ಬೆಂಗಳೂರು: ಜಾಗತಿಕ ಮಟ್ಟದ ಕೈಗಾರಿಕಾ ದೈತ್ಯ ಡಿ.ಎನ್. ಸಲ್ಯೂಷನ್ಸ್ ರಾಜ್ಯದಲ್ಲಿ ಆಗಸ್ಟ್ 26ರಿಂದ ಕಾರ್ಯಾರಂಭ ಮಾಡಲಿದ್ದು, ಮೊದಲ ಹಂತದಲ್ಲಿ 400 ಎಂಜಿನಿಯರ್ ಗಳಿಗೆ ಉದ್ಯೋಗ ಸಿಗಲಿದೆ. ಉತ್ತರ ಕರ್ನಾಟಕದ 117 ಯುವಕರಿಗೆ ಅವಕಾಶ ಸಿಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದ ನಂ.1 ಹಾಗೂ ವಿಶ್ವದ 3ನೇ ಅತಿದೊಡ್ಡ ಮೆಟಲ್-ಕಟಿಂಗ್ ಮೆಷಿನ್ ತಯಾರಿಕಾ ಸಂಸ್ಥೆಯಾದ ಡಿ.ಎನ್. ಸಲ್ಯೂಷನ್ಸ್ ನ ಭಾರತ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಯಂಗ್ಸಾಮ್ ಕಿಮ್ ಹಾಗೂ ಅವರ ತಂಡದ ಸದಸ್ಯರು ಈ ದಿನ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಮಾಡಿದರು.
ಈ ವರ್ಷದ ಫೆಬ್ರವರಿಯಿಂದ ಕರ್ನಾಟಕದಲ್ಲಿ ತನ್ನ ಮಹತ್ವಾಕಾಂಕ್ಷಿ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಆಗಸ್ಟ್ 26ಕ್ಕೆ ಉದ್ಘಾಟನೆ ನಡೆಯಲಿದ್ದು, ಈ ಸಮಾರಂಭಕ್ಕೆ ಪ್ರೀತಿ ಪೂರ್ವಕ ಆಹ್ವಾನ ನೀಡಿದ್ದಾರೆ.
ದೇವನಹಳ್ಳಿಯ ಐಟಿಐಆರ್ ಸಮೀಪ ಸುಮಾರು ₹1,000 ಕೋಟಿ ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಈ ಘಟಕಕ್ಕೆ 10 ಎಕರೆ ಜಮೀನು ನೀಡಿದ್ದು, ಮೊದಲ ಹಂತದಲ್ಲಿ 400 ಎಂಜಿನಿಯರ್ ಗಳಿಗೆ ಉದ್ಯೋಗ ದೊರೆಯಲಿದೆ. ಇದರಲ್ಲಿ ಉತ್ತರ ಕರ್ನಾಟಕದ 117ಜನರಿಗೆ ಉದ್ಯೋಗ ದೊರೆತಿದೆ. ಇವರೆಲ್ಲಾ BLDE ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ಇಂಟರ್ ವ್ಯೂನಲ್ಲಿ ಆಯ್ಕೆಯಾದವರೇ ಆಗಿದ್ದಾರೆ.
ನಮ್ಮ ಸರ್ಕಾರಕ್ಕೆ ಬಂದ ಹೂಡಿಕೆಗಳು ಕಾಗದಗಳ ಮೇಲೆ ಉಳಿಯದೆ, ಅನುಷ್ಠಾನಗೊಳ್ಳುತ್ತಾ ಉದ್ಯೋಗಗಳನ್ನು ಸೃಷ್ಟಿಸಿ ನಮ್ಮ ಯುವ ಸಮೂಹದ ಭವಿಷ್ಯವನ್ನು ರೂಪಿಸುತ್ತಿವೆ.