ಬೆಂಗಳೂರು: 9, 10ನೇ ತರಗತಿ ಬೋಧನೆಗೆ ಪಿಯು ಉಪನ್ಯಾಸಕರ ಬಳಕೆಗೆ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರದ ಆದೇಶ ರದ್ದು ಮಾಡಡಿದ್ದರೆ ತರಗತಿ ಬಹಿಷ್ಕಾರದ ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ಸೇವಾ ನಿಯಮ ತಿದ್ದುಪಡಿಗೆ ಉಪನ್ಯಾಸಕರ ಸಂಘ ಆಗ್ರಹಿಸಿದೆ. ಆದೇಶ ಹಿಂಪಡೆಯದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಉಪನ್ಯಾಸಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿದೆ. ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಭೆಯಲ್ಲಿ ಈ ಕುರಿತಾಗಿ ಒತ್ತಾಯಿಸಲಾಗಿದ್ದು, ಸೇವಾ ನಿಯಮ ತಿದ್ದುಪಡಿ ಕರಡು ವರದಿ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.
9 ಮತ್ತು 10ನೇ ತರಗತಿ ಬೋಧನೆಗೆ ಪಿಯು ಉಪನ್ಯಾಸಕರನ್ನು ಬಳಸಬಾರದು, ನೇರ ನೇಮಕಾತಿ ಮೂಲಕ ಪ್ರೌಢಶಾಲೆ ಶಿಕ್ಷಕರ ಕೊರತೆ ನೀಗಿಸಬೇಕು. ಶಿಕ್ಷಣ ತಜ್ಞರ ಸಮಿತಿ ರಚಿಸಿ ವರದಿ ಪಡೆದ ನಂತರ ಬದಲಾವಣೆ ಮಾಡಬೇಕು. ಪಿಯು ಶಿಕ್ಷಣದ ಸ್ವಾಯುತ್ತತೆ ಮತ್ತು ಗುಣಮಟ್ಟ ಕಾಪಾಡಬೇಕು. ಯಾವುದೇ ನೀತಿ ಬದಲಾವಣೆ ಮುನ್ನ ಸಂಘದ ಜೊತೆಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸೇವಾ ನಿಯಮ ತಿದ್ದುಪಡಿಗೆ ವಿರೋಧ ವ್ಯಕ್ತವಾಗಿದೆ. 2013ರ ಸೇವಾ ನಿಯಮಗಳಿಗೆ ತಿದ್ದುಪಡಿ ಕರಡು ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಹೊಸದಾಗಿ ನೇಮಕವಾಗುವ ಪ್ರತಿಯೊಂದು ಉಪನ್ಯಾಸಕರಿಗೆ 9 ಮತ್ತು 10ನೇ ತರಗತಿಗೂ ಬೋಧನೆ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಇದು ಪಿಯು ಶಿಕ್ಷಣದ ಸ್ವರೂಪಕ್ಕೆ ವಿರುದ್ಧವಾದ ಕ್ರಮ ಎಂದು ಸಂಘ ಆರೋಪಿಸಿದೆ.
ಪಿಯು ಮತ್ತು ಪ್ರೌಢಶಾಲೆ ಶಿಕ್ಷಣದ ಪಠ್ಯಕ್ರಮ ಬೋಧನಾ ವಿಧಾನ ಬೇರೆಯಾಗಿದೆ. ಶಿಕ್ಷಕರ ಕೊರತೆ ನಿವಾರಣೆಗೆ ಉಪನ್ಯಾಸಕರ ಬಳಕೆ ಸರಿಯಲ್ಲ, ಸರ್ಕಾರಿ ಕಾಲೇಜುಗಳಿಗೆ ಮಾತ್ರ ಈ ನಿಯಮ ಅನ್ವಯಿಸುವುದು ಸಮಾನ ಶಿಕ್ಷಣ ವ್ಯವಸ್ಥೆಗೆ ವಿರುದ್ಧ ಎಂದು ಉಪನ್ಯಾಸಕರ ಸಂಘ ಹೇಳಿದೆ. ಪಿಯು ಶಿಕ್ಷಣ ವ್ಯವಸ್ಥೆ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುವ ಕರಡು ಅಧಿಸೂಚನೆಯನ್ನು ತಕ್ಷಣ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.