ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಮತ್ತು ‘ಗೃಹಲಕ್ಷ್ಮಿ’ ಯೋಜನೆಗಳ ಫಲಾನುಭವಿಗಳ ಪರಿಷ್ಕರಣೆಯ ಪ್ರಕ್ರಿಯೆ ಇದೀಗ ರಾಜ್ಯಾದ್ಯಂತ ತೀವ್ರ ಚರ್ಚೆ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಯೋಜನೆಗಳ ಅರ್ಹತೆಯನ್ನು ನಿರ್ಧರಿಸುವ ನೆಪದಲ್ಲಿ ಸರ್ಕಾರ ಸಂಗ್ರಹಿಸುತ್ತಿರುವ ಸೂಕ್ಷ್ಮ ಮಾಹಿತಿಗಳು, ಜನಸಾಮಾನ್ಯರಲ್ಲಿ ಆತಂಕದ ಜತೆಗೆ ಆಕ್ರೋಶವನ್ನೂ ಹುಟ್ಟುಹಾಕಿವೆ.
ಕಳೆದ ಮೂರು ವರ್ಷಗಳ ಕಾಲ ಯಾವುದೇ ಕಠಿಣ ಷರತ್ತುಗಳಿಲ್ಲದೆ ಸಾರಾಸಗಟಾಗಿ ಜಾರಿಯಲ್ಲಿದ್ದ ಯೋಜನೆಗಳಿಗೆ, ಇದ್ದಕ್ಕಿದ್ದಂತೆ ಇದೀಗ ‘ಬ್ರೇಕ್’ ಹಾಕುವ ಪ್ರಯತ್ನ ನಡೆಯುತ್ತಿದೆ. ಫಲಾನುಭವಿಗಳನ್ನು ಗುರುತಿಸುವ ನೆಪದಲ್ಲಿ ವಿದ್ಯುತ್ ಕಂಪನಿಗಳ ಸಿಬ್ಬಂದಿ ಮನೆ ಮನೆಗೆ ತೆರಳಿ ಸರ್ಕಾರಿ ನೌಕರಿ, ಖಾಸಗಿ ಉದ್ಯೋಗ, ಆದಾಯ ತೆರಿಗೆ ಪಾವತಿ ಮತ್ತು ಜಾತಿ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಆರಂಭದಲ್ಲಿ ನೀಡಿದ್ದ ಭರವಸೆಯ ಮಾತುಗಳಿಗೂ, ಈಗಿನ ಪ್ರಕ್ರಿಯೆಗೂ ವ್ಯತ್ಯಾಸವಿರುವುದು ಜನರ ಗೊಂದಲಕ್ಕೆ ಮುಖ್ಯ ಕಾರಣವಾಗಿದೆ.
ಸರ್ಕಾರವು ಅಧಿಕೃತವಾಗಿ “ಯಾವುದೇ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಿಲ್ಲ” ಎಂದು ಹೇಳುತ್ತಿದ್ದರೂ, ಮಾಹಿತಿ ಸಂಗ್ರಹಣಾ ನಮೂನೆಯಲ್ಲಿ ‘ಜಾತಿ’ ಕಾಲಂ ಅನ್ನು ಸೇರಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಾತಿ ಪ್ರಮಾಣಪತ್ರದ ಅಗತ್ಯವಿಲ್ಲದಿದ್ದ ಮೇಲೆ, ಈ ವೈಯಕ್ತಿಕ ವಿವರವನ್ನು ಸಂಗ್ರಹಿಸಿ ಸರ್ಕಾರವೇನು ಮಾಡಲಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಈ ಸೂಕ್ಷ್ಮ ಮಾಹಿತಿಗಳು ಮುಂದೆ ದುರುಪಯೋಗವಾಗಬಹುದು ಎಂಬ ಆತಂಕದಲ್ಲಿ ಜನರು ನರಳುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಆರಂಭದಲ್ಲೇ ತೆರಿಗೆ ಪಾವತಿದಾರರು ಮತ್ತು ಜಿಎಸ್ಟಿ ನೋಂದಣಿದಾರರನ್ನು ಹೊರಗಿಡುವ ಷರತ್ತು ವಿಧಿಸಲಾಗಿತ್ತು. ಆದರೆ ಗೃಹಜ್ಯೋತಿ ಯೋಜನೆಗೆ ಯಾವುದೇ ಷರತ್ತುಗಳಿರಲಿಲ್ಲ. ಈಗ ಆ ಯೋಜನೆಯಲ್ಲೂ ಅಂತಹ ಮಾಹಿತಿಗಳನ್ನು ಕೇಳುತ್ತಿರುವುದು, ಸರ್ಕಾರಿ ನೌಕರರು ಅಥವಾ ತೆರಿಗೆ ಪಾವತಿದಾರರನ್ನು ಗುರಿ ಮಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಸ್ವತಃ ಸರ್ಕಾರಿ ನೌಕರರೇ ತೆರಿಗೆದಾರರಾಗಿರುವಾಗ, ಅವರನ್ನೂ ಸೌಲಭ್ಯದಿಂದ ವಂಚಿತರನ್ನಾಗಿಸುವ ತಂತ್ರ ಇದೇನಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
2023ರ ಚುನಾವಣೆಗೂ ಮುನ್ನ “ಫ್ರೀ, ಫ್ರೀ, ಫ್ರೀ” ಎಂದು ಘೋಷಿಸಿದ್ದ ಕಾಂಗ್ರೆಸ್ ನಾಯಕರು, ಅಂದು ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದೀಗ ಸರ್ಕಾರದ ನಾಯಕತ್ವದ ಬದಲಾವಣೆಯ ಚರ್ಚೆಗಳ ನಡುವೆಯೇ ಈ ಪರಿಷ್ಕರಣೆ ನಡೆಯುತ್ತಿರುವುದು, ಯೋಜನೆಗಳನ್ನು ಹಂತ ಹಂತವಾಗಿ ಮೊಟಕುಗೊಳಿಸುವ ಅಥವಾ ಸೀಮಿತಗೊಳಿಸುವ ಹುನ್ನಾರ ಎಂಬ ಮಾತುಗಳೂ ಕೇಳಿಬರುತ್ತಿವೆ.
