ಬೆಂಗಳೂರು: ಘೋಷಿತ ಬರಪೀಡಿತ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಶಾಸಕರ ಕೇವಲ 17 ಕ್ಷೇತ್ರಗಳು ಮಾತ್ರ ಸೇರಿವೆ. ಉಳಿದವು ಎಲ್ಲಾ ಆಡಳಿತ ಪಕ್ಷದ ಶಾಸಕರದ್ದು. ಈ ಮೂಲಕ ಸರ್ಕಾರ ವಿರೋಧಪಕ್ಷಗಳನ್ನು ಗುರಿ ಮಾಡಿ ತಾರತಮ್ಯ ಮಾಡಿದೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಗುರುಮಿಠಕಲ್, ಯಾದಗಿರಿ ಕ್ಷೇತ್ರಗಳನ್ನು ಬರಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರದ ಧೋರಣೆ ಖಂಡಿಸಿ ಇಂದು ವಿಧಾನಸೌಧ ಸಮೀಪದ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಶರಣುಗೌಡ ಕಂದಕೂರ ಅವರಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಮಾಧ್ಯಮಗಳಲ್ಲಿ ಮಾತನಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಿಠಕಲ್ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದರು. ತುಂಬಾ ಹಿಂದುಳಿದ ಕ್ಷೇತ್ರ. ಅಲ್ಲಿ ತೀವ್ರವಾದ ಬರ ಇದೆ. ಆದರೆ ಇಲ್ಲಿ ಶರಣಗೌಡ ಕಂದಕೂರ ಅವರು ಈಗ ಶಾಸಕರಾಗಿದ್ದಾರೆ ಎಂಬ ಕಾರಣಕ್ಕೆ ಬರಪೀಡಿತ ತಾಲೂಕು ಘೋಷಣೆ ಮಾಡಿಲ್ಲ. ಜನತಾದಳದ ಶಾಸಕರು ಇದ್ದಾರೆ ಅಂತ ನಿಮಗೆ ಜೀವ ಕೊಟ್ಟ ಜನರ ಜೀವ ತೆಗೆಯುತ್ತಿದ್ದಾರೆ. ಶಾಸಕರು ಮೇಲೆ ಹಗೆತನ ಇದ್ದರೆ ಜೈಲಿಗೆ ಹಾಕಿ. ಅಮಾಯಕ ಜನ ಏನು ಮಾಡಿದ್ದರು ಎಂದು ಪ್ರಶ್ನಿಸಿದರು.
ಸದನ ಮೊಟಕು ಮಾಡಿದ್ದೇಕೆ?
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರ ಇದೆ. ಈ ಬಗ್ಗೆ ಚರ್ಚಿಸಲು ಅಧಿವೇಶನದಲ್ಲಿ ಅವಕಾಶ ನೀಡಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ನಾವು ಮನವಿ ಮಾಡಿದ್ದೆವು. ಆದರೆ ಕೇವಲ ಒಬ್ಬ ಭ್ರಷ್ಟ ಸಚಿವನನ್ನು ರಕ್ಷಿಸಲು ಸದನದ ಅವಧಿ ಇನ್ನೂ ಮೂರು ದಿನ ಇರುವಾಗಲೇ ಮೊಟಕು ಮಾಡಿ ಈಗ ಬರ ಚರ್ಚೆಗೆ ವಿಶೇಷ ಅಧಿವೇಶನ ಕರೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮಳೆಗಾಲದ ಅಧಿವೇಶನದಲ್ಲೇ ಬರ ಕುರಿತ ಚರ್ಚೆಗೆ ನಾವು ಮನವಿ ಮಾಡಿದ್ದೆವು. ಆಗ ನಮ್ಮ ಮನವಿಗೆ ಸರ್ಕಾರ ಕಿವಿ ಕೊಡಲಿಲ್ಲ. ಬರ ಎದುರಿಸಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದರೆ ಹಣ ಲೂಟಿಯಲ್ಲಿ ಮಾತ್ರ ತೊಡಗಿಸಿಕೊಂಡಿದೆ. ಭ್ರಷ್ಟ ಮಂತ್ರಿ ರಕ್ಷಿಸಲು ಸದನದಲ್ಲಿ ಬೇರೆ ವಿಷಯ ಚರ್ಚೆಗೆ ಸರ್ಕಾರ ತಿರಸ್ಕರಿಸಿತು. ಅವಧಿಗೂ ಮೊದಲೇ ಅಧಿವೇಶನ ಮೊಟಕು ಮಾಡಿ ಓಡಿ ಹೋದರು ಎಂದು ದೂರಿದರು.
ಬರ ವೀಕ್ಷಣೆ ಬದಲು ಸನ್ಮಾನ..
