ಹೊಸದಿಲ್ಲಿ: ದೇಶದ ಪ್ರತಿ ನಾಗರಿಕರಿಗೂ ಆಹಾರ ಭದ್ರತೆ ಒದಗಿಸುವ ಮತ್ತು ಪಡಿತರ ವಿತರಣೆ ವ್ಯವಸ್ಥೆಯಲ್ಲಿ (Ration Distribution System) ಆಮೂಲಾಗ್ರ ಬದಲಾವಣೆ ತಂದು ಅತ್ಯಂತ ಪಾರದರ್ಶಕತೆ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಪಡಿತರ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಬಲ್ಲ ಸುಧಾರಿತ ತಂತ್ರಜ್ಞಾನದ “ಸಾರ್ಥಕ್ ಪಿಡಿಎಸ್” (Sarthak PDS) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ಮಹತ್ವದ ಯೋಜನೆಗೆ ಸಮ್ಮತಿ ಸೂಚಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.ಏನಿದು ಹೊಸ ಟೆಕ್ನಾಲಜಿ? ಸಾಮಾನ್ಯ ಜನರಿಗೆ ಹಾಗೂ ರೇಷನ್ ವ್ಯವಸ್ಥೆಗೆ ಇದರಿಂದ ಏನೆಲ್ಲಾ ಲಾಭ ಇದೆ? ಮಾಹಿತಿ ಇಲ್ಲಿದೆ:
81.35 ಕೋಟಿ ಜನರಿಗೆ ಪಾರದರ್ಶಕ ರೇಷನ್ ಭಾಗ್ಯ
ಕೇಂದ್ರ ಸರ್ಕಾರವು ದೇಶದ ಜನರಿಗೆ ಸಾಮಾಜಿಕ ಮತ್ತು ಕಾನೂನು ಬದ್ಧತೆಯೊಂದಿಗೆ ಅಗತ್ಯ ಹಾಗೂ ಗುಣಮಟ್ಟದ ಆಹಾರ ಧಾನ್ಯಗಳ ಲಭ್ಯತೆಯನ್ನು ಖಚಿತಪಡಿಸಲು ಮುಂದಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ದೇಶದ ಬರೋಬ್ಬರಿ 81.35 ಕೋಟಿ ಜನರಿಗೆ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಯಾವುದೇ ವಂಚನೆ ಇಲ್ಲದೆ ಆಹಾರ ಧಾನ್ಯ ಪೂರೈಸುವ ನಿಟ್ಟಿನಲ್ಲಿ ಈ ಸಾರ್ಥಕ್ ಪಿಡಿಎಸ್ ಯೋಜನೆ ಮೈಲಿಗಲ್ಲಾಗಲಿದೆ.
₹25,530 ಕೋಟಿ ಭಾರಿ ಅನುದಾನ; 5 ವರ್ಷಗಳ ಅವಧಿ
ಬೃಹತ್ ವೆಚ್ಚ: 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಸಾರ್ಥಕ್ ಪಿಡಿಎಸ್ ಯೋಜನೆಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ಬರೋಬ್ಬರಿ ₹25,530 ಕೋಟಿ ಭಾರಿ ಅನುದಾನ ಒದಗಿಸಿ ಅನುಮೋದನೆ ನೀಡಿದೆ.
ಅವಧಿ ಫಿಕ್ಸ್: ದೇಶದ ಪಡಿತರ ವ್ಯವಸ್ಥೆಯನ್ನು ಡಿಜಿಟಲ್ ಮಯವಾಗಿಸಲಿರುವ ಈ ಸುಧಾರಿತ ತಂತ್ರಜ್ಞಾನದ ಯೋಜನೆಯು 31.03.2031 ರವರೆಗೆ ಒಟ್ಟು 5 ವರ್ಷಗಳ ಕಾಲ ಮುಂದುವರೆಯಲಿದೆ.
ಕೇಂದ್ರ ನೆರವು: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಡಿತರ ಸಾಗಣೆ, ಆಹಾರ ಧಾನ್ಯಗಳ ನಿರ್ವಹಣೆ ಹಾಗೂ ನ್ಯಾಯಬೆಲೆ ಅಂಗಡಿ (FPS) ವಿತರಕರ ಮಾರ್ಜಿನ್ಗಾಗಿ ಮಾಡುವ ವೆಚ್ಚವನ್ನು ಪೂರೈಸಲು ಇದು ಸಾರ್ಥಕ್ಯದ ಯೋಜನೆಯಾಗಿದ್ದು, ಇದರ ಮೂಲಕ ಕೇಂದ್ರ ನೆರವಿನ ಮಾನದಂಡಗಳನ್ನು ಪರಿಷ್ಕರಿಸಲಾಗುತ್ತದೆ.
ಏನಿದು ಸಾರ್ಥಕ್ ಪಿಡಿಎಸ್ ಯೋಜನೆ? ಇದು ಹೇಗೆ ಕೆಲಸ ಮಾಡುತ್ತೆ?
ಇದು ಭಾರತದ ಸಾರ್ವಜನಿಕ ಪಡಿತರ ವ್ಯವಸ್ಥೆಗೆ (PDS) ಹೊಸ ಸ್ಪರ್ಶ ನೀಡಲಿರುವ ಅತ್ಯಾಧುನಿಕ ಡಿಜಿಟಲ್ ಟೆಕ್ನಾಲಜಿ ಮತ್ತು ಸಾಫ್ಟ್’ವೇರ್ ಅಪ್ಲಿಕೇಶನ್ ಆಗಿದೆ. ಪಡಿತರ ವಿತರಣೆಯನ್ನು ಪಾರದರ್ಶಕವಾಗಿ, ಸುಲಭವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಲು ಇದನ್ನು ಬಳಸಲಾಗುತ್ತದೆ.
ಲೈವ್ ಟ್ರ್ಯಾಕಿಂಗ್ (ಅಕ್ರಮಕ್ಕೆ ಬ್ರೇಕ್): ಗೋದಾಮುಗಳು ಅಥವಾ ಮುಖ್ಯ ದಾಸ್ತಾನಿನಿಂದ ಹೊರಟ ಅಕ್ಕಿಧ್ಯಾನ್ಯಗಳು ಎಷ್ಟು? ಅದರಲ್ಲಿ ಪಡಿತರ ಅಂಗಡಿಗೆ ತಲುಪಿದ್ದು ಎಷ್ಟು? ಮತ್ತು ಅಲ್ಲಿಂದ ಜನರಿಗೆ ತಲುಪಿದ್ದೆಷ್ಟು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ತಂತ್ರಜ್ಞಾನ ನಿಖರವಾಗಿ ಟ್ರ್ಯಾಕ್ ಮಾಡಲಿದೆ. ಇದರಿಂದ ಮಧ್ಯದಲ್ಲಿ ರೇಷನ್ ಲೂಟಿ ಮಾಡುವ ಅಕ್ರಮಕೋರರಿಗೆ ನಡುಕ ಶುರುವಾಗಿದೆ.
ಬಯೋಮೆಟ್ರಿಕ್ ಮತ್ತು ಆಧಾರ್ ಲಿಂಕ್: ಪಡಿತರ ಧಾನ್ಯಗಳ ವಿತರಣೆಯಲ್ಲಿ ಯಾವುದೇ ಕಳ್ಳತನ ನಡೆಯದಂತೆ ತಡೆಯಲು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಅರ್ಹ ಫಲಾನುಭವಿಗಳಿಗೆ ಮಾತ್ರ ಪಡಿತರ ಸಿಗುವಂತೆ ಆಧಾರ್ ಲಿಂಕ್ ವ್ಯವಸ್ಥೆಯನ್ನು ಬಲಪಡಿಸಲಾಗುತ್ತದೆ.
ರೇಷನ್ ಕಾರ್ಡ್ ಸೇವೆಗಳು ಸಿಂಪಲ್: ಡಿಜಿಟಲೀಕರಣದ ಮೂಲಕ ಪಡಿತರ ಚೀಟಿ ನಿರ್ವಹಣೆ, ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಹಾಗೂ ತಿದ್ದುಪಡಿ ಪ್ರಕ್ರಿಯೆಗಳನ್ನು ಅತ್ಯಂತ ಸರಳೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಎರಡು ಯೋಜನೆಗಳನ್ನು ಸಂಯೋಜಿಸಿದ ಛತ್ರಿ ಯೋಜನೆ
ಸಚಿವ ಪ್ರಲ್ಹಾದ ಜೋಶಿ ಅವರ ಪ್ರಕಾರ, ಸಾರ್ಥಕ್ ಪಿಡಿಎಸ್ ಅನ್ನು ಎರಡು ಪ್ರಮುಖ ಯೋಜನೆಗಳನ್ನು ಸಂಯೋಜಿಸಿ ಒಂದು ಛತ್ರಿ ಯೋಜನೆಯಾಗಿ (Umbrella Scheme) ರೂಪಿಸಲಾಗಿದೆ. ಇದು ಆಯಾ ರಾಜ್ಯದೊಳಗೆ ಆಹಾರ ಧಾನ್ಯ ಸಾಗಣೆ, ರಾಜ್ಯ ಸಂಸ್ಥೆಗಳಿಗೆ ಸಹಾಯ ಮತ್ತು FPS ವಿತರಕರ ಲಾಭಾಂಶವನ್ನು ನಿಯಂತ್ರಿಸುವುದರ ಜೊತೆಗೆ, ತಂತ್ರಜ್ಞಾನದ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಆಧುನೀಕರಣ, SMART PDS ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 (NFSA) ಅನುಷ್ಠಾನವನ್ನು ಬಲಪಡಿಸಲಿದೆ.
ಜಿಪ್ ಲೈನ್: ವಿಮಾನ ಪ್ರಯಾಣಿಕರ ಸುಲಿಗೆಗೆ ಸಚಿವರ ಖಡಕ್ ವಾರ್ನಿಂಗ್
ಇದೇ ವೇಳೆ ಆನ್ಲೈನ್ ಟಿಕೆಟ್ ಬುಕಿಂಗ್ ವೇದಿಕೆಗಳು ಗ್ರಾಹಕರಿಗೆ ವಿಮಾನಯಾನ ಸಂಸ್ಥೆಗಳು ವಿಧಿಸುವುದಕ್ಕಿಂತ ದುಪ್ಪಟ್ಟು ಶುಲ್ಕ ವಿಧಿಸಿ ಸುಲಿಗೆ ಮಾಡುತ್ತಿರುವುದನ್ನು ಗ್ರಾಹಕರೊಬ್ಬರು ಬಯಲಿಗೆಳೆದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ತಕ್ಷಣವೇ ತನಿಖೆ ನಡೆಸಿ ವಂಚನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (CCPA) ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.