ರಾಮನಗರ: ರಾಜ್ಯಾದ್ಯಂತ ಮತ ಪಟ್ಟಿ ಪರಿಷ್ಕರಣೆ ಕಾರ್ಯ (ಎಸ್ ಐಆರ್) ಆರಂಭವಾಗಿದೆ. ಮತದಾರರು ಸ್ವಯಂಪ್ರೇರಿತರಾಗಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ರಾಮನಗರದಲ್ಲಿ ಬಿಎಲ್ಒಗಳು ಕರ್ತವ್ಯ ಲೋಪವೆಸಗುತ್ತಿದ್ದು, ಮನೆ ಮನೆಗೆ ತೆರಳಿ ಪರಿಶೀಲಿಸುವ ಬದಲು ಸಮುದಾಯ ಭವನದಲ್ಲಿ ಕುಳಿತು ಜನರನ್ನು ಕರೆಸಿ ಗಣತಿ ನಮೂನೆ ವಿತರಿಸುತ್ತಿದ್ದಾರೆ ಬೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಆರೋಪಿಸಿದ್ದು, ರಾಮನಗರದಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಲೋಪಗಳು ಕಂಡುಬಂದಿವೆ. ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಆಯೋಗದ ಗಣತಿ ನಮೂನೆಗಳನ್ನು ವಿತರಿಸುವ ಬದಲಿಗೆ, ಸಮುದಾಯ ಭವನದಲ್ಲೇ ಕುಳಿತು ವಿತರಣೆ ಮಾಡುತ್ತಿದ್ದಾರೆ. ಇದು ಮನೆ ಮನೆ ಪರಿಶೀಲನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ನಿಖಿಲ್ ಕುಮಾಅರಸ್ವಾಮಿ ಹೇಳಿಕೆ ಬೆನ್ನಲ್ಲೆ ಇನ್ನು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ರಾಮನಗರದಲ್ಲಿ ಬಿಎಲ್ಒಗಳು ಸಾವಿರಾರು ಜನರನ್ನ ಸಮುದಾಯ ಭವನದಲ್ಲೇ ಕರೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕಳ್ಳ ಮತದಾರರನ್ನ ಒಂದೇ ಕಡೆ ಕೂರಿಸಿ ಎಸ್ಐಆರ್ ಮಾಡುತ್ತಿದ್ದಾರೆ. ನಮ್ಮನ್ನ ರಾಮನಗರದಿಂದ ಹೊರಹಾಕುವ ಬಗ್ಗೆ ಮಾತಾಡಿದ್ದಾರೆ. ನಮ್ಮನ್ನ ಹೊರಹಾಕುವುದಕ್ಕೆ ಆಗಲ್ಲ. ಬೇರೆ ರಾಜ್ಯದ ಬಗ್ಗೆ ಮಾತಾಡುತ್ತಾರೆ. ಇದು ಅಧಿಕಾರಿಗಳ ವೈಪಲ್ಯ. ಸಿಎಂ ಪ್ರಭಾವ ಬೀರಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಕೂಡ ಗಮನ ಹರಿಸಬೇಕು. ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ, ಗೃಹ ಸಚಿವರ ಗಮನಕ್ಕೂ ತರುತ್ತೇನೆ ಎಂದಿದ್ದಾರೆ.