ಬೆಂಗಳೂರು: ರಾಜ್ಯದಲ್ಲಿ ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ತೊಟ್ಟಿರುವ ಸರ್ಕಾರ, ಇದೀಗ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳ ವಿರುದ್ಧ ಸಮರ ಸಾರಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಠಿಣ ಸೂಚನೆಯ ಬೆನ್ನಲ್ಲೇ, ರಾಜ್ಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ರಾಜ್ಯಾದ್ಯಂತ ಎರಡು ದಿನಗಳ ‘ಮೆಗಾ ಡ್ರೈವ್’ಗೆ ಚಾಲನೆ ನೀಡಿದೆ.
ರಾಜ್ಯದ ವಿವಿಧ ಭಾಗಗಳಲ್ಲಿರುವ ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟವಾಗುತ್ತಿರುವ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಾದರಿಗಳನ್ನು (Sಚಿmಠಿಟes) ಈಗಾಗಲೇ ಅತ್ಯಾಧುನಿಕ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪರೀಕ್ಷೆಯು ಪ್ರಮುಖವಾಗಿ ಉತ್ಪನ್ನಗಳಲ್ಲಿ ನಿಷೇಧಿತ ಅಥವಾ ಆರೋಗ್ಯಕ್ಕೆ ಹಾನಿಕರವಾದ ಅಮಲಿನ ಅಂಶಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚುವ ಗುರಿಯನ್ನು ಹೊಂದಿದೆ.
ಸರ್ಕಾರದ ಮುಂದಿನ ನಡೆ ಏನು?
ಈ ಕಾರ್ಯಾಚರಣೆಯು ಕೇವಲ ತಪಾಸಣೆಗೆ ಸೀಮಿತವಾಗಿಲ್ಲ. ಪ್ರಯೋಗಾಲಯದ ವರದಿಗಳು ನಿರ್ಣಾಯಕವಾಗಿದ್ದು, ಪರೀಕ್ಷೆಯಲ್ಲಿ ನಿಯಮಬಾಹಿರ ಅಂಶಗಳು ಪತ್ತೆಯಾದಲ್ಲಿ, ಅಂತಹ ಉತ್ಪನ್ನಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರ ಸಜ್ಜಾಗಿದೆ. ಒಂದು ವೇಳೆ ವರದಿಯಲ್ಲಿ ಅಪಾಯಕಾರಿ ಅಂಶಗಳು ದೃಢಪಟ್ಟರೆ, ರಾಜ್ಯಾದ್ಯಂತ ಈ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಯ ಮೇಲೆ ಸಂಪೂರ್ಣ ನಿಷೇಧ ಹೇರುವ ಸಾಧ್ಯತೆಯನ್ನು ಸರ್ಕಾರ ತಳ್ಳಿಹಾಕಿಲ್ಲ.
ಸರ್ಕಾರದ ಈ ದಿಢೀರ್ ನಡೆ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪಾದಕರು ಹಾಗೂ ಚಿಲ್ಲರೆ ವ್ಯಾಪಾರಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಬಹುಕಾಲದಿಂದ ರಾಜ್ಯದಲ್ಲಿ ಆರೋಗ್ಯದ ದೃಷ್ಟಿಯಿಂದ ಇಂತಹ ಉತ್ಪನ್ನಗಳ ನಿಷೇಧಕ್ಕೆ ಆಗ್ರಹ ಕೇಳಿಬರುತ್ತಿತ್ತು. ಸಾರ್ವಜನಿಕರು ಈ ಕ್ರಮವನ್ನು ಸ್ವಾಗತಿಸಿದ್ದು, ಯುವಜನತೆಯನ್ನು ಮಾದಕ ವಸ್ತುಗಳ ವ್ಯಸನದಿಂದ ದೂರವಿಡಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಂಬಾಕು ಮತ್ತು ಗುಟ್ಕಾ ಸೇವನೆಯಿಂದ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಈ ಹಿಂದೆ ಹಲವು ಬಾರಿ ಇಂತಹ ನಿಷೇಧಗಳು ನ್ಯಾಯಾಲಯದ ಮೆಟ್ಟಿಲೇರಿದ ಉದಾಹರಣೆಗಳಿವೆ. ಹೀಗಾಗಿ, ಈ ಬಾರಿ ಸರ್ಕಾರವು ತಾಂತ್ರಿಕವಾಗಿ ಮತ್ತು ಕಾನೂನುಬದ್ಧವಾಗಿ ಬಲವಾದ ಪುರಾವೆಗಳೊಂದಿಗೆ (ಪ್ರಯೋಗಾಲಯದ ವರದಿ) ಮುಂದುವರಿಯಲು ನಿರ್ಧರಿಸಿದೆ.
ಪ್ರಯೋಗಾಲಯದ ವರದಿ ಬಂದ ನಂತರವೇ ಮುಂದಿನ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ವರದಿಯು ನಕಾರಾತ್ಮಕವಾಗಿದ್ದಲ್ಲಿ, ಉತ್ಪಾದಕರ ವಿರುದ್ಧ ಕಠಿಣ ನಿಬರ್ಂಧಗಳು ಜಾರಿಯಾಗುವುದು ಖಚಿತ. ರಾಜ್ಯ ಸರ್ಕಾರದ ಈ ನಡೆ ಮಾದಕದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಎಲ್ಲರ ಚಿತ್ತ ಇದೀಗ ಪ್ರಯೋಗಾಲಯದ ವರದಿಯತ್ತ ನೆಟ್ಟಿದೆ.