ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 169 (ಚಿಕ್ಕಮಗಳೂರು-ಮಂಗಳೂರು) ರಲ್ಲಿನ ತನಿಕೋಡ್ ಚೆಕ್ ಪೋಸ್ಟ್ ಮತ್ತು ಎಸ್.ಕೆ. ಬಾರ್ಡರ್ ನಡುವಿನ ರಸ್ತೆಯ ಶಿಥಿಲಾವಸ್ಥೆಯ ಕಾರಣದಿಂದಾಗಿ, 12 ಟನ್ಗಿಂತ ಹೆಚ್ಚಿನ ತೂಕದ ಭಾರಿ ವಾಹನಗಳ ಸಂಚಾರವನ್ನು 2026ರ ಸೆಪ್ಟೆಂಬರ್ 30ರವರೆಗೆ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡಿನಿಂದ ಎಸ್.ಕೆ. ಬಾರ್ಡರ್ ವರೆಗಿನ 18 ಕಿಲೋಮೀಟರ್ ರಸ್ತೆಯಲ್ಲಿ ಸೇತುವೆಗಳು ಶಿಥಿಲಾವಸ್ಥೆ ತಲುಪಿರುವುದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ 12 ಟನ್ ಗಿಂತ ಅಧಿಕ ಬಾರದ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಬುಧವಾರ ಆದೇಶಿಸಿದ್ದಾರೆ.
ಈ ಭಾಗದಲ್ಲಿ 1950, 1960ನೇ ಸಾಲಿನಲ್ಲಿ ಕಲ್ಲಿನಿಂದ ನಿರ್ಮಿಸಿದ ಸೇತುವೆಗಳು ಶಿಥಿಲಾವಸ್ಥೆ ತಲುಪಿವೆ. ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕೊರೆತ ಉಂಟಾಗಿದ್ದು, ಕಿರಿದಾದ ರಸ್ತೆಯಾದ ಕಾರಣ ವಾಹನಗಳು ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಸೆಪ್ಟೆಂಬರ್ 30ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗ
ಚಿಕ್ಕಮಗಳೂರಿನಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು, ಮಾಗುಂಡಿ, ಕಳಸ, ಕುದುರೆಮುಖ, ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಎನ್ಆರ್ ಪುರ ಕಡೆಯಿಂದ ಬರುವ ವಾಹನಗಳು ಬಾಳೆಹೊನ್ನೂರು, ಮಾಗುಂಡಿ, ಕಳಸ, ಕುದುರೆಮುಖ, ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.
ಕೊಪ್ಪ ಕಡೆಯಿಂದ ಬರುವ ವಾಹನಗಳು ಕೊಪ್ಪ, ಜಯಪುರ, ಬಾಳೆಹೊನ್ನೂರು, ಮಾಗುಂಡಿ, ಕಳಸ, ಕುದುರೆಮುಖ, ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ತಿಳಿಸಲಾಗಿದೆ.
ಚಿತ್ರಕೃಪೆ: ಎಐ