ಬಿಜೆಪಿಯಿಂದ ಆರು ತಂಡ ಮಾಡಿ ಬರ ಅಧ್ಯಯನ ನಡೆಸಿ ವರದಿ ಕೊಟ್ಟಿದ್ದೆವು. ಇನ್ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬರಗಾಲ ಇದೆ ಎಂದು ತಿಳಿಸಿದ್ದೆವು. ಆದರೆ ನಮ್ಮ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆಗಷ್ಟೇ ನೇಮಕವಾದ ಸಚಿವರನ್ನು ಜಿಲ್ಲೆಗಳಿಗೆ ಬರಪರಿಸ್ಥಿತಿ ಪರಿಶೀಲನೆಗೆ ಸರ್ಕಾರ ಕಳುಹಿಸಿತು. ಈ ಮಂತ್ರಿಗಳು ಬರದ ಅವಲೋಕನ ಮಾಡುವ ಬದಲು ಸನ್ಮಾನ ಮಾಡಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದರು ಎಂದು ದೂರಿದರು.
ಕೇವಲ ನಾಮಕಾವಾÀಸ್ತೆಗೆ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದರು. ನಮ್ಮ ಪಾದಯಾತ್ರೆ ಆರಂಭವಾದ ಮೇಲೆ ಸರ್ಕಾರಕ್ಕೆ ಬಿಸಿ ತಟ್ಟಿದೆ. ಈಗ 200 ಕ್ಷೇತ್ರಗಳು ಬರಪೀಡಿತ ಎಂದು ಘೋಷಣೆ ಮಾಡಿದರು ಎಂದು ಹೇಳಿದರು.
ಬರವಿದ್ದಾಗ ಹೆಲಿಕಾಪ್ಟರ್ ಏಕೆ?
ಜನರಿಗೆ ಶಿಕ್ಷೆ ಕೊಟ್ಟು ವಿರೋಧಪಕ್ಷಗಳನ್ನು ಗುರಿ ಮಾಡಬೇಕು ಎಂಬುದೇ ಸರ್ಕಾರದ ಉದ್ದೇಶ. ಕಾಂಗ್ರೆಸ್ ಭ್ರಷ್ಟಾಚಾರ ಬಯಲು ಮಾಡಲು ಈಗಾಗಲೇ ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ. ನಮ್ಮ ಯಾತ್ರೆಗೆ ಭಾರಿ ಸಂಖ್ಯೆಯ ಜನ ಬೆಂಬಲ ನೀಡಿದ್ದಾರೆ. ನೆರೆ ಬಂದಾಗ ವೈಮಾನಿಕ ಪರಿಶೀಲನೆ ಸರಿ ಆದರೆ ಮಳೆಯೇ ಇಲ್ಲದೆ ಇದ್ದಾಗ ಬರವಿದ್ದಾಗ ಸಿಎಂ ಹೆಲಿಕಾಪ್ಟರ್ ಏರಿದ್ದಾರೆ. ಜನರ ಜೊತೆಗೇ ಹೋಗದೆ ಜನಪರ ಸರ್ಕಾರ ಹೇಗೆ ಆಗಲು ಸಾಧ್ಯ ಎಂದರು.
ನಕಲಿ ಗಾಂಧಿಗಳ ಸೇವೆ....
ಈವರೆಗೆ ಪ್ರಜಾಸೇವೆ ಮಾಡದ ಕಾಂಗ್ರೆಸ್ ಈಗ ಪ್ರಜಾಸೇವೆ ಆರಂಭಿಸಿದೆ. ಅದಕ್ಕೊಂದು ಇಲಾಖೆ ಬೇರೆ ಇದೆಯಂತೆ. ಈವರೆಗೆ ಸೋನಿಯಾ, ಗಾಂಧಿ. ಪ್ರಿಯಾಂಕಾ ಮಂತಾದ ನಕಲಿ ಗಾಂಧಿಗಳ ಸೇವೆ ಮಾಡ್ತ ಇದ್ದರು. ಜನರ ಜೊತೆ ಚೆಲ್ಲಾಟ ಮೊದಲು ನಿಲ್ಲಿಸಿ ಎಂದು ಆಗ್ರಹಿಸಿದರು.
ಕ್ಲೀನ್ ಚಿಟ್ ಯಾವ ಫ್ಯಾಕ್ಟರಿಯಲ್ಲಿ ಸಿಗುತ್ತದೆ?..
ನಾಗೇಂದ್ರ ಅವರಿಗೆ ಕ್ಲೀನ್ಚಿಟ್ ಸಿಕ್ಕ ಮೇಲೆ ಮತ್ತೆ ಸಚಿವರಾಗಿ ಮಾಡ್ತೇವೆ ಎಂದು ಆರೋಗ್ಯ ಸಚಿವರು ಹೇಳುತ್ತಿದ್ದಾರೆ. ಹಾಗಾದರೆ ಈ ಕ್ಲೀನ್ಚಿಟ್ ಅನ್ನು ಯಾವ ಫ್ಯಾಕ್ಟರಿಯಲ್ಲಿ ತಯಾರು ಮಾಡ್ತಾ ಇದ್ದಾರೆ ಎಂದು ಕೇಳಿದರು.
ಮೂರರಿಂದ ಏಳು ಪಸೆರ್ಂಟ್ಗೆ ಎಸ್ಸಿ/ಎಸ್ ಟಿ ಮೀಸಲಾತಿಯನ್ನು ಹೆಚ್ಚಿಸಿದ್ದೆವು. ಎಸ್ಸಿಗಳಿಗೆ ಶೇ 15 ರಿಂದ ಶೇ 17ಕ್ಕೆ ಏರಿಸಿದ್ದೆವು. ಅದನ್ನು ವಾಪಸ್ ಪಡೆದು ಅನ್ಯಾಯ ಮಾಡಿದರು. ಎಲ್ಲ್ಲದರಲ್ಲೂ ಭ್ರಷ್ಟಾಚಾರ, ಮೋಸ, ವಂಚನೆ ಮಾಡ್ತಾ ಇದ್ದಾರೆ ಎಂದು ದೂರಿದರು.
ಭಿಕ್ಷುಕರ ರೀತಿ ಮಾಡಿದರು...
ಗೃಹಲಕ್ಷ್ಮಿ ಗ್ಯಾರಂಟಿಯಲ್ಲಿ ಎರಡು ಸಾವಿರವನ್ನು ಸರಿಯಾಗಿ ಕೊಡಲಿಲ್ಲ. ಮಹಿಳೆಯರನ್ನು ಅವರನ್ನು ಈ ಸರ್ಕಾರ ಭಿಕ್ಷುಕರ ರೀತಿ ಮಾಡಿತು. ಹೆಣ್ಣು ಮಕ್ಕಳು ಕಾಂಗ್ರೆಸ್ ಗುಲಾಮರಲ್ಲ. ಶಾಲಾ ಮಕ್ಕಳ ಶೂನಲ್ಲಿ ದುಡ್ಡು ಹೊಡೆದರು. ಕ್ರೈಸ್ ಸಂಸ್ಥೆ ಸಹ ಲೂಟಿ ಮಾಡುತ್ತಿದೆ. ಜನರ ಹಣ ತಿಂದು ಮುಂದಿನ ಸರ್ಕಾರ ಎನ್ಡಿಎಯದ್ದು ಎಂದು ಕಾಂಗ್ರೆಸ್ಗೆ ಅನಿಸುತ್ತಿದೆ ಎಂದರು,
ಬರ ಅವಲೋಕನ ಆಟ ಆಡುವ ರೀತಿ ಮಾಡಬೇಡಿ. ಅನ್ನದಾತರ ಶಾಪ ತಟ್ಟಿದರೆ ಈಗಾಗಲೇ ಧೂಳಿಪಠ ಆಗಿರುವ ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು. ಅಹಿಂದಾದ ಬ್ಲಾಕ್ ಮೇಲ್ ಮುಗಿದಿದೆ. ಅಧಿಕಾರಕ್ಕಾಗಿ ಅಹಿಂದ ಬಂದಿತ್ತು. ಸಿದ್ದರಾಮಯ್ಯ ಅವರನ್ನು ನಡು ನೀರಿನಲ್ಲಿ ಬಿಟ್ಟಿದ್ದಾರೆ. ಬಾಬಾ ಸಾಹೇಬರ ಹೆಸರಲ್ಲಿ ಭ್ರಷ್ಟಾಚಾರ ಮಾಡಿದ್ದೇ ಮಾಡಿದ್ದು ಎಂದರು.
ಇನ್ನಷ್ಟು ವಿಕೆಟ್ಗಳು ಹೋಗಲಿವೆ...
ಕಾಂಗ್ರೆಸ್ ಶಾಸಕರೂ ವಿರೋಧಪಕ್ಷದ ಶಾಸಕರ ರೀತಿ ಆಗಿದ್ದಾರೆ. ಅತೃಪ್ತಿ ಭುಗಿಲೆದ್ದಿದೆ. ಅವರನ್ನೂ ಮೂಲೆಗುಂಪು ಮಾಡಿದ್ದಾರೆ. ಅವರಿಗೂ ಕೋಪ, ತಾಪ ಇದೆ. ಇವರೇ ತಿಂತಾ ಇದ್ದರೆ ಅವರೂ ಸುಮ್ಮನಿರಲ್ಲ. ಯಾವಾಗ ಇವರೆಲ್ಲ ಸ್ಫೋಟ ಆಗ್ತಾರೊ ಗೊತ್ತಿಲ್ಲ. ಆಗ ಸರ್ಕಾರವೇ ಇರುವುದಿಲ್ಲವೆನೋ. ಬಿಜೆಪಿಯ ಸ್ಪಿನ್ ಬಾಲ್ಗೆ ಇನ್ನಷ್ಟು ವಿಕೆಟ್ಗಳು ಹೋಗಲಿವೆ. ಮೇನ್ ವಿಕೆಟ್ ಸಹ ಹೋಗಲಿದೆ ಎಂದರು. ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ ಮಂಡ್ಯದ ವ್ಯಕ್ತಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.