ಬೆಸ್ಕಾಂ ಹಾಗೂ ಇತರೆ ವಿದ್ಯುತ್ ಸರಬರಾಜು ಕಂಪನಿಗಳ ನೌಕರರು ಮಾಹಿತಿ ಸಂಗ್ರಹಕ್ಕೆ ಮನೆಗೆ ಹೋದಾಗ, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಹಲವೆಡೆ ಕಂಡುಬರುತ್ತಿವೆ. “ಮಾಹಿತಿ ನೀಡದಿದ್ದರೆ ಸೌಲಭ್ಯ ಕಡಿತವಾಗುತ್ತದೆ” ಎಂಬ ನೌಕರರ ಎಚ್ಚರಿಕೆ, ಜನಸಾಮಾನ್ಯರನ್ನು ಮತ್ತಷ್ಟು ಹತಾಶರನ್ನಾಗಿಸಿದೆ. ವಾಗ್ವಾದಕ್ಕಿಳಿಯುವ ಸಾರ್ವಜನಿಕರ ಮುಂದೆ ಅಸಹಾಯಕತೆ ತೋರುವ ಸಿಬ್ಬಂದಿಗಳು, ಕೇವಲ ಆದೇಶ ಪಾಲನೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.
ಯಾವುದೇ ಸರ್ಕಾರದ ಯೋಜನೆಗಳಲ್ಲಿ ಪಾರದರ್ಶಕತೆ ಇರಬೇಕು ಎಂಬುದು ಸತ್ಯ. ಆದರೆ, ಯೋಜನೆಗಳ ಲಾಭ ಪಡೆಯಲು ಜನರು ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಪಣಕ್ಕಿಡಬೇಕೇ ಎಂಬುದು ಮೂಲ ಪ್ರಶ್ನೆ. ಸರ್ಕಾರ ಮೊದಲೇ ಈ ನಿಯಮಗಳನ್ನು ಸ್ಪಷ್ಟಪಡಿಸಿದ್ದರೆ, ಅರ್ಹರು ಸ್ವಯಂಪ್ರೇರಿತರಾಗಿ ಸೌಲಭ್ಯಗಳನ್ನು ತ್ಯಾಗ ಮಾಡುತ್ತಿದ್ದರು. ಬದಲಿಗೆ, ಯೋಜನೆ ನೀಡುವಾಗ ಒಂದು ಮಾತು, ನಂಬಿದ ನಂತರ ಮತ್ತೊಂದು ನಿಯಮ ತರುವುದು ಜನವಿಶ್ವಾಸಕ್ಕೆ ಧಕ್ಕೆ ತರುತ್ತದೆ.
ರಾಜಕೀಯ ಲಾಭಕ್ಕಾಗಿ ಭರವಸೆಗಳನ್ನು ನೀಡಿದಾಗ ಇದ್ದ ಉತ್ಸಾಹ, ಈಗ ಆರ್ಥಿಕ ಹೊರೆಯ ನೆಪದಲ್ಲಿ ಫಲಾನುಭವಿಗಳ ಮೇಲೆ ತೂಗುಗತ್ತಿಯಾಗಿ ಪರಿಣಮಿಸಿದೆ. ಸರ್ಕಾರವು ಈ ಗೊಂದಲಗಳಿಗೆ ತೆರೆ ಎಳೆಯಲು ತಕ್ಷಣವೇ ಸ್ಪಷ್ಟನೆಯನ್ನು ನೀಡಬೇಕಿದೆ. ಜೊತೆಗೆ, ಸಂಗ್ರಹಿಸುತ್ತಿರುವ ಮಾಹಿತಿಯ ಸುರಕ್ಷತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಬೇಕಾದದ್ದು, ಅನಿವಾರ್ಯ ಜನಸಾಮಾನ್ಯರ ಅನುಮಾನಗಳನ್ನು ನಿವಾರಿಸದಿದ್ದರೆ, ಈ ಗ್ಯಾರಂಟಿ ಯೋಜನೆಗಳೇ ಸರ್ಕಾರದ ಜನಪ್ರಿಯತೆಗೆ ಮುಳುವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.