ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಸೈನ್ಸ್ ಬೋಧನೆ ಮಾಡಲು ಪ್ರತ್ಯೇಕ ಶಿಕ್ಷಕ ವೃಂದದ ರಚನೆಯನ್ನು ಘೋಷಿಸಿದ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಶಿಕ್ಷಣ ಇಲಾಖೆಯಲ್ಲಿ ಭರ್ತಿಯಾಗದ ಮತ್ತು ಬೋಧಕರಿಲ್ಲದ ಒಟ್ಟು 2500 ಹುದ್ದೆಗಳನ್ನು ಗುರುತಿಸಿ ಅವುಗಳನ್ನು ಕಂಪ್ಯೂಟರ್ ಸೈನ್ಸ್ ಶಿಕ್ಷಕರ ವೃಂದವಾಗಿ ರೂಪಿಸಲಾಗಿದೆ. ಈ ಹುದ್ದೆಗಳ ವೃಂದ ನೇಮಕಾತಿಗೆ ಸಂಬಂಧಿಸಿದ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗಿದ್ದು, ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಅಗತ್ಯ ವಿದ್ಯಾರ್ಹತೆ ಮಾನದಂಡಗಳನ್ನು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ಶಿಕ್ಷಣ ಇಲಾಖೆ(ಸೇವೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ, ನೇಮಕಾತಿ, ತಿದ್ದುಪಡಿ,) ನಿಯಮಗಳು 2026 ಎಂದು ನಿಯಮಗಳನ್ನು ಕರೆಯಲಾಗಿದ್ದು, ಪದವೀಧರ ಪ್ರಾಥಮಿಕ ಶಿಕ್ಷಕರ ಆರರಿಂದ ಎಂಟನೇ ತರಗತಿ ತಿದ್ದುಪಡಿಯಾಗಿ ಈ ಹೊಸ ವೃಂದದ ಶಿಕ್ಷಕರನ್ನು ಸೇರ್ಪಡೆ ಮಾಡಲಾಗಿದೆ.
ಬಿಇ, ಬಿಟೆಕ್ ಹಂತದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಈ ಶಿಕ್ಷಕ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಇದರೊಂದಿಗೆ ಪ್ರೌಢ ಶಾಲೆ ಮತ್ತು ಪಿಯುಸಿ ಹಂತದಲ್ಲಿ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿರಬೇಕು ಎಂದು ಹೇಳಲಾಗಿದೆ.
ಅಭ್ಯರ್ಥಿಗಳು ಬಿಎಸ್ಇ ಇನ್ ಕಂಪ್ಯೂಟರ್ ಸೈನ್ಸ್, ಬಿಸಿಎ, ಬಿಇ-ಸಿಎಸ್, ಬಿಟೆಕ್-ಸಿಎಸ್ ಪದವಿ ಹೊಂದಿರಬೇಕು. ಇದರೊಂದಿಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಓದಿರಬೇಕು ಎಂದು ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈ ಅಭ್ಯರ್ಥಿಗಳಿಗೆ ನೇಮಕಾತಿಗೆ ಟಿಇಟಿ ಮತ್ತು ಬಿಎಡ್ ಕಡ್ಡಾಯವಲ್ಲ ಎಂದು ಹೇಳಲಾಗಿದೆ. ಬಿಎಡ್ ಮತ್ತು ಟಿಇಟಿ ಅರ್ಹತೆ ಪಡೆಯಲು 5 ವರ್ಷಗಳ ವಿನಾಯಿತಿ ನೀಡಲಾಗಿದೆ.