ಬೆಂಗಳೂರು: ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಎಚ್ಚರಿಕೆಯ ಮಾತುಗಳನ್ನಾಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಬಲ ಸಮರ್ಥನೆ ನೀಡಿದ್ದಾರೆ. ಅಧಿಕಾರಿಯು ಯಾವುದೇ ತಪ್ಪು ಮಾಡಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವ ತಮ್ಮ ಕರ್ತವ್ಯವನ್ನಷ್ಟೇ ಅವರು ನಿಭಾಯಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿರುವ ಬಿಜೆಪಿ ನಾಯಕರ ನಿಲುವನ್ನು ತಳ್ಳಿಹಾಕಿದ ಅವರು, ಪೊಲೀಸರ ಭಾಷೆ ಮತ್ತು ಶೈಲಿಯಲ್ಲಿ ಏನು ಎಚ್ಚರಿಕೆ ನೀಡಬೇಕಿತ್ತೋ ಅದನ್ನೇ ಅವರು ಹೇಳಿದ್ದಾರೆ. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವುದು ಪೊಲೀಸರ ಪ್ರಮುಖ ಹೊಣೆಗಾರಿಕೆ ಎಂದರು.
ಗ್ರಾಮ ಪಂಚಾಯತ್ ಮಟ್ಟದ ರಾಜಕೀಯ ಎಂದ ಡಿಸಿಎಂ
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೋರಾಟದ ಕುರಿತು ತೀವ್ರ ವ್ಯಂಗ್ಯವಾಡಿದ ಡಿ.ಕೆ.ಶಿವಕುಮಾರ್, ಅಶೋಕ್ ಅವರು ಸಂವಿಧಾನಿಕ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರಿಂದ ಉನ್ನತ ಮಟ್ಟದ ರಾಜಕೀಯ ನಡವಳಿಕೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ದುರದೃಷ್ಟವಶಾತ್, ಅವರು ಗ್ರಾಮ ಪಂಚಾಯತ್ ಮಟ್ಟದ ಸಣ್ಣ ವಿಚಾರವನ್ನು ಹಿಡಿದುಕೊಂಡು ಬೀದಿಗಿಳಿದು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಚ್ಡಿಕೆ ಆರೋಪಕ್ಕೆ ಡೋಂಟ್ ಕೇರ್
ಇದೇ ವೇಳೆ ನೈಸ್ (NICE) ಹಾಗೂ ಬಿಡದಿ ಭೂ ಹಗರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಯಾರನ್ನೂ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಏನು ಬೇಕಾದರೂ ಮಾತನಾಡಲಿ, ಯಾವ ದಾಖಲೆಗಳನ್ನು ಬೇಕಾದರೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಕೊಳ್ಳಲಿ ಎಂದು ತಳ್ಳಿಹಾಕಿದರು.