ಬೆಂಗಳೂರು : ಬೆಂಗಳೂರು ನಗರದ ರಸ್ತೆ, ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಪ್ರದೇಶಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ವಿರುದ್ಧ ಗ್ರೀಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ. ಗ್ರೀಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ, ಜಿಬಿಎ ಕಾಯ್ದೆ-2024ರ ಸೆಕ್ಷನ್ 324ರ ಅನ್ವಯ ಜುಲೈ 10ರಿಂದ ಐದು ನಗರ ಪಾಲಿಕೆಗಳು ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಆರಂಭಿಸಲಿದ್ದಾರೆ.
ನಗರದ ರಸ್ತೆ, ಸಾರ್ವಜನಿಕ ಸ್ಥಳಗಳು ಮತ್ತು ತೆರೆದ ಪ್ರದೇಶಗಳಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿರುವ ಅನಾಥ ವಾಹನಗಳನ್ನು ಗುರುತಿಸಿ, ನಿಯಮಾನುಸಾರ ತೆರವುಗೊಳಿಸಿ ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ವಾಹನಗಳಿಂದ ಸಂಚಾರ ದಟ್ಟಣೆ, ಸಾರ್ವಜನಿಕರಿಗೆ ತೊಂದರೆ ಹಾಗೂ ಸ್ವಚ್ಛತೆಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಯಾವ ಕ್ರಮ ಕೈಗೊಳ್ಳಲಾಗುತ್ತದೆ?
- ಗುರುತಿಸಲಾದ ಅನಾಥ ವಾಹನಗಳಿಗೆ 7 ದಿನಗಳ ಕಾಲಾವಕಾಶ ನೀಡಿ ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅಂಟಿಸಲಾಗುತ್ತದೆ.
- ನೋಟಿಸ್ ಅಂಟಿಸಿದ ವಾಹನಗಳ ಚಕ್ರಗಳಿಗೆ ವೀಲ್ ಕ್ಲ್ಯಾಂಪ್ ಅಳವಡಿಸಲಾಗುತ್ತದೆ.
- 7 ದಿನಗಳೊಳಗೆ ವಾಹನ ಮಾಲೀಕರು ವಾಹನವನ್ನು ತೆರವುಗೊಳಿಸದಿದ್ದರೆ, ಟೋಯಿಂಗ್ ಮೂಲಕ ವಾಹನವನ್ನು ಜಪ್ತಿ ಮಾಡಲಾಗುತ್ತದೆ.
- ಜಪ್ತಿ ಮಾಡಿದ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಲಾಗುತ್ತದೆ.
ಸಾರ್ವಜನಿಕರಿಗೆ ಮನವಿ
ರಸ್ತೆ, ಸಾರ್ವಜನಿಕ ಸ್ಥಳ ಅಥವಾ ಖಾಲಿ ಜಾಗಗಳಲ್ಲಿ ನಿಮ್ಮ ಯಾವುದೇ ವಾಹನವನ್ನು ದೀರ್ಘಕಾಲದಿಂದ ಬಿಟ್ಟು ಹೋಗಿದ್ದರೆ, ತಕ್ಷಣವೇ ಅದನ್ನು ನಿಮ್ಮ ಸ್ವಂತ ಜಾಗಕ್ಕೆ ಸ್ಥಳಾಂತರಿಸಿಕೊಳ್ಳುವಂತೆ ಗ್ರೀಟರ್ ಬೆಂಗಳೂರು ಪ್ರಾಧಿಕಾರ ಮನವಿ ಮಾಡಿದೆ. ಸೂಚನೆಯನ್ನು ಪಾಲಿಸದಿದ್ದರೆ ವಾಹನವನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
