧವಾಗಿರುವ KSHCOEA ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಹಾಗೂ ಆಕ್ಸಿಸ್ ಬ್ಯಾಂಕ್ (Axis Bank) ನಡುವೆ ವಿಶೇಷ ಗುಂಪು ವಿಮಾ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಯೋಜನೆಯಡಿ:
- ಅಪಘಾತದಿಂದ ಸಂಭವಿಸುವ ಸಾವಿಗೆ: ₹60 ಲಕ್ಷ ವಿಮಾ ಪರಿಹಾರ
- ಸಹಜ ಸಾವಿಗೆ: ₹10 ಲಕ್ಷ ವಿಮಾ ಪರಿಹಾರ
- ಹೆಚ್ಚುವರಿ ಶೈಕ್ಷಣಿಕ ನೆರವು: ಮೃತರ ಮಕ್ಕಳ ವಿದ್ಯಾಭ್ಯಾಸಕ್ಕೆ ₹8 ಲಕ್ಷ ಆರ್ಥಿಕ ನೆರವು
ಈ ಒಪ್ಪಂದದ ಅನ್ವಯ, ಮೃತ ಕಾಂತರಾಜು ಅವರ ಕುಟುಂಬಕ್ಕೆ ಅಪಘಾತ ವಿಮೆಯ ₹60 ಲಕ್ಷ ಹಾಗೂ ಮಕ್ಕಳ ವಿದ್ಯಾಭ್ಯಾಸ ನಿಧಿಯ ₹8 ಲಕ್ಷ ಸೇರಿ ಒಟ್ಟು ₹68 ಲಕ್ಷ ಪರಿಹಾರ ಒದಗಿಸಲಾಗಿದೆ.
ಈ ಮಹತ್ವದ ಜನಪರ ಯೋಜನೆಯನ್ನು ರೂಪಿಸಿ ಜಾರಿಗೆ ತರುವಲ್ಲಿ ಶ್ರಮಿಸಿದ ಮಾಜಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಮಾಜಿ ಅಭಿಯಾನ ನಿರ್ದೇಶಕರಾದ ಡಾ. ನವೀನ್ ಭಟ್ ವೈ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳ ಕಾರ್ಯವನ್ನು ಈ ಸಂದರ್ಭದಲ್ಲಿ ಸಂಘವು ಸ್ಮರಿಸಿತು.

ಅನುಕಂಪದ ಆಧಾರದ ನೌಕರಿಗೆ ಮನವಿ:
ಪರಿಹಾರ ಮೊತ್ತದ ಡಿಡಿ ವಿತರಣೆ ಕಾರ್ಯಕ್ರಮದ ವೇಳೆ, ಸಂಘಟನೆಯ ವತಿಯಿಂದ ಮೃತ ಕಾಂತರಾಜು ಅವರ ಕುಟುಂಬದ ಸದಸ್ಯರೊಬ್ಬರಿಗೆ ಮಾನವೀಯ ನೆಲೆಗಟ್ಟಿನಲ್ಲಿ, ಅನುಕಂಪದ ಆಧಾರದ ಮೇಲೆ ಸೂಕ್ತ ಉದ್ಯೋಗ ಕಲ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು:
ಕಾರ್ಯಕ್ರಮದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, NHM ಅಭಿಯಾನ ನಿರ್ದೇಶಕರು, ಇಲಾಖಾ ನಿರ್ದೇಶಕರು, ಮುಖ್ಯ ಆಡಳಿತ ಅಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳು ಉಪಸ್ಥಿತರಿದ್ದರು.
ಇವರೊಂದಿಗೆ KSHCOEA ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಸ್ವಾಮಿ, ಆಕ್ಸಿಸ್ ಬ್ಯಾಂಕ್ನ ಹಿರಿಯ ಅಧಿಕಾರಿಗಳು, ಮೃತ ಕಾಂತರಾಜು ಅವರ ಕುಟುಂಬಸ್ಥರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೌಕರರ ಹಿತರಕ್ಷಣೆಗೆ ಮೊದಲ ಆದ್ಯತೆ
ನೌಕರರ ಹಿತರಕ್ಷಣೆಯೇ ತಮ್ಮ ಪ್ರಥಮ ಆದ್ಯತೆ ಎಂದು KSHCOEA ರಾಜ್ಯಾಧ್ಯಕ್ಷ ಶ್ರೀಕಾಂತ್ ಸ್ವಾಮಿ ಪುನರುಚ್ಚರಿಸಿದ್ದಾರೆ. ಆ ಮೂಲಕ ಸಂಕಷ್ಟದ ಸಮಯದಲ್ಲಿ ಸಿಬ್ಬಂದಿಯ ಕುಟುಂಬದ ಬೆಂಬಲಕ್ಕೆ ನಿಲ್ಲುವ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...