ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕವು ಅತ್ಯಂತ ಸವಾಲಿನ ಮುಂಗಾರು ಹಂಗಾಮನ್ನು ಎದುರಿಸುತ್ತಿದೆ. ಜೂನ್ ತಿಂಗಳಲ್ಲಿ ರಾಜ್ಯದಲ್ಲಿ 42% ಮಳೆಯ ಕೊರತೆ ದಾಖಲಾಗಿದ್ದು, ಜುಲೈ ತಿಂಗಳಲ್ಲೂ 34% ಮಳೆಯ ಕೊರತೆ ಮುಂದುವರಿದಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಈಗಾಗಲೇ ಬಿತ್ತನೆಯಾದ ಬೆಳೆಗಳಲ್ಲಿ ಸುಮಾರು 80% ಭಾಗ ಹಾನಿಗೊಳಗಾಗಿದೆ. ಜಲಾಶಯಗಳ ಒಳಹರಿವು ಹಾಗೂ ಅಂತರ್ಜಲ ಮಟ್ಟವೂ ನಿರಂತರವಾಗಿ ಕುಸಿಯುತ್ತಿದ್ದು, ಕುಡಿಯುವ ನೀರಿನ ಬಿಕ್ಕಟ್ಟಿನ ಆತಂಕವೂ ಎದುರಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಕಂದಾಯ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಪ್ರಸ್ತುತದ ವಾಸ್ತವ ಸ್ಥಿತಿಗೆ ಅನುಗುಣವಾಗಿ ಬರ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಷ್ಕರಿಸಿ, ರೈತರಿಗೆ ಪರಿಹಾರವು ತ್ವರಿತವಾಗಿ ತಲುಪುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.ಅದರಂತೆ ಅವರು ಈ ಕೆಳಗಿನ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ ಎಂದರು.
2015-16ರ ಕೃಷಿ ಜನಗಣತಿಯ ಬದಲಿಗೆ ಕರ್ನಾಟಕದ ರಿಯಲ್-ಟೈಮ್ FRUITS ಡೇಟಾಬೇಸ್ ಅನ್ನು ಬಳಸಬೇಕು. ಕೃಷಿ ಜನಗಣತಿಯ ಪ್ರಕಾರ ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣ 43.94% ಇದ್ದರೆ, FRUITS ಡೇಟಾಬೇಸ್ ಪ್ರಕಾರ ಅದು ಈಗ 83% ರಷ್ಟಿದೆ.ಬರ ನಿರ್ವಹಣಾ ಕೈಪಿಡಿ-2020 ಮತ್ತು SDRF/NDRF ಮಾರ್ಗಸೂಚಿಗಳ ನಡುವೆ ಸಮನ್ವಯ ಸಾಧಿಸಬೇಕು. ಏಕೆಂದರೆ ಪರಸ್ಪರ ಭಿನ್ನವಾಗಿರುವ ಮಾನದಂಡಗಳಿಂದ ಪರಿಹಾರ ವಿತರಣೆಯಲ್ಲಿ ವಿಳಂಬ ಅಥವಾ ನಿರಾಕರಣೆ ಎದುರಾಗುತ್ತಿದೆ.
ಒಟ್ಟು ಋತುಮಾನದ ಮಳೆಯ ಪ್ರಮಾಣವನ್ನಷ್ಟೇ ಆಧಾರವಾಗಿಸದೆ, ಬಿತ್ತನೆ ಅವಧಿಯಲ್ಲಿನ ಅಸಮರ್ಪಕ ಮಳೆ ಹಂಚಿಕೆ ಹಾಗೂ ನಿರಂತರ ಮಳೆಯ ಕೊರತೆಯನ್ನೂ ಬರ ಘೋಷಣೆಗೆ ಮಾನ್ಯ ಮಾನದಂಡಗಳಾಗಿ ಪರಿಗಣಿಸಬೇಕು.
‘ಶುಷ್ಕ ಅವಧಿ’ ಎಂಬುದರ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು. ಇದರಿಂದ ಬೆಳೆಗಳ ಮೇಲೆ ಉಂಟಾಗುವ ಪರಿಣಾಮ ಹಾಗೂ ಸ್ಥಳೀಯ ಕೃಷಿ-ಹವಾಮಾನ ಪರಿಸ್ಥಿತಿಗಳನ್ನು ಸಮರ್ಪಕವಾಗಿ ಪ್ರತಿಬಿಂಬಿಸುವ ಮೌಲ್ಯಮಾಪನ ಸಾಧ್ಯವಾಗುತ್ತದೆ.ರಾಜ್ಯ ಸರ್ಕಾರಗಳಿಗೆ ಸ್ಥಳೀಯ ಪರಿಸ್ಥಿತಿ ಮತ್ತು ವೈಜ್ಞಾನಿಕ ಸೂಚಕಗಳ ಆಧಾರದ ಮೇಲೆ ಬರ ಘೋಷಿಸಲು ಹೆಚ್ಚಿನ ಸ್ವಾಯತ್ತತೆ ನೀಡಬೇಕು.ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆಯ ಕೊರತೆ ಮತ್ತು ತಲೆದೋರಿರುವ ಕುಡಿಯುವ ನೀರಿನ ಬಿಕ್ಕಟ್ಟಿನ ಗಂಭೀರತೆಯನ್ನು ಗಮನಿಸಿ, ಪ್ರಸ್ತುತದ ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ಮಹತ್ವದ ಪ್ರಕೃತಿ ವಿಕೋಪವೆಂದು ಪರಿಗಣಿಸಿ, ಅದರ ತೀವ್ರತೆಗೆ ತಕ್ಕಂತೆ ಕೇಂದ್ರ ಸರ್ಕಾರವು ಅಗತ್ಯ ನೆರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.