ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಹಶೀಲ್ದಾರ್ಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮಾಡುತ್ತಿರುವ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಹಾಗೂ ಕಲ್ಪಿತ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ಮಹಿಳಾ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ಹೇಳಿದ್ದಾರೆ.
ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ 2028ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಇಂತಹ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಜನರ ಕೆಲಸ ಮಾಡಲು ಶಾಸಕರ ಸೂಚನೆ
ತಹಶೀಲ್ದಾರ್ ಅವರಿಗೆ ಪ್ರಚಾರದ ವ್ಯಾಮೋಹ ಬಿಟ್ಟು ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡಿ ಎಂದು ಶಾಸಕರು ಹಿತವಚನ ಹೇಳಿದ್ದಾರೆ. ಇದನ್ನು ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ಕಸ್ತೂರಿ ರಂಗನ್ ವರದಿ ಜಾರಿಗೆ ವಿರುದ್ಧವಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಶಾಸಕರು ಸಕ್ರಿಯವಾಗಿ ಭಾಗವಹಿಸಿದ್ದರು. ಜೊತೆಗೆ ಶಿಕ್ಷಕರ ದಿನಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದರು. ಹೀಗಿದ್ದರೂ ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರು, ಹಿಂದೆ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಪಕ್ಷದ ಮುಖಂಡರು ನಡೆಸಿದ ಗೂಂಡಾವರ್ತನೆಯನ್ನು ಬಹುಶಃ ಮರೆತಿದ್ದಾರೆ ಎಂದು ತಿರುಗೇಟು ನೀಡಿದರು.
ಶಾಸಕರಿಂದ ತಹಶೀಲ್ದಾರ್ಗೆ ಅವಮಾನವಾಗಿಲ್ಲ
ಕಾಂಗ್ರೆಸ್ ಮಹಿಳಾ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್ ಮಾತನಾಡಿ, ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ತಾಲೂಕು ಆಡಳಿತದ ಕುರಿತು ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರು ಗಮನ ಹರಿಸಲು ಸೂಚಿಸಿದ್ದಾರೆಯೇ ಹೊರತು ಅವಮಾನ ಮಾಡಿಲ್ಲ. ಬೆಂಗಳೂರಿನಿಂದ ವರ್ಗಾವಣೆಯಾಗಿ ಬಂದಿರುವ ತಹಶೀಲ್ದಾರ್ ಡಾ. ಪ್ರತಿಭಾ ಅವರಿಗೆ ಕರ್ತವ್ಯದ ಕಡೆಗೆ ಗಮನ ಕೊಡಿ ಎಂದು ತಿಳಿಸಲಾಗಿದೆ ಎಂದರು.
ಪ್ರತಿಭಟನಾ ಮನವಿ ಸ್ವೀಕರಿಸುವ ಸಂದರ್ಭದಲ್ಲಿ ಸ್ವತಃ ಡಾ. ಪ್ರತಿಭಾ ಅವರೇ ತಮಗೆ ಶಾಸಕರಿಂದ ಯಾವುದೇ ರೀತಿಯ ಅವಮಾನವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕರು ಸಣ್ಣತನದ ಪ್ರಚಾರ ಪಕ್ಕಕ್ಕಿಟ್ಟು ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡಲಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸರಸ್ವತಿ ನಾಗರಾಜ್, ಉಷಾ ಎನ್., ಮಧುಮಾಲತಿ, ಮರಿಯಾ ಲೀಮಾ, ಶಿರಿಜಾನ್, ಶ್ಯಾಮಲಾ ದೇವರಾಜ್, ಮಂಜುಳಾ ಚಂದ್ರಪ್ಪ, ಪಾರ್ವತಿ ಬೇಸೂರು, ಸಾಲಿಕಾ, ಸಬಾನಾ ಹಾಗೂ ಭವ್ಯಾ ಉಪಸ್ಥಿತರಿದ್ದರು.