ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಪ್ರವಾಹ ಪೀಡಿತ ಮಾಯಾಪುರಂ ಪ್ರದೇಶದಲ್ಲಿ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾದ ಕೆಮ್ಮಿನ ಸಿರಪ್ ಸೇವಿಸಿ ಹಲವಾರು ಮಕ್ಕಳು ತೀವ್ರ ಅಸ್ವಸ್ಥಗೊಂಡ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ವಿತರಿಸಿದ್ದ ಈ ಔಷಧಿಯ ಬಳಕೆ ಅವಧಿಯು (Expiry Date) ಜುಲೈ 2026ಕ್ಕೇ ಮುಗಿದಿತ್ತು ಎಂಬುದು ಬಹಿರಂಗವಾಗಿದೆ.
ಪ್ರವಾಹದ ಭೀತಿಯ ನಡುವೆ ಸಾಂಕ್ರಾಮಿಕ ರೋಗಗಳ ಭಯ ಎದುರಿಸುತ್ತಿರುವ ಜನರಿಗೆ, ಆರೋಗ್ಯ ಇಲಾಖೆಯಿಂದಲೇ ಈ ರೀತಿಯ ನಿರ್ಲಕ್ಷ್ಯ ಎದುರಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ಮಧ್ಯಾಹ್ನ ಸಂತ್ರಸ್ತ ಕುಟುಂಬಗಳಿಗೆ ಮದ್ದು ವಿತರಿಸಲು ಬಂದಿದ್ದ ಆರೋಗ್ಯ ತಂಡವು ಈ ಸಿರಪ್ಗಳನ್ನು ನೀಡಿತ್ತು. ಇದನ್ನು ಸೇವಿಸಿದ ನಾಲ್ಕು ವರ್ಷದ ಬಾಲಕನೊಬ್ಬ ತೀವ್ರ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದು, ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡಿದ್ದಾನೆ. ಇದೇ ರೀತಿ ಮೂರು ವರ್ಷದ ಇನ್ನಿಬ್ಬರು ಬಾಲಕರೂ ಸಹ ಔಷಧಿ ಸೇವಿಸಿ ಅಸ್ವಸ್ಥರಾಗಿದ್ದರು.
ಈ ಘಟನೆಯಿಂದ ಪ್ರದೇಶದಲ್ಲಿ ತೀವ್ರ ಆತಂಕ ಆವರಿಸಿದ್ದು, ಕೋಪಗೊಂಡ ಗ್ರಾಮಸ್ಥರು ವಿತರಿಸಲಾಗಿದ್ದ ಅವಧಿ ಮುಗಿದ ಔಷಧಿಗಳನ್ನು ಎಸೆದು ಪ್ರತಿಭಟಿಸಿದ್ದಾರೆ. ಮಂಗಳವಾರ ಮತ್ತೆ ಔಷಧಿ ವಿತರಣೆಗೆ ಬಂದ ಆರೋಗ್ಯ ತಂಡವನ್ನು ಸಂತ್ರಸ್ತರು ವಾಪಸ್ ಕಳುಹಿಸಿದ್ದು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವ ಔಷಧಿಗಳನ್ನು ನಾವು ಸ್ವೀಕರಿಸುವುದಿಲ್ಲ ಎಂದು ನಿರಾಕರಿಸಿದ್ದಾರೆ.
ತಪ್ಪಾದ ಔಷಧಿ ನೀಡಿದ್ದನ್ನು ಒಪ್ಪಿಕೊಂಡ ಆರೋಗ್ಯ ಸಿಬ್ಬಂದಿ, ಚಿಕಿತ್ಸೆಯ ವೆಚ್ಚಕ್ಕಾಗಿ 100 ರೂಪಾಯಿ ನೀಡಲು ಯತ್ನಿಸಿದರು ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ಆದರೆ ಈ ಹಣವನ್ನು ನಿರಾಕರಿಸಿದ ಕುಟುಂಬಸ್ಥರು, ಮಗುವಿನ ಜೀವಕ್ಕೆ ಅಪಾಯ ಉಂಟಾಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಪಾಂಡು ನದಿಯ ಪ್ರವಾಹದಿಂದ ಮನೆ-ಮಠ ಕಳೆದುಕೊಂಡಿರುವ ಜನರಿಗೆ ಸುರಕ್ಷಿತ ವೈದ್ಯಕೀಯ ನೆರವು ನೀಡಬೇಕಿದ್ದ ಆಡಳಿತ ಮಂಡಳಿಯ ನಿರ್ಲಕ್ಷ್ಯವು ಈಗ ಸಾರ್ವಜನಿಕರ ನಂಬಿಕೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯಾಧಿಕಾರಿ (ಸಿಎಂಒ) ಡಾ. ಹರಿಾರ್ದತ್ ನೇಮಿ, ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ತನಿಖೆಯ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.