ಸಾಗರ: ನಗರಸಭೆಯ ಒಪ್ಪಂದದ ಆಧಾರದ ಪೌರಕಾರ್ಮಿಕ ನಾಗರಾಜ್ ಸಿ. ಅವರನ್ನು ಲೋಡರ್ ಸೇವೆಯಿಂದ ತೆಗೆದು ಉದ್ಯಾನವನ ನಿರ್ವಹಣೆಗೆ ನಿಯೋಜಿಸಿರುವ ಪೌರಾಡಳಿತದ ಕ್ರಮ ಖಂಡಿಸಿ ಜಿಲ್ಲಾ ರೈತ ಸಂಘದ ಆಶ್ರಯದಲ್ಲಿ ಸಾಗರ ನಗರಸಭೆಯ ಅಂಬೇಡ್ಕರ್ ಪ್ರತಿಮೆ ಎದುರು ಇಂದು ಬೃಹತ್ ಪ್ರತಿಭಟನೆ ನಡೆಸಿತು.
ಆರ್ಥಿಕ ನಷ್ಟ ಹಾಗೂ ಶಾಸಕರ ಸೂಚನೆಗೂ ಕ್ಯಾರೇ ಎನ್ನದ ಆಡಳಿತ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ನಾಗರಾಜ್ ಕಳೆದ 17 ವರ್ಷಗಳಿಂದ ನಗರಸಭೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಖಾಯಂಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎಂಟತ್ತು ತಿಂಗಳುಗಳಿಂದ ಟ್ರ್ಯಾಕ್ಟರ್ಗಳಲ್ಲಿ ಲೋಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಇದ್ದಕ್ಕಿದ್ದಂತೆ ಉದ್ಯಾನವನ ನಿರ್ವಹಣೆಗೆ ಬದಲಾಯಿಸಲಾಗಿದೆ. ಇದರಿಂದ ಅವರ ಮಾಸಿಕ ವೇತನದಲ್ಲಿ ಸುಮಾರು 4,000 ರೂಪಾಯಿ ಕಡಿತವಾಗಲಿದ್ದು, ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ ಎಂದರು.

ಈ ಅನ್ಯಾಯದ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದಾಗ, ಅವರನ್ನು ಮೂಲ ಲೋಡರ್ ಹುದ್ದೆಯಲ್ಲೇ ಮುಂದುವರಿಸುವಂತೆ ಪೌರಾಯುಕ್ತರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಆದರೆ ಪೌರಾಯುಕ್ತರು ಜನಪ್ರತಿನಿಧಿಗಳ ಆದೇಶಕ್ಕೂ ಬೆಲೆ ನೀಡುತ್ತಿಲ್ಲ. ನಾಗರಾಜ್ ಅವರಿಗೆ ಮತ್ತೆ ಲೋಡರ್ ಕೆಲಸ ನೀಡುವವರೆಗೆ ಹೋರಾಟ ವಿಶ್ರಮಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಖಾಯಂ ಪೌರಾಯುಕ್ತರ ನೇಮಕಕ್ಕೆ ಆಗ್ರಹ
ಸಂಘದ ಕಾರ್ಯಾಧ್ಯಕ್ಷ ರಮೇಶ್ ಇ. ಕೆಳದಿ ಮಾತನಾಡಿ, ಸ್ಥಳೀಯ ಆಡಳಿತ ಶೈಲಿ ತೀರಾ ಹಳಿ ತಪ್ಪಿದ್ದು, ಜನಪ್ರತಿನಿಧಿಗಳ ಸೂಚನೆಯಂತೆ ನಡೆಯುವ ತಾತ್ಕಾಲಿಕ ಅಧಿಕಾರಿಗಳನ್ನು ಪೌರಾಯುಕ್ತರನ್ನಾಗಿ ಕೂರಿಸಲಾಗಿದೆ. ತಕ್ಷಣವೇ ಸಾಗರ ನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಕ ಮಾಡಿದರೆ ಇಂತಹ ಸಮಸ್ಯೆಗಳು ಬಗೆಹರಿಯಲಿವೆ ಎಂದು ಆಗ್ರಹಿಸಿದರು.

ಒಂದು ವಾರದ ಗಡುವು ಕೋರಿದ ಪೌರಾಯುಕ್ತ
ಧರಣಿ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ನಾಗಪ್ಪ ಮಾತನಾಡಿ, ಸೇವಾ ಜೇಷ್ಠತೆಯ (ಸೀನಿಯಾರಿಟಿ) ಆಧಾರದ ಮೇಲಷ್ಟೇ ಮತ್ತೊಬ್ಬರಿಗೆ ಲೋಡರ್ ಕೆಲಸ ನೀಡಲಾಗಿದ್ದು, ಯಾವುದೇ ಅನ್ಯಾಯ ಎಸಗಿಲ್ಲ. ಆದಾಗ್ಯೂ, ಈ ವಿಷಯದ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ನಾಗರಾಜ್ ಅವರನ್ನು ಪುನಃ ಲೋಡರ್ ಹುದ್ದೆಗೆ ನೇಮಿಸಲು ಒಂದು ವಾರದ ಕಾಲಾವಕಾಶ ಕೋರಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣವೇ ಆದೇಶ ಹೊರಡಿಸುವಂತೆ ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಡಾ. ರಾಮಚಂದ್ರಪ್ಪ, ಶಿವು ಮೈಲಾರಿಕೊಪ್ಪ, ಸಂತೋಷ್ ಚಿಕ್ಕನೆಲ್ಲೂರು, ನಾಗಭೂಷಣ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.