ಬೆಂಗಳೂರು: ನಗರದಲ್ಲಿ 2026ನೇ ಸಾಲಿನ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾದ ಸೀಮಾಂತ್ ಕುಮಾರ್ ಸಿಂಗ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 163ರ ಅಡಿಯಲ್ಲಿ ಈ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಕಿಡಿಗೇಡಿಗಳ ಪುಂಡಾಟ ತಡೆಯಲು ಕ್ರಮ
ಗಣೇಶ ವಿಸರ್ಜನಾ ಮೆರವಣಿಗೆಗಳ ಸಂದರ್ಭದಲ್ಲಿ ಕೆಲವರು ಮದ್ಯ ಸೇವಿಸಿ ಅಶಾಂತಿ ಸೃಷ್ಟಿಸುವ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿರುತ್ತವೆ ಎಂದು ಪೂರ್ವ, ಉತ್ತರ ಹಾಗೂ ಈಶಾನ್ಯ ವಿಭಾಗಗಳ ಡಿಸಿಪಿಗಳು ಮತ್ತು ಗುಪ್ತವಾರ್ತಾ ವಿಭಾಗ ನೀಡಿದ ವರದಿಯ ಆಧಾರದ ಮೇಲೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದೇಶದ ಅನ್ವಯ, ಸಿಎಲ್-4 ಮತ್ತು ಸಿಎಲ್-6ಎ (ಕ್ಲಬ್ ಹಾಗೂ ಸ್ಟಾರ್ ಹೋಟೆಲ್) ಪರವಾನಗಿಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಬಾರ್ & ರೆಸ್ಟೋರೆಂಟ್ಗಳು, ವೈನ್ಶಾಪ್ಗಳು, ಪಬ್ಗಳು ಹಾಗೂ ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಪೂರೈಕೆಗೆ ಯಾವುದೇ ಅಡ್ಡಿ ಇರುವುದಿಲ್ಲ.
ವಿಭಾಗವಾರು ಮದ್ಯ ನಿಷೇಧದ ವಿವರ ಮತ್ತು ಸಮಯ:
-
ಸೆಪ್ಟೆಂಬರ್ 16 ಬೆಳಿಗ್ಗೆ 10:00 ರಿಂದ ಸೆಪ್ಟೆಂಬರ್ 17 ರ ಮುಂಜಾನೆ 1:00 ರವರೆಗೆ:
ಉತ್ತರ ಮತ್ತು ಪೂರ್ವ ವಿಭಾಗದ ಆರ್.ಟಿ.ನಗರ, ಜೆ.ಸಿ.ನಗರ, ಹೆಬ್ಬಾಳ, ಸಂಜಯನಗರ ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ.
-
ಸೆಪ್ಟೆಂಬರ್ 18 ಬೆಳಿಗ್ಗೆ 10:00 ರಿಂದ ರಾತ್ರಿ 11:59 ರವರೆಗೆ:
ಈಶಾನ್ಯ ವಿಭಾಗದ ಸಂಪಿಗೆಹಳ್ಳಿ, ಅಮೃತಹಳ್ಳಿ, ಕೊತ್ತನೂರು ಹಾಗೂ ಪೂರ್ವ ವಿಭಾಗದ ಹೆಣ್ಣೂರು, ಬಾಣಸವಾಡಿ, ಗೋವಿಂದಪುರ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಪುಲಿಕೇಶಿನಗರ, ಭಾರತಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಇಂದಿರಾನಗರ ಮತ್ತು ಹಲಸೂರು ಠಾಣಾ ವ್ಯಾಪ್ತಿ.
-
ಸೆಪ್ಟೆಂಬರ್ 19 ಬೆಳಿಗ್ಗೆ 10:00 ರಿಂದ ಸೆಪ್ಟೆಂಬರ್ 20 ರ ಮುಂಜಾನೆ 1:00 ರವರೆಗೆ:
ಉತ್ತರ ಮತ್ತು ಪೂರ್ವ ವಿಭಾಗದ ಆರ್.ಟಿ.ನಗರ, ಜೆ.ಸಿ.ನಗರ, ಹೆಬ್ಬಾಳ, ಸಂಜಯನಗರ, ಡಿ.ಜೆ.ಹಳ್ಳಿ, ಭಾರತಿನಗರ ಹಾಗೂ ಪುಲಿಕೇಶಿನಗರ ಠಾಣಾ ವ್ಯಾಪ್ತಿ.
-
ಸೆಪ್ಟೆಂಬರ್ 20 ಬೆಳಿಗ್ಗೆ 10:00 ರಿಂದ ರಾತ್ರಿ 11:59 ರವರೆಗೆ:
ಪೂರ್ವ ವಿಭಾಗದ ಪುಲಿಕೇಶಿನಗರ, ಭಾರತೀನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ ಮತ್ತು ಹಲಸೂರು ಠಾಣಾ ವ್ಯಾಪ್ತಿ.
-
ಸೆಪ್ಟೆಂಬರ್ 20 ಬೆಳಿಗ್ಗೆ 6:00 ರಿಂದ ರಾತ್ರಿ 11:59 ರವರೆಗೆ:
ಈಶಾನ್ಯ ವಿಭಾಗದ ಯಲಹಂಕ ಉಪನಗರ ಮತ್ತು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಂಭ್ರಮ್ ಕಾಲೇಜ್ ರಸ್ತೆಯಿಂದ ಎಂ.ಎಸ್.ಪಾಳ್ಯ, ಜಲ್ಲಿಮೀಷನ್ ಸರ್ಕಲ್, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ, ಅಟ್ಟೂರು ಮೈನ್ ರಸ್ತೆ, ಡೈರಿ ಸರ್ಕಲ್, 16ನೇ ಬಿ ಮೈನ್, ಚಿಕ್ಕಬೊಮ್ಮಸಂದ್ರ, ಎಲ್.ಬಿ.ಎಸ್.ನಗರ, ದೊಡ್ಡಬೊಮ್ಮಸಂದ್ರ ಹಾಗೂ ರಾಮಚಂದ್ರಾಪುರ ಪ್ರದೇಶಗಳು.
ಈ ಅವಧಿಯಲ್ಲಿ ನಿಯಮ ಮೀರಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